ಸುದ್ದಿ ಕಣಜ.ಕಾಂ | DISTRICT | POPULATION CENSUS
ಶಿವಮೊಗ್ಗ: ಭಾರತದ ಮಹಾ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತರ ನಿರ್ದೇಶನಾಲಯ ಜನಗಣತಿದಾರರಿಗೆ ಆಯೋಜಿಸಿದ್ದ ಮಾದರಿ ದಾಖಲಾತಿ ಸಮೀಕ್ಷೆ ಮೊಬೈಲ್ ಅಪ್ಲಿಕೇಷನ್ ತರಬೇತಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆಸಲಾಯಿತು.
ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಹೊನ್ನಳ್ಳಿ ಅವರು ತರಬೇತಿಯನ್ನು ಉದ್ದೇಶಿಸಿ ಮಾತನಾಡಿ, ಮೊಬೈಲ್ ಅಪ್ಲಿಕೇಶನ್’ಗಳ ಪ್ರಾಮುಖ್ಯತೆ ಮತ್ತು ದಶಕಗಳು ಕಳೆದಂತೆ ತಂತ್ರಜ್ಞಾನಗಳಲ್ಲಿ ಆದ ಬದಲಾವಣೆಗಳು ಹಾಗೂ ವಿವಿಧ ಸರ್ಕಾರಿ ಸಂಸ್ಥೆಗಳು ಅವುಗಳನ್ನು ಬಳಸುತ್ತಿರುವ ವಿಧಾನಗಳ ಕುರಿತು ವಿವರಿಸಿದರು.
READ | ಪೇಂಟಿಂಗ್ ಕೆಲಸಮಾಡುತ್ತಿದ್ದ ರೇಣು ಕುಟುಂಬಕ್ಕೆ ಆಸರೆಯಾದ ಲೋಕ ಅದಾಲತ್
ಈ ಬಾರಿ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ದೇಶದಾದ್ಯಂತ ಜನಗಣತಿ ಕಾರ್ಯ ನಡೆಯಲಿದೆ. ಗಣತಿದಾರರು ಮಾದರಿ ದಾಖಲಾತಿ ಸಮೀಕ್ಷೆ ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತರಬೇತಿಯ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದರು.
ಜಿಲ್ಲಾ ಸಾಂಖ್ಯಿಕ ಅಧಿಕಾರಿ ಪರಮೇಶ್ವರಪ್ಪ ಮಾತನಾಡಿ, ಸರ್ಕಾರದ ಯೋಜನೆಗಳನ್ನು ತಯಾರಿಸುವಲ್ಲಿ ಜನನ ಮತ್ತು ಮರಣ ದತ್ತಾಂಶದ ಪ್ರಾಮುಖ್ಯತೆಯನ್ನು ತಿಳಿಸಿದರು ಹಾಗು ಗಣತಿದಾರರು ಮೊಬೈಲ್ ಅಪ್ಲಿಕೇಷನ್ ಬಳಸಿ ಜನನ ಮತ್ತು ಮರಣ ವರದಿಯನ್ನು ದಾಖಲಿಸಲು ವಿನಂತಿಸಿದರು.
ತರಬೇತುದಾರ ಪಿ.ಜಯೇಶ್ ಪಿ, ಜನಗಣತಿ ನಿರ್ದೇಶನಾಲಯ ಕಿರಿಯ ಸಲಹೆಗಾರ ಎಚ್.ಜೆ.ಗಿರೀಶ್ ಮೊಬೈಲ್ ಅಪ್ಲಿಕೇಷನ್ ಬಳಸುವುದರ ಕುರಿತು ಪ್ರಾಯೋಗಿಕವಾಗಿ ತರಬೇತಿಯನ್ನು ನೀಡಿದರು. ಉಮೇಶ್, ವ್ಯವಸ್ಥಾಪಕರು, ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕಿನ ಗಣತಿದಾರರು ಉಪಸ್ಥಿತರಿದ್ದರು.