ಸುದ್ದಿ ಕಣಜ.ಕಾಂ | DISTRICT | KASTURIRANGAN REPORT
ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಮಲೆನಾಡಿನ ರೈತರ ಪಾಲಿಗೆ ಕಂಟಕವಾಗಿದೆ ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ.ರಮೇಶ್ ಹಗ್ಡೆ ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಅರಣ್ಯ ಸಚಿವರು ಮಲೆನಾಡಿನ ಸುಮಾರು 10 ಜಿಲ್ಲೆಗಳನ್ನೊಳಗೊಂಡ 26 ಸಾವಿರಕ್ಕೂ ಹೆಚ್ಚು ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಿದೆ.
ಜಿಲ್ಲೆಯಲ್ಲಿ ಸುಮಾರು 475 ಗ್ರಾಮಗಳಿಗೆ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗುತ್ತದೆ. ಆ ಭಾಗದ ಜನರಿಗೆ ಯಾವ ಮೂಲ ಸೌಲಭ್ಯಗಳು ಸಿಗುವುದಿಲ್ಲ. ಪರಿಸರ ಇಲಾಖೆಯ ಒಪ್ಪಿಗೆ ಪಡೆಯಲಾಗುವುದಿಲ್ಲ. ಹಾಗಾಗಿ, ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ನಿಂತು ಹೋಗುತ್ತವೆ. ಅಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ಇದರಲ್ಲಿ ಅಡಗಿದೆ. ಕೆಲವು ಪರಿಸರವಾದಿಗಳು ಕೂಡ ಇದರ ಪರವಾಗಿದ್ದಾರೆ. ಅವರಿಗೆ ಅಲ್ಲಿನ ಅರಣ್ಯ ನಿವಾಸಿಗಳ ಜನರ ಬದುಕಿನ ಕಷ್ಟ ಗೊತ್ತಿಲ್ಲ. ನೆಮ್ಮದಿ ಕಸಿದುಕೊಳ್ಳುವ ಇಂತಹ ಸೂಕ್ಷ್ಮ ಪ್ರದೇಶಗಳು ಬೇಕಾಗಿಲ್ಲ. ಆ ಭಾಗದ ಜನರ ಜೀವ ಮತ್ತು ಜೀವನ ಈ ಕರಾಳ ಶಾಸನ ಕುತ್ತಿಗೆ ಬಿಗಿಯುವಲ್ಲಿ ಸಹಕಾರಿಯಾಗುತ್ತದೆ ಎಂದು ಆರೋಪಿಸಿದರು.
ಮಲೆನಾಡು ಭಾಗದ ಶಾಸಕರು ಮತ್ತು ಸಂಸದರು ಕೇಂದ್ರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ. ಚುನಾವಣೆ ನೀಡಿದ ಆಶ್ವಾಸನೆಗಳು ಸುಳ್ಳಾಗಿವೆ.
ಕೂಡಲೇ ಇವರೆಲ್ಲ ರಾಜೀನಾಮೆ ನೀಡಬೇಕು.
–ಬಿ.ಎ.ರಮೇಶ್ ಹೆಗಡೆ, ಅಧ್ಯಕ್ಷರು, ಜಿಲ್ಲಾ ಅಡಿಕೆ ಬೆಳೆಗಾರರ ಸಂಘ
2014 ರಿಂದಲೇ ಬಿಜೆಪಿ ಸರ್ಕಾರ ಪಶ್ಚಿಮಘಟ್ಟ ಪ್ರದೇಶದಲ್ಲಿ ಈ ಕಾಯ್ದೆ ಜಾರಿಗೊಳಿಸುವ ಬಗ್ಗೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿತ್ತು. 2015 ರಿಂದ 2022 ರ ವರೆಗೆ 4 ಬಾರಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಇದೆಲ್ಲವೂ ಕರ್ನಾಟಕ ಸರ್ಕಾರಕ್ಕೆ ಗೊತ್ತಿದೆ. ಅಡಿಕೆ ಬೆಳೆಗಾರರ ಪರವಾಗಿ ಮಾತನಾಡುವ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಮಲೆನಾಡು ಭಾಗದ ರೈತರ ಪರವಾಗಿ ಇಲ್ಲ. ಕಸ್ತೂರಿ ರಂಗನ್ ವರದಿ ಜಾರಿಗೆ ಅವರದ್ದೂ ಪಾತ್ರವಿದೆ ಎಂದು ದೂರಿದರು.
READ | ಕೆಲ ಸೆಕೆಂಡ್ಗಳಲ್ಲಿ ಮರ್ಡರ್, ಹಂದಿ ಅಣ್ಣಿ ಕೊಲೆಯ ಬಗ್ಗೆ ತಿಳಿಯಲೇಬೇಕಾದ ವಿಷಯಗಳಿವು
ಈಗಾಗಲೇ ಪರಿಸರ ಸಂರಕ್ಷಣೆಗೆ ಹಲವು ಕಾಯ್ದೆಗಳಿವೆ. ಆ ಕಾಯ್ದೆಯ ಅನ್ವಯವೇ ಮಲೆನಾಡು ಭಾಗದ ಅರಣ್ಯ ಉಳಿಸಲು ಸಾಧ್ಯವಿದೆ. ಯಾವ ತಪ್ಪನ್ನು ಮಾಡದೇ ಅರಣ್ಯದ ಜೊತೆಗೆ ಹೊಂದಿಕೊಂಡು ಬಾಳುವ ಅಲ್ಲಿನ ಜನಸಮುದಾಯವನ್ನು ಹೊರಗೆ ದಬ್ಬಲಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಸುಪ್ರೀ ಕೋರ್ಟ್ ಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.
ಪ್ರಮುಖರಾದ ಇಕ್ಕೇರಿ ರಮೇಶ್, ಗಿರೀಶ್, ಡಿ.ಸಿ. ನಿರಂಜನ್, ಜಯ್ಯಪ್ಪ, ಪುಟ್ಟಪ್ಪಗೌಡ ಉಪಸ್ಥಿತರಿದ್ದರು.
https://suddikanaja.com/2021/01/03/decision-to-reject-the-kasturirangan-report/