ಸುದ್ದಿ ಕಣಜ.ಕಾಂ | TALUK | CRIME NEWS
ಸೊರಬ: ತಾಲೂಕಿನ ಮನ್ಮನೆ ಗ್ರಾಮದ ನಿವಾಸಿ ಲೇಖಪ್ಪ (36) ಎಂಬುವವರ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣ ಸಂಬಂಧ ಸೋಮವಾರ ಕೃಷ್ಣಪ್ಪ(36) ಎಂಬುವವರನ್ನು ಬಂಧಿಸಲಾಗಿದೆ.
ಲೇಖಪ್ಪ ಅವರು ಏಪ್ರಿಲ್ 11ರಂದು ಜಮೀನಿಗೆ ತೆರಳಿದ್ದು ವಾಪಸ್ ಬಂದಿರಲಿಲ್ಲ. ಕುಟುಂಬದವರು ಎಲ್ಲ ಕಡೆ ಹುಡುಕಾಡಿದ ಬಳಿಕ ಏ.14ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರೂ ಇದನ್ನು ನಾಪತ್ತೆ ಪ್ರಕರಣವೆಂದೇ ಭಾವಿಸಿದ್ದರು. ಆದರೆ, ಲೇಖಪ್ಪ ಅವರ ಸಹೋದರ ನೀಡಿದ ಸುಳಿವಿನ ಆಧಾರದ ಮೇಲೆ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
READ | ಅನುಮಾನಾಸ್ಪದವಾಗಿ ಓಡಾಡುತಿದ್ದ ವ್ಯಕ್ತಿ ಅರೆಸ್ಟ್
ಕೊಲೆಗೇನು ಕಾರಣ?
ಲೇಖಪ್ಪ ಹಾಗೂ ಕೃಷ್ಣಪ್ಪ ಅವರ ನಡುವೆ ರಾಜಕೀಯ ವಿಚಾರಕ್ಕಾಗಿ ಮುಂಚೆಯಿಂದಲೂ ದ್ವೇಷವಿತ್ತು. ಇದರೊಂದಿಗೆ ಮಹಿಳೆಯೊಬ್ಬಳ ವಿಚಾರವಾಗಿ ಇಬ್ಬರ ನಡುವೆ ವೈಷಮ್ಯ ಇನ್ನಷ್ಟು ಹೆಚ್ಚಾಗಿದೆ. ಕೃಷ್ಣಪ್ಪ ಅತ್ಯಂತ ಸಲುಗೆಯಿಂದ ವರ್ತಿಸುತಿದ್ದ ಮಹಿಳೆಯ ಜತೆಗೆ ಲೇಖಪ್ಪ ಕೂಡ ಆತ್ಮೀಯವಾಗುತಿದ್ದ.
ಕೊಲೆ ನಡೆದಿದ್ದು ಹೇಗೆ?
ಏಪ್ರಿಲ್ 11ರಂದು ಲೇಖಪ್ಪನನ್ನು ಹುಡುಗಿ ತೋರಿಸುವುದಾಗಿ ನಂಬಿಸಿ ಕೃಷ್ಣಪ್ಪ ಕರೆಸಿಕೊಂಡಿದ್ದ. ಮನೆಗೆ ಬಂದಾಗ ಟವಲ್ ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ, ಅದೇ ದಿನ ಸಂಜೆ ಗೋಣಿ ಚೀಲದಲ್ಲಿ ಮೃತದೇಹವನ್ನು ತುಂಬಿ ಸೊರಬ ತಾಲೂಕಿನ ಕಡಸೂರು ಗ್ರಾಮದ ಹೊಳೆಗೆ ಎಸೆದು ಪರಾರಿಯಾಗಿದ್ದಾನೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.