ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇರುವುದರಿಂದ ಅನಾಹುತಗಳಾದರೆ ತಕ್ಷಣ ಕ್ರಮಕೈಗೊಳ್ಳಲು ಅನುಕೂಲ ದೃಷ್ಟಿಯಿಂದ ಶನಿವಾರ, ಭಾನುವಾರ ರಜೆ ಎಂದು ತಿಳಿಯದೆ, ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ತಾಲ್ಲೂಕುಗಳ ತಹಸೀಲ್ದಾರರು, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಳೆ ಹಾನಿ ನಿರ್ವಹಣೆ ಕುರಿತು ಅಗತ್ಯ ಸೂಚನೆಗಳನ್ನು ನೀಡಿದರು.
ಅಧಿಕಾರಿಗಳು ಕ್ಷೇತ್ರದಲ್ಲಿ ಸತತವಾಗಿ ಓಡಾಡುತ್ತಾ ಮಳೆಯಿಂದ ಯಾವುದೇ ರೀತಿಯಲ್ಲಿ ಆಗಬಹುದಾದ ಹಾನಿ ಎದುರಿಸಲು ಕ್ರಮ ವಹಿಸಬೇಕು. ಇನ್ನೊಂದು ದಿನ ಹೆಚ್ಚು ಮಳೆಯಾಗುವ ಸಂಭವ ಇದೆ. ಆದ್ದರಿಂದ ಅಧಿಕಾರಿಗಳು ತಂಡದಲ್ಲಿ ಕೆಲಸ ಮಾಡಬೇಕು. ಕೇಂದ್ರ ಸ್ಥಾನದಲ್ಲಿದ್ದು ಮಳೆಯಿಂದ ಆಗಬಹುದಾದ ಹಾನಿಯನ್ನು ಎದುರಿಸಲು ಯುದ್ದೋಪಾದಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ನಿರ್ದೇಶನ ನೀಡಿದರು.
READ | ಶಿವಮೊಗ್ಗದ ಎಲ್ಲ ಹೈಟೆಕ್ ಹೋಟೆಲ್, ಲಾಡ್ಜ್, ಮಾಲ್ ಗಳು ಮೇಲೆ ಖಾಕಿ ಕಣ್ಣು, ಕಾರಣವೇನು?
ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್
- ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ಮನೆ ಹಾನಿಗೊಳಗಾದವರಿಗೆ ತಕ್ಷಣಕ್ಕೆ ₹10 ಸಾವಿರ ಪರಿಹಾರ ನೀಡಬೇಕು. ಉಳಿದಂತೆ ಮನೆ, ಜನ-ಜಾನುವಾರು ಹಾನಿಗೊಳಗಾದವರಿಗೆ ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ಪರಿಹಾರ ಕ್ರಮ ಕೈಗೊಳ್ಳಬೇಕು. ಬೆಳೆ ಹಾನಿಯಾದಲ್ಲಿ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ವರದಿ ಪಡೆದು ಕ್ರಮ ವಹಿಸಬೇಕು.
- ಎಲ್ಲ ತಾಲ್ಲೂಕುಗಳಲ್ಲಿ ಮಳೆ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿ ನಿರ್ವಹಿಸಬೇಕು. ಅಗತ್ಯ ಕಂಡುಬಂದ ಪ್ರದೇಶಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಎಲ್ಲ ತಯಾರಿ ಮಾಡಿಕೊಳ್ಳಬೇಕು.
- ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲ ಚರಂಡಿಗಳು, ರಾಜಾ ಕಾಲುವೆಗಳ ಸ್ವಚ್ಚತೆ ಮಾಡಿಸಬೇಕು. ಹೂಳಿದ್ದಲ್ಲಿ ತಕ್ಷಣ ತೆರವುಗೊಳಿಸಬೇಕು. ಮನೆಗಳಿಗೆ ನೀರು ನುಗ್ಗದಂತೆ ಕ್ರಮ ವಹಿಸಬೇಕು.
- ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ರಸ್ತೆ ಸಂಪರ್ಕಗಳು ಕಡಿತವಾದಲ್ಲಿ ಪರ್ಯಾಯ ಮಾರ್ಗ ವ್ಯವಸ್ಥೆಗೆ ತಕ್ಷಣ ಪ್ರಸ್ತಾವನೆ ನೀಡಬೇಕು. ಎಲ್ಲಿಯಾದರೂ ಭೂಕುಸಿತವಾದಲ್ಲಿ ತಕ್ಷಣ ಕ್ರಮ ವಹಿಸಬೇಕು.
- ತೀರ್ಥಹಳ್ಳಿ ಆಗುಂಬೆ ಘಾಟಿ ಮತ್ತು ಹೊಸನಗರ ಹುಲಿಕಲ್ ಘಾಟಿಗಳಲ್ಲಿ ದೊಡ್ಡ ವಾಹನ ಸಂಚಾರ ಕುರಿತು ಎಸಿ ಅವರು ಪರಿಶೀಲಿಸಬೇಕು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಎಸಿ ಪ್ರಕಾಶ್, ಶಿವಮೊಗ್ಗ ತಹಸೀಲ್ದಾರ್ ಡಾ.ನಾಗರಾಜ್, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
https://suddikanaja.com/2021/01/25/dial-112-launched-by-shivamogga-police-department/