ಸುದ್ದಿ ಕಣಜ.ಕಾಂ | KARNATAKA | RAILWAY NEWS
ಶಿವಮೊಗ್ಗ: ಕೋಟೆಗಂಗೂರಿನಲ್ಲಿ ರೈಲ್ವೆ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ. ಶೀಘ್ರವೇ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಆಗ ಶಿವಮೊಗ್ಗ ನಗರದಿಂದಲೇ ಕಿಸಾನ್ ರೈಲು ಆರಂಭಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿವಮೊಗ್ಗ-ರೇಣಿಗುಂಟ ಮಾರ್ಗವಾಗಿ ಚೆನ್ನೈಗೆ ವಿಶೇಷ ರೈಲು ಸೇವೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಟರ್ಮಿನಲ್ ಕಾರ್ಯಾರಂಭವಾಗಿದ್ದೇ ಕಿಸಾನ್ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಇದರಿಂದ ಮಲೆನಾಡು ಭಾಗದ ರೈತರು ತಮ್ಮ ಉತ್ಪನ್ನಗಳನ್ನು ಬೇರೆ ಬೇರೆ ಜಿಲ್ಲೆಗಳಿಗೆ ರಫ್ತು ಮಾಡಲು ಸಹಕಾರವಾಗಲಿದೆ ಎಂದು ತಿಳಿಸಿದರು.
ಚೆನ್ನೈ-ಶಿವಮೊಗ್ಗ ನಡುವೆ ಸಂಪರ್ಕ
ಶಿವಮೊಗ್ಗ ಹಾಗೂ ಚೆನ್ನೈ ನಡುವೆ ರೈಲು ಓಡಾಟದಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ನೈರುತ್ಯ ರೈಲ್ವೆಯು ಶಿವಮೊಗ್ಗದಿಂದ ವಾರಕ್ಕೆ ಎರಡು ದಿನ ರೈಲು ಸಂಚರಿಸಲಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ರಾಘವೇಂದ್ರ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ, ಸೂಡಾ ಅಧ್ಯಕ್ಷ ಎನ್.ಜೆ.ನಾಗರಾಜ್, ಜ್ಯೋತಿಪ್ರಕಾಶ್, ಚನ್ನವೀರಪ್ಪ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಎಂ.ಎಲ್.ವೈಶಾಲಿ ಇತರರು ಉಪಸ್ಥಿತರರಿದ್ದರು.