ಸುದ್ದಿ ಕಣಜ.ಕಾಂ | KARNATAKA | SPORTS NEWS
ಶಿವಮೊಗ್ಗ: ಶಿವಮೊಗ್ಗ ವಲಯ ವ್ಯಾಪ್ತಿಯಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA)ಯು 25 ಕೋಟಿ ರೂಪಾಯಿ ವೆಚ್ಚದಲ್ಲಿ ಶಿವಮೊಗ್ಗದಲ್ಲಿ ಕ್ರೀಡಾ ಕೇಂದ್ರ ಸ್ಥಾಪನೆ ಮಾಡಲಿದೆ ಎಂದು ಎಂದು ಕೆ.ಎಸ್.ಸಿ.ಎ. ಖಜಾಂಚಿ ವಿನಯ್ ಮೃತ್ಯುಂಜಯ ಹೇಳಿದರು.
ನಗರದ ನವುಲೆಯಲ್ಲಿರುವ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಶನಿವಾರ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕ್ರಿಕೆಟ್ ಅಸೋಸಿಯೇಷನ್ 2002ರಲ್ಲಿ ಆರಂಭವಾಗಿದೆ. ಅಲ್ಲಿಂದ ಇದುವರೆಗೆ ಪ್ರತಿಭೆಗಳನ್ನು ಗುರುತಿಸುವ ಕೆಲಸ ನಿರಂತರವಾಗಿ ಮಾಡಿಕೊಂಡು ಬರಲಾಗುತಿದೆ. ಮಕ್ಕಳಲ್ಲಿರುವ ಪ್ರತಿಭೆಗೆ ವೇದಿಕೆ ನೀಡುವುದಕ್ಕಾಗಿ ಅಂಡರ್ 14, ಅಂಡರ್ 16, ಅಂಡರ್ 19 ವಯೋಮಾನದ ತಂಡಗಳನ್ನು ಮಾಡಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
READ | ಕುವೆಂಪು ವಿವಿ, ನಿಗದಿಯಾಗಿದ್ದ ಎಲ್ಲ ಸ್ನಾತಕ ಪರೀಕ್ಷೆ ಮುಂದೂಡಿಕೆ
ಕೇವಲ ರಾಜಧಾನಿಯಲ್ಲಿ ಮಾತ್ರ ಕ್ರಿಕೆಟ್ ಉತ್ತೇಜಿಸದೇ ಧಾರವಾಡ, ಮಂಗಳೂರು, ಮೈಸೂರು, ರಾಯಚೂರು, ಶಿವಮೊಗ್ಗ, ತುಮಕೂರುಗಳಲ್ಲಿ ಆರು ಹೊಸ ವಲಯಗಳನ್ನು ಆರಂಭಿಸಲಾಗಿದ್ದು, ಈ ಎಲ್ಲ ಅಕಾಡೆಮಿಗಳು ಪ್ರಶಿಕ್ಷಣಾರ್ಥಿಗಳಿಗೆ ಲಭ್ಯವಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿವೆ. ನುರಿತ ತರಬೇತುದಾರರಿದ್ದು, ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ತರಬೇತಿ ನೀಡಲಾಗುತ್ತದೆ ಎಂದರು.
ವರ್ಷ ಪೂರ್ತಿ ಕಾರ್ಯನಿರ್ವಹಿಸುವ 10 ಅಕಾಡೆಮಿ
ನಮ್ಮ ಮುಂದಿನ ಯೋಜನೆಗಳು ಸಾಕಷ್ಟಿದ್ದು, ವರ್ಷ ಪೂರ್ತಿ ಕಾರ್ಯನಿರ್ವಹಿಸುವ ಕನಿಷ್ಠ 10 ಅಕಾಡೆಮಿಗಳನ್ನು ರಾಜ್ಯದಾದ್ಯಂತ ತೆರೆಯಲಾಗುವುದು. ಶಿವಮೊಗ್ಗ, ಮೈಸೂರು ಮುಂತಾದ ಕಡೆಗಳಲ್ಲಿ ವಿಶೇಷ ಶಿಬಿರ ಆಯೋಜಿಸುವುದು. ಮಹಿಳಾ ಕ್ರಿಕೆಟ್ ಅನ್ನು ಸಹ ಅಕಾಡೆಮಿ ವ್ಯಾಪ್ತಿಗೆ ತರುವುದು. ಅಕಾಡೆಮಿಯ ಮೂಲಕ ತರಬೇತುದಾರರಿಗೆ ಆದ್ಯತೆ ನೀಡುವುದು ಎಂದು ತಿಳಿಸಿದರು.
ಕೆ.ಎಸ್.ಸಿ.ಎ ಸ್ಟೇಡಿಯಂ ನಲ್ಲಿ ನೀರು ನಿಲ್ಲದಂತೆ ಕ್ರಮ
ಸಂಚಾಲಕ ಡಿ.ಎಸ್. ಅರುಣ್ ಮಾತನಾಡಿ, ನವುಲೆಯಲ್ಲಿರುವ ಕ್ರೀಡಾಂಗಣದಲ್ಲಿ ಮಳೆಗಾಲದಲ್ಲಿ ಹೆಚ್ಚು ನೀರು ನಿಲ್ಲುತ್ತಿದ್ದು, ಕ್ರೀಡಾಂಗಣಕ್ಕೆ ಧಕ್ಕೆ ಆಗದಂತೆ ನೀರು ಸರಾಗವಾಗಿ ಹರಿದು ಹೋಗಲು ಬಸಿ ಕಾಲುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸೂಡಾ ಮತ್ತು ಪಾಲಿಕೆಯಿಂದ ಅನುಮತಿ ಪಡೆದು ನೀರು ನಿಲ್ಲದಂತೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ನವುಲೆ ಕೆರೆಯ ಹೂಳು ತೆಗೆದು ಚರಂಡಿ ನೀರು ಅದಕ್ಕೆ ಸೇರದಂತೆ ಕ್ರಮ ಕೈಗೊಳ್ಳಲು ಸ್ಮಾರ್ಟ್ ಸಿಟಿ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ. ಆ ಕಾಮಗಾರಿ ಮುಗಿದ ನಂತರ ಕೆರೆಯ ಸುತ್ತಲೂ ಸೌಂದರ್ಯೀಕರಣವನ್ನು ಕೆ.ಎಸ್.ಸಿ.ಎ. ವತಿಯಿಂದ ಮಾಡಲಾಗುವುದು
READ | ಕರ್ನಾಟಕ ಮಹಿಳಾ ಟಿ-20 ತಂಡಕ್ಕೆ ಶಿವಮೊಗ್ಗದ ಪ್ರತಿಭೆ
ಮೇ 1 ರಂದು ಬೆಳಗ್ಗೆ 9.30 ಕ್ಕೆ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಅಂಡರ್ 16 ಕ್ರೀಡಾಪಟುಗಳಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಕೆ.ಎಸ್.ಸಿ.ಎ. ಉಪಾಧ್ಯಕ್ಷ ಎಚ್.ಅಭಿರಾಮ್, ಶಿವಮೊಗ್ಗ ವಲಯದ ಅಧ್ಯಕ್ಷ ರಾಜೇಂದ್ರ ಕಾಮತ್, ಕೆ.ಎಸ್.ಸಿ.ಎ. ವಲಯ ಸಂಯೋಜಕ ಮಂಜುನಾಥ ರಾಜು, ವಲಯ ಉಸ್ತುವಾರಿ ಎನ್. ಗಿರೀಶ್ ಇದ್ದರು.