ಸುದ್ದಿ ಕಣಜ.ಕಾಂ | DISTRICT | BASAVA JAYANTHI
ಶಿವಮೊಗ್ಗ: ಎಲ್ಲ ವೀರಶೈವ ಲಿಂಗಾಯತ ಸಮಾಜದವರು ಸೇರಿ ಬಸವ ಜಯಂತಿ ಆಚರಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಸಲಹೆ ನೀಡಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಭೇದಗಳನ್ನು ಮರೆತು ಎಲ್ಲರೂ ಸೇರಿ ಜಯಂತಿಯನ್ನು ಆಚರಿಸಬೇಕು. ಬರುವ ವರ್ಷವಾದರೂ ಈ ಕೆಲಸವನ್ನು ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
12ನೇ ಶತಮಾನದಲ್ಲಿ ಬಸವಣ್ಣನವರ ವಚನಗಳ ಮೂಲಕ ದೊಡ್ಡ ಕ್ರಾಂತಿಯನ್ನೇ ಎಬ್ಬಿಸಿದರು. ‘ಕಾಯಕವೇ ಕೈಲಾಸ’ವೆಂಬ ವಚನ ಜಗತ್ತನ್ನೇ ಬೆರಗಾಗುವಂತೆ ಮಾಡಿದೆ. ಇಂತಹ ಮಹಾಪುರುಷನ ಜಯಂತಿಯನ್ನು ಭೇದವಿಲ್ಲದೇ ಆಚರಿಸಬೇಕು. ಜತೆಗೆ, ಬಸವೇಶ್ವರರ ವಚನಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕು. ಆಗ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು ಎಂದರು.
READ | ರಾಜ್ಯ ರಾಜಕಾರಣ ನಾಯಕತ್ವ ಬದಲಾವಣೆ ಬಗ್ಗೆ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರ ಅವಧಿದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿದರು. ಅನುಭವ ಮಂಟಪಕ್ಕೆ 500 ಕೋಟಿ ರೂ. ಮಂಜೂರು ಮಾಡಿದರು ಎಂದರು.
ದಾರ್ಶನಿಕರನ್ನು ಜಾತಿಗೆ ಸೀಮಿತ ಮಾಡಬೇಡಿ
ದಾರ್ಶನಿಕರನ್ನು ಯಾವುದೇ ಕಾರಣಕ್ಕೂ ಒಂದು ಜಾತಿಗೆ ಸೀಮಿತಗೊಳಿಸಬಾರದು. ಆದರೀಗ, ಆಯಾ ಜಾತಿಯವರು ಮಾತ್ರ ಜಯಂತಿಗಳನ್ನು ಆಚರಿಸುತ್ತಿರುವುದು ಆಘಾತಕರ ವಿಚಾರ ಎಂದರು.
ಬಸವ ಜಯಂತಿ ಆತ್ಮವಿಮರ್ಶೆಯ ದಿನ
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಬಸವ ಜಯಂತಿ ಆತ್ಮವಿಮರ್ಶೆಯ ದಿನವಾಗಿದೆ. ಬಸವಣ್ಣನವರ ವಚನಗಳನ್ನು ಕೇಳಿದಾಗ ರೋಮಾಂಚನವಾಗುತ್ತದೆ. ಬದುಕಿನ ದಾರಿಯನ್ನೇ ಬದಲಿಸಬಲ್ಲ ಶಕ್ತಿ ವಚನಗಳಿಗೆ ಇದೆ ಎಂದರು.
ಬೆಕ್ಕಿನಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ಚನ್ನಬಸಪ್ಪ, ಎಸ್.ದತ್ತಾತ್ರಿ, ಎಚ್.ಸಿ.ಯೋಗೇಶ್, ಅನಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.