ಸುದ್ದಿ ಕಣಜ.ಕಾಂ | DISTRICT | AGRICULTURE
ಶಿವಮೊಗ್ಗ: ಬೇಸಿಗೆ ಹಂಗಾಮಿನ ಜನವರಿಯಲ್ಲಿ ಬಿತ್ತನೆ ಮಾಡಿದ ಮುಸುಕಿನ ಜೋಳದ ಬೆಳೆಯಲ್ಲಿ ಸೈನಿಕ ಹುಳುವಿನ ಬಾಧೆಯು ಸೊರಬ ತಾಲ್ಲೂಕಿನ ಜಡೆ ಹೋಬಳಿಯ ಶಕುನವಳ್ಳಿ, ತಲಗುಂದ, ಶಂಕ್ರಿಕೊಪ್ಪ ಗ್ರಾಮಗಳ ತಾಕುಗಳಲ್ಲಿ ಕಂಡುಬಂದಿದೆ.
ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಸಹ ಆವರಿಸುವ ಸಾಧ್ಯತೆ ಇರುತ್ತದೆ. ಬಾಧೆಗೊಳಗಾದ ತಾಕುಗಳಲ್ಲಿ ತಡ ಮಾಡದೆ ಕೆಳಕಂಡ ಹತೋಟಿ ಕ್ರಮ ಅನುಸರಿಸಲು ರೈತ ಬಾಂಧವರಲ್ಲಿ ವಿನಂತಿಸಿದೆ.
ಕೀಟ ಬಾಧೆಯ ಲಕ್ಷಣಗಳು
READ | ಶಿವಮೊಗ್ಗ ಡಿವೈಎಸ್ಪಿಯಾಗಿ ಬಾಲರಾಜ್ ಅಧಿಕಾರ ಸ್ವೀಕಾರ
ಸೈನಿಕ ಹುಳು (ARMY WORM-Mythimna separata) ಈ ಕೀಟವು ಸುಳಿಯಲ್ಲಿದ್ದುಕೊಂಡು ಎಲೆಗಳನ್ನು ತಿನ್ನುತ್ತದೆ ಮತ್ತು ಕೇವಲ ಎಲೆ ಮದ್ಯದ ದೇಟನ್ನು ಉಳಿಸುತ್ತದೆ. ಇದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಂಡು ಇಳುವರಿ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಹತೋಟಿ ಕ್ರಮಗಳನ್ನು ಪರಿಣಾಮಕಾರಿಯಾಗಿಸಲು ಸಾಂಘಿಕವಾಗಿ ಶೀಘ್ರವಾಗಿ ಕೈಗೊಳ್ಳುವುದು ಅವಶ್ಯಕ.
ಹತೋಟಿ ಕ್ರಮಗಳು
ಸೈನಿಕ ಹುಳುವಿನ ಹತೋಟಿಗಾಗಿ 2 ಮಿ.ಲೀ ಕ್ಲೋರ್ಪೈರಿಫಾಸ್ 20 ಇಸಿ ಅಥವಾ 0.4 ಗ್ರಾಂ ಎಮಮೆಕ್ಟಿನ್ ಬೆಂಜೋಯೇಟ್ 5% ಎಸ್ಸಿ ಅಥವಾ 0.5 ಮಿಲಿ ಥಯೋಮೆಥಾಗ್ಸಾಮ್ 12.6%+ ಲ್ಯಾಂಬ್ಡಸೈಹಲೋತ್ರಿನ್ 9.5% ಝೆಡ್ಸಿ. ಪ್ರತಿ ಲೀಟರ್ ನೀರಿಗೆ ಬೆರಸಿ ಸಂಜೆಯ ಸಮಯದಲ್ಲಿ ಸಿಂಪಡಿಸಬೇಕು. ಎಕರೆಗೆ 200-250 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ. ತೆನೆ ಬರುವ ಮೊದಲು ಇದರ ಬಾಧೆ ಕಂಡು ಬಂದಲ್ಲಿ ಎಕರೆಗೆ 5 ಕೆ.ಜಿ ಫೋರೇಟ್ ಅಥವಾ 8 ಕೆ.ಜಿ ಕಾರ್ಬೋಫ್ಯೂರಾನ್ ಹರಳನ್ನು ಮರಳಲ್ಲಿ ಬೆರೆಸಿ ಸುಳಿಗೆ ಹಾಕುವುದು.
ವಿಷ ಪಾಷಾಣವನ್ನು ಬಳಸಿ ಪರಿಣಾಮಕಾರಿ ಹತೋಟಿ ಸಾಧ್ಯ. 10 ಕೆಜಿ ಭತ್ತದ ತೌಡು, 2 ಕೆಜಿ ಬೆಲ್ಲ ಮತ್ತು ಬೇಕಾಗುವಷ್ಟು ನೀರು ಬೆರೆಸಿ ರಾತ್ರಿ ಬಿಗಿಯಾಗಿ ನೆನೆಸಿಟ್ಟು, ಬೆಳಗ್ಗೆ 100 ಗ್ರಾಂ ಥಯೋಡಿಕಾರ್ಬ್ ಅಥವಾ 250 ಮಿಲಿ ಕ್ಲೋರೋಪೈರಿಫಾಸ್ ಕೀಟನಾಶಕವನ್ನು ಬೆರೆಸಿ ಸಂಜೆ 5 ಗಂಟೆಯ ನಂತರ ಬೆಳೆಯ ಸುಳಿಯಲ್ಲಿ ಉದುರಿಸಬೇಕು.
READ | ಮೊದಲ ಸರ್ಕಾರಿ ನೌಕರರ ದಿನಾಚರಣೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ, ನೌಕರರ ಬಗ್ಗೆ ಹೇಳಿದ್ದೇನು?
ಸೈನಿಕ ಹುಳು ನಿರ್ವಹಣೆಯಲ್ಲಿ ಎಚ್ಚರಿಕೆ ಕ್ರಮಗಳು
ದಿನನಿತ್ಯ ಜಮೀನಿನ ಪರಿವೀಕ್ಷಣೆ ಅತಿ ಮುಖ್ಯ. ಗ್ರಾಮದ ರೈತರು ಸಾಮೂಹಿಕವಾಗಿ ಹತೋಟಿ ಕ್ರಮಗಳನ್ನು ಅನುಸರಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.