ಸುದ್ದಿ ಕಣಜ.ಕಾಂ | KARNATAKA | HARSHA HINDU
ಶಿವಮೊಗ್ಗ: ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಹಿಂದೂ ಹರ್ಷ(HARSHA HINDU)ನ ಹತ್ಯೆ ಪ್ರಕರಣ ಬಳಿಕ ಕುಟುಂಬಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿತ್ತು. ಅದರ ಬೆನ್ನಲ್ಲೇ ಹರ್ಷನ ಕುಟುಂಬ ತೆಗೆದುಕೊಂಡಿರುವ ನಿರ್ಣಯ ಈಗ ಮೆಚ್ಚುಗೆಗೆ ಪಾತ್ರವಾಗಿದೆ.
ವಿಶ್ವನಾಥ್ ಶೆಟ್ಟಿ ಪುತ್ರನ ಶೈಕ್ಷಣಿಕ ವೆಚ್ಚ ಭರಿಸಲು ಮುಂದಾದ ಕುಟುಂಬ
ಹರ್ಷನ ಸಹೋದರಿ ಅಶ್ವಿನಿ ಅವರು ವಿಶ್ವನಾಥ್ ಶೆಟ್ಟಿ ಅವರ ಪುತ್ರ ಯಶಸ್ ಹಾಗೂ ಆತನ ಅಜ್ಜಿಯನ್ನು ಗುರುವಾರ ಭೇಟಿ ಮಾಡಿದ್ದಾರೆ. ನಂತರ, ಯಶಸ್ ಚಿಕ್ಕಮ್ಮ ರೋಹಿಣಿ ಅವರೊಂದಿಗೆ ಚರ್ಚಿಸಿದ್ದು, ಆತನ ವಿದ್ಯಾಭ್ಯಾಸದ ಖರ್ಚು ತಮ್ಮ ಕುಟುಂಬವೇ ಭರಿಸಲಿದೆ ಎಂಬ ಭರವಸೆ ನೀಡಿದ್ದಾರೆ.
ಯಶಸ್ ಈಗ ಏಳನೇ ತರಗತಿಯಲ್ಲಿ ಓದುತಿದ್ದು, ಕೊಪ್ಪದಲ್ಲಿರುವ ಅಜ್ಜಿಯ ಮನೆಯಲ್ಲಿದ್ದಾರೆ. ಹರ್ಷನ ಹತ್ಯೆಯ ಬಳಿಕ ಆತನ ಕುಟುಂಬ ಹಲವು ಸಮಾಜಮುಖಿಯಾದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕೊಡಿಸುವ ಯೋಚನೆಯನ್ನೂ ಹೊಂದಿದೆ. ಅದರ ಭಾಗವಾಗಿಯೇ ಯಶಸ್ ಗೂ ಭೇಟಿ ಮಾಡಲಾಗಿದೆ.
ಯಾರು ಈ ವಿಶ್ವನಾಥ್ ಶೆಟ್ಟಿ
ಪಿ.ಎಫ್.ಐ ಸಮಾವೇಶದ ಅಂಗವಾಗಿ 2015ರ ಫೆಬ್ರವರಿ 19ರಂದು ಶಿವಮೊಗ್ಗದಲ್ಲಿ ಆಯೋಜಿಸಿದ್ದ ಮೆರವಣಿಗೆ ಸಂದರ್ಭದಲ್ಲಿ ಘರ್ಷಣೆ ಉಂಟಾಗಿತ್ತು. ಗಾಜನೂರು ಬಳಿ ಸ್ನೇಹಿತರೊಂದಿಗೆ ತೆರಳಿದ್ದ ವಿಶ್ವನಾಥ್ ಶೆಟ್ಟಿ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇವರ ಪುತ್ರನೇ ‘ಯಶಸ್’. ಇತ್ತೀಚೆಗೆ, ಹರ್ಷನ ಹತ್ಯೆಯಾದ ಬಳಿಕ ವಿಶ್ವನಾಥ್ ಶೆಟ್ಟಿ ಅವರ ಕುಟುಂಬದ ಸ್ಥಿತಿಯ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದನ್ನು ಕಂಡು ಹಿಂದೂಪರ ಸಂಘಟನೆ, ಸ್ವಾಮೀಜಿಗಳು ಹಾಗೂ ಜನಪ್ರತಿನಿಧಿಗಳು ವಿಶ್ವನಾಥ್ ಶೆಟ್ಟಿ ಅವರ ತಾಯಿಗೆ ಭೇಟಿ ನೀಡಿ ಸಾಂತ್ವನ ನೀಡುವುದಲ್ಲೇ ಧನ ಸಹಾಯವನ್ನು ಮಾಡಿದ್ದರು. ಈಗ ಹರ್ಷನ ಕುಟುಂಬ ಇನ್ನೊಂದು ಹೆಜ್ಜೆ ಮುಂದುವರಿದು ವಿಶ್ವನಾಥ್ ಶೆಟ್ಟಿ ಅವರ ಮಗನ ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತಿದ್ದಾರೆ.