ಸುದ್ದಿ ಕಣಜ.ಕಾಂ | DISTRICT | 25 AUG 2022
ಶಿವಮೊಗ್ಗ: ನಗರ ಸ್ಥಳೀಯ ಸಂಸ್ಥೆಗಳ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಏನೇ ತೊಂದರೆಗಳಿದ್ದರೂ ಸರಿಪಡಿಸಿಕೊಂಡು ಆದಷ್ಟು ಶೀಘ್ರವಾಗಿ ಕಾರ್ಯಗತಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2021-22 ನೇ ಸಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ನಗರ ವಸತಿ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ನಗರ ವಸತಿ ಯೋಜನೆ ಮತ್ತು ವಾಜಪೇಯಿ ನಗರ ವಸತಿ ಯೋಜನೆಯಡಿ ಒಟ್ಟು 1,740 ವಸತಿ ನೀಡುವ ಗುರಿ ಇದ್ದು, 531 ಮನೆಗಳು ಅನುಮೋದನೆಗೊಂಡಿವೆ. 444 ಬಾಕಿ ಇವೆ. ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಾಕಿ ಇರುವ ವಸತಿ ವಿವರ ಕುರಿತು ಪ್ರಕಟಣೆ ಹೊರಡಿಸುವಂತೆ ಡಿಯುಡಿಸಿ ಯೋಜನಾ ನಿರ್ದೇಶಕರಿಗೆ ಸೂಚಿಸಿದರು. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಫಲಾನುಭವಿಗಳು ಅರ್ಜಿ ಸಲ್ಲಿಸದಿರುವ ಕಾರಣ ಗುರಿಯನ್ನು ಹಿಂದಿರುಗಿಸುವಂತೆ ತಿಳಿಸಿದರು.
ವೈಯಕ್ತಿಕ ಮನೆ ನಿರ್ಮಾಣ ಕಾರ್ಯವನ್ನು ಸಹ ಚುರುಕುಗೊಳಿಸಬೇಕು. ತಾಂತ್ರಿಕ ತೊಂದರೆ ಇತರೆ ಸಮಸ್ಯೆಗಳನ್ನು ಗುರುತಿಸಿ, ಪರಿಹಾರೋಪಾಯಗಳನ್ನು ಕೈಗೊಂಡು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದರು.
READ | ಶಿವಮೊಗ್ಗದಲ್ಲಿ ಗಣೇಶ ಹಬ್ಬ ಹಿನ್ನೆಲೆ ಇಬ್ಬರಿಗೆ ಗಡಿಪಾರು, ಕಾರಣವೇನು?
ಯಾವ ವಸತಿ ಯೋಜನೆ ಕಾಮಗಾರಿ ಸ್ಥಿತಿ ಏನು?
ಪ್ರಗತಿಯಲ್ಲಿದೆ ಗೋವಿಂದಾಪುರ ಮನೆ ನಿರ್ಮಾಣ ಕಾಮಗಾರಿ | ಶಿವಮೊಗ್ಗ ತಾಲ್ಲೂಕಿನ ಗೋವಿಂದಾಪುರದಲ್ಲಿ ₹249.02 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 3000 (125 ಬ್ಲಾಕ್) ಗುಂಪು ಮನೆ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಯುಜಿಡಿ, ಎಸ್ಟಿಪಿ ಮತ್ತು ವಿದ್ಯುತ್ ಈ ಮೂರು ಕೆಲಸಗಳು ಒಟ್ಟೊಟ್ಟಿಗೆ ಆಗಬೇಕು. ಯಾವುದೇ ವಸತಿ ನಿರ್ಮಾಣ ಕಾರ್ಯದಲ್ಲಿ ಸಮರ್ಪಕ ಯೋಜನೆ ರೂಪಿಸಿ ಈ ಎಲ್ಲ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಿದರು.
ನವುಲೆಯಲ್ಲಿ ಗೃಹಭಾಗ್ಯ ಮಂದಗತಿ | ನವುಲೆ ಗ್ರಾಮದಲ್ಲಿ ಕೈಗೊಂಡಿರುವ ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯು ಮಂದಗತಿಯಲ್ಲಿ ಸಾಗುತ್ತಿದ್ದು, ಶೀಘ್ರವಾಗಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಭದ್ರಾವತಿಯಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಿ | ಭದ್ರಾವತಿಯಲ್ಲಿ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ನಿರ್ಮಾಣವಾದ ಮನೆಗಳನ್ನು ಒಳಚರಂಡಿ ಇತರೆ ವ್ಯವಸ್ಥೆಗೊಳಿಸಿ ನೀಡುವಂತೆ ತಿಳಿಸಿದರು.
ಅನುಮೋದನೆಯೇ ಆಗದ ಗೋಪಿಶೆಟ್ಟಿಕೊಪ್ಪ ಯೋಜನೆ | ಗೋಪಿಶೆಟ್ಟಿಕೊಪ್ಪದ ಆಶ್ರಯ ವಸತಿ ಯೋಜನೆ ಇನ್ನೂ ಅನುಮೋದನೆಯಾಗದೆ ಬಾಕಿ ಇದ್ದು ಪಾಲಿಕೆಯವರು ಕಟ್ಟಡ ನಿರ್ಮಾಣ ಏಜೆನ್ಸಿಗೆ ಇನ್ನೂ ಭೂಮಿ ಹಸ್ತಾಂತರಿಸಿಲ್ಲ. ಕೂಡಲೇ ಅವರಿಗೆ ಪತ್ರ ಬರೆದು ಹಸ್ತಾಂತರಿಸಬೇಕು. ಪಾಲಿಕೆಯವರು ವಸತಿ ಯೋಜನೆ ಕುರಿತು ಗಂಭೀರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಯೋಜನೆ ಕುರಿತು ನಿಯಮಾನುಸಾರ ಶೀಘ್ರ ಕ್ರಮ ವಹಿಸದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಸತಿ ಯೋಜನೆಗೆ ಬರುತ್ತಿಲ್ಲ ಹಣ | ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಕುರಿತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾಗಳು ಕ್ರಮ ವಹಿಸಬೇಕು. ಹಾಗೂ ಎನ್ಜಿಟಿ ಮಾರ್ಗಸೂಚಿಯನ್ವಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆಗೆ ಅಗತ್ಯವಾದ ಕ್ರಮ ಕೈಗೊಳ್ಳಬೇಕು. ಸಹಾಯಕ ಕಾರ್ಯಪಾಲಕ ಅಭಿಯಂತರರು ಈ ಬಗ್ಗೆ ಜವಾಬ್ದಾರಿ ವಹಿಸಬೇಕು. ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ವಸತಿ ಯೋಜನೆಗಳಡಿ ಫಲಾನುಭವಿಗಳಿಗೆ ಹಣ ಬರುತ್ತಿಲ್ಲ. ಈ ಬಗ್ಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಆಗಬೇಕಿರುವ ಕೆಲಸಗಳು, ಇತರೆ ಅಂಶಗಳ ಕುರಿತು ಪಟ್ಟಿ ಮಾಡಿ ತಿಳಿಸಿದಲ್ಲಿ ತಾವು ನಿಗಮದ ಎಂ.ಡಿ ಯವರೊಂದಿಗೆ ಚರ್ಚಿಸುವುದಾಗಿ ಡಿಸಿ ಸೆಲ್ವಮಣಿ ತಿಳಿಸಿದರು.
ಸಭೆಯಲ್ಲಿ ಡಿಯುಡಿಸಿ ಯೋಜನಾ ನಿರ್ದೇಶಕ ಮೂಕಪ್ಪ ಕರಿಭೀಮಣ್ಣನವರ್, ಸಿಎಓ ಮೋಹನ್ ಕುಮಾರ್, ಎಇಇ ಮಂಜುನಾಥ್, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಅಭಿಯಂತರರು ಇತರೆ ಅಧಿಕಾರಿಗಳು ಹಾಜರಿದ್ದರು.
https://suddikanaja.com/2022/02/15/shivamogga-city-corporation-has-issued-notice-to-40-beneficiaries-selected-under-the-rajiv-gandhi-rural-housing-corporation-for-the-aashraya-scheme/