ಸುದ್ದಿ ಕಣಜ.ಕಾಂ | DISTRICT | SHIVAMOGGA RAIN
ಶಿವಮೊಗ್ಗ: ನಗರದಲ್ಲಿ ವರುಣನ ಆರ್ಭಟ ಜೋರಾಗಿದ್ದು, ವಿದ್ಯಾನಗರದ 13ನೇ ಅಡ್ಡ ರಸ್ತೆಯಲ್ಲಿ ಮನೆಗಳಿಗೆ ನೀರು ನುಗ್ಗಿವೆ. ಅವರನ್ನು ಅಲ್ಲಿ ವಾಸವಿರುವವರನ್ನು ರಕ್ಷಿಸಿ ಬೇರೆಯ ಕಡೆಗೆ ಸಾಗಿಸಲಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯು ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ವಿದ್ಯಾನಗರದಲ್ಲಿ ಬಾಣಂತಿ ನಾಗವೇಣಿ ಮತ್ತು ಮಗುವನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಆರ್.ಎಂ.ಎಲ್.ನಗರದಲ್ಲಿ 93 ವರ್ಷದ ವೃದ್ಧನನ್ನು ನೆಲಮಹಡಿಯಿಂದ ಮೊದಲನೇ ಮಹಡಿಗೆ ಶಿಫ್ಟ್ ಮಾಡಲಾಯಿತು.
ಮಳೆ ಅನಾಹುತ ಸೃಷ್ಟಿಸಿದ ಪ್ರವಾಹ (VIDEO REPORT)
ಎಲ್ಲೆಲ್ಲಿ ಅನಾಹುತ?
ವೆಂಕಟೇಶ ನಗರ, ಹೊಸಮನೆ, ಗಾಂಧಿನಗರ, ರವೀಂದ್ರ ನಗರ, ಬಾಪೂಜಿನಗರ, ಅಂಗಳಯ್ಯನಕೆರೆ, ವಿದ್ಯಾನಗರ, ಎಲ್.ಬಿ.ಎಸ್.ನಗರ, ಗಂಧರ್ವನಗರ, ಎಲ್.ಬಿ.ಎಸ್.ನಗರ, ವಾದಿ ಎ ಹುದಾ, ತುಂಗಾನಗರ, ಗೋಪಾಳ, ಮಿಳಘಟ್ಟ, ನ್ಯೂಮಂಡ್ಲಿ, ಮಂಜುನಾಥ್ ಬಡಾವಣೆ, ಅಣ್ಣಾನಗರ ಸೇರಿದಂತೆ ನಗರದ ಹಲವೆಡೆ ಮಳೆ ನೀರುನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
READ | ಮಳೆ ಅವಘಡ, ಜಿಲ್ಲೆಯಲ್ಲಿ ಕಂಟ್ರೋಲ್ ರೂಂ ಸ್ಥಾಪನೆ, ಸಮಸ್ಯೆಯಾದರೆ ಕರೆ ಮಾಡಿ
ತುಂಬಿದ ಜಲಮೂಲಗಳು, ತುಂಗೆಯ ಆರ್ಭಟ
ಧಾರಾಕಾರ ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ಶಿವಮೊಗ್ಗ ನಗರದ ಮಧ್ಯಭಾಗದಲ್ಲಿ ಹಾದು ಹೋಗುವ ತುಂಗಾ ಎಡದಂಡೆ ಚಾನಲ್ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಚಾನಲ್ ಪಕ್ಕದ ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಅಕ್ಕಪಕ್ಕದ ಪ್ರದೇಶಗಳಲ್ಲೂ ಸಂಪೂರ್ಣ ಜಲಾವೃತವಾಗಿವೆ. ತುಂಗೆಯ ಆರ್ಭಟವೂ ಜೋರಾಗಿದ್ದು, ಮಳೆ ಇದೇ ರೀತಿ ಮುಂದುವರಿದರೆ ಇನ್ನಷ್ಟು ಅನಾಹುತಗಳಾಗುವ ಸಾಧ್ಯತೆ ಇದೆ.
ರಾಜಕಾಲುವೆ ಮೇಲಿಂದ ಹರಿಯುತ್ತಿರುವ ನೀರು
ರಾಜಕಾಲುವೆಗಳು ತುಂಬಿ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ವಿನೋಬನಗರದ 60 ಅಡಿ ರಸ್ತೆಯ ಶುಭಮಂಗಳ ಸಮುದಾಯ ಭವನದ ಬಳಿ ಚರಂಡಿಯಲ್ಲಿ ನೀರು ಹರಿಯದೇ ನೂತನವಾಗಿ ನಿರ್ಮಿಸಿರುವ ರಸ್ತೆಯಲ್ಲಿಯೇ ಹರಿಯುತ್ತಿದೆ. ಇದೇ ರಸ್ತೆಯಲ್ಲಿರುವ ಚಾನಲ್ ಸೇತುವೆ ಮೇಲೂ ಮಳೆಯ ನೀರು ಹರಿಯುತ್ತಿದೆ.
ಇತ್ತೀಚೆಗಷ್ಟೇ ಕಟ್ಟಡ ಕುಸಿಯುವ ಭೀತಿಯಿಂದ ಹೊಸ ಕಟ್ಟಡ ಕಟ್ಟಿಸಿಕೊಡಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದ ನ್ಯೂ ಮಂಡ್ಲಿಯ ಸರ್ಕಾರಿ ಶಾಲೆಯ ಆವರಣ ಸಂಪೂರ್ಣ ಜಲಾವೃತಗೊಂಡಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರಿನ ರಸ್ತೆಯಲ್ಲಿ ಮೂರು ಅಡಿಗಳಷ್ಟು ನೀರು ನಿಂತಿದೆ. ಯಾವುದೇ ಬಡಾವಣೆಗಳ ನೀರು ಚರಂಡಿಗಳ ಮೂಲಕ ಸರಾಗವಾಗಿ ಹರಿಯದೇ ರಸ್ತೆಗಳ ಮೂಲಕವೇ ಕೊಳಚೆಯನ್ನು ಸೇರಿಸಿಕೊಂಡು ಹರಿಯುತ್ತಿದೆ.
ಶಾಸಕ ಈಶ್ವರಪ್ಪ ನಗರ ಸಂಚಾರ
ಶಾಸಕ ಕೆ.ಎಸ್. ಈಶ್ವರಪ್ಪ ಅವರು ಪ್ರವಾಹಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
https://suddikanaja.com/2022/05/19/heavy-rainfall-in-shivamogga-rescue-operation-by-fire-brigade/