♦ ಶಿವಮೊಗ್ಗದಲ್ಲಿ ಗಣೇಶ ಹಬ್ಬ ಆಚರಣೆಯ ಬಗ್ಗೆ ಡಿಸಿ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ
♦ ಶಿವಮೊಗ್ಗದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಕೊಕ್
♦ ಮೆರವಣಿಗೆ ವೇಳೆ ಸಿಸಿಟಿವಿ ಸೇರಿ ಇನ್ನಿತರ ಸೌಲಭ್ಯ ನೀಡಲು ಪಾಲಿಗೆ ಸೂಚನೆ
ಸುದ್ದಿ ಕಣಜ.ಕಾಂ | DISTRICT | 23 AUG 2022
ಶಿವಮೊಗ್ಗ: ಜಿಲ್ಲೆಯಲ್ಲಿ ಗಣೇಶೋತ್ಸವ(Ganesh Festival)ವನ್ನು ಶಾಂತಿಯುತವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದರು.
READ | ಗಡಿಯಲ್ಲೇ ಹೊರ ರಾಜ್ಯಗಳ ಪಿಓಪಿ ಗಣೇಶನಿಗೆ ತಡೆ, ಪರಿಸರ ಸ್ನೇಹಿ ಹಬ್ಬಕ್ಕೆ ನೀಡಿದ ಸೂಚನೆಗಳಿವು
- ಏಕಗವಾಕ್ಷಿ ವ್ಯವಸ್ಥೆ | ಶಿವಮೊಗ್ಗ ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ವಿವಿಧ ಇಲಾಖೆಗಳಿಂದ ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಏಕಗವಾಕ್ಷಿ (Single window) ವ್ಯವಸ್ಥೆ ಕಲ್ಪಿಸಲಾಗುವುದು. ♦ಇಲ್ಲಿ ಮಹಾನಗರ ಪಾಲಿಕೆ(shimoga city corporation), ಪೊಲೀಸ್, ಮೆಸ್ಕಾಂ (MESCOM) ಮತ್ತಿತರ ಇಲಾಖೆಗಳ ಅಧಿಕಾರಿಗಳ ತಂಡಗಳನ್ನು ರಚಿಸಿ ಅಗತ್ಯ ಪರವಾನಗಿ ನೀಡಲು ಕ್ರಮ ಕೈಗೊಳ್ಳಬೇಕು. ♦ಪರವಾನಗಿಗೆ ಅರ್ಜಿ ಸಲ್ಲಿಸಲು ನಿಗದಿತ ನಮೂನೆಯನ್ನು ಸಿದ್ಧಪಡಿಸಿ ಏಕಗವಾಕ್ಷಿ ಕೇಂದ್ರಗಳನ್ನು ಆರಂಭಿಸಬೇಕು.
- ಮರವಣಿಗೆ ವೇಳೆ ಕಣ್ಗಾವಲು | ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಬಂದೋಬಸ್ತಿಗೆ ಸೂಕ್ತ ಬ್ಯಾರಿಕೇಡ್, ತಾತ್ಕಾಲಿಕ ಸಿಸಿಟಿವಿ ಮತ್ತು ವಿಡಿಯೋ ಕ್ಯಾಮೆರಾಗಳ ವ್ಯವಸ್ಥೆಯನ್ನು ಮಹಾನಗರ ಪಾಲಿಕೆ ವತಿಯಿಂದ ಕಲ್ಪಿಸಬೇಕು. ♦ಮೆರವಣಿಗೆ ಸಾಗುವ ಹಾದಿಯಲ್ಲಿ ಯಾವುದೇ ವಿದ್ಯುತ್ ಅವಘಡಗಳು ಸಂಭವಿಸದಂತೆ ಮೆಸ್ಕಾಂ ಮೊದಲೇ ಪರಿಶೀಲನೆ ನಡೆಸಬೇಕು. ♦ಮೆರವಣಿಗೆ ಹಾದಿಯಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಬೇಕು. ಲೈನ್ಮೆನ್ಗಳು ಸ್ಥಳದಲ್ಲೇ ಲಭ್ಯವಿರುವಂತೆ ವ್ಯವಸ್ಥೆ ಮಾಡಬೇಕು ಎಂದರು.
- ಫ್ಲೆಕ್ಸ್, ಬಂಟಿಂಗ್ ನಿರ್ಬಂಧ | ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯದೇ ಫೆಕ್ಸ್ ಮತ್ತು ಬಂಟಿಂಗ್ ಅಳವಡಿಸಲು ಅವಕಾಶ ನೀಡಬಾರದು. ♦ಅನಧಿಕೃತವಾಗಿ ಅಳವಡಿಸುವ ಫ್ಲೆಕ್ಸ್ ಗಳ ಮೇಲೆ ನಿಗಾ ಇರಿಸಿ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ತಂಡಗಳನ್ನು ರಚಿಸುವಂತೆ ಅವರು ತಿಳಿಸಿದರು.
- ಪೆಂಡಾಲ್’ಗಳಲ್ಲಿ ಸುರಕ್ಷತೆಗೆ ಆದ್ಯತೆ | ಗಣೇಶ ಪೆಂಡಾಲ್’ಗಳಲ್ಲಿ ವಿದ್ಯುತ್ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆಯನ್ನು ಪರಿಶೀಲಿಸಿ, ಯಾವುದೇ ಅವಘಡಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ♦ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಸಿಬ್ಬಂದಿಗಳು ಇದನ್ನು ಖಾತ್ರಿಪಡಿಸಬೇಕು.
- ಗಣೇಶ ವಿಸರ್ಜನೆ ವೇಳೆ ಹೈ ಅಲರ್ಟ್ | ಗಣೇಶ ವಿಸರ್ಜನೆ ಸಂದರ್ಭದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ♦ಬೋಟ್ ಇತ್ಯಾದಿ ಸುರಕ್ಷತಾ ಸಾಧನಗಳನ್ನು ಸನ್ನದ್ಧಗೊಳಿಸಬೇಕು. ಆಂಬ್ಯುಲೆನ್ಸ್ ಮತ್ತು ಆರೋಗ್ಯ ಸಿಬ್ಬಂದಿ ಸ್ಥಳದಲ್ಲಿಯೇ ಲಭ್ಯವಿರಬೇಕು.
- ಮದ್ಯ ಮಾರಾಟ ನಿಷೇಧ | ಮದ್ಯ ಮಾರಾಟ ನಿರ್ಬಂಧ ಆದೇಶವನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕು. ಹೊರಗಿನಿಂದ ಮದ್ಯ ತಂದು ಮಾರಾಟ ಮಾಡುವ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ♦ಶಿವಮೊಗ್ಗ ನಗರ ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಈ ಎಲ್ಲ ಸೂಚನೆಗಳನ್ನು ಸ್ಥಳೀಯವಾಗಿ ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಹೇಳಿದರು.
- ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ ಪಾಲನೆ | ಗಣೇಶೋತ್ಸವ ಆಚರಣೆ ಕುರಿತು ರಾಜ್ಯ ಪರಿಸರ ಮಾಲಿನ್ಯ ಮಂಡಳಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಎಎಸ್ಪಿ ವಿಕ್ರಮ್ ಅಮಟೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಶಿವಮೊಗ್ಗ ಉಪವಿಭಾಗಾಧಿಕಾರಿ ದೊಡ್ಡಗೌಡರ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.