ಸುದ್ದಿ ಕಣಜ.ಕಾಂ | KARNATAKA | NUDI NAMANA
ಶಿವಮೊಗ್ಗ: ವಿದೇಶದಲ್ಲೂ ಕನ್ನಡದ ಕಂಪು ಸೂಸಿದ ಶಿವಮೊಗ್ಗ ಸುಬ್ಬಣ್ಣ (Shivamogga subbanna) ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನರಾದರು.
ಅಮೆರಿಕ, ಸಿಂಗಾಪುರ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಗಾಯನದ ಮೂಲಕ ಸುಗಮ ಸಂಗೀತದ ಕೀರ್ತಿ ಪತಾಕೆಯನ್ನು ಹಾರಿಸಿದರು. ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಧ್ವನಿಸುರುಳಿಗಳು ನಾಡಿನ ಉದ್ದಗಲಕ್ಕೂ ತಲುಪಿವೆ.
ಎರಡು ಸಲ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿದ್ದ ಸುಬ್ಬಣ್ಣ ಆಕಾಶವಾಣಿಯ ವಾರ್ಷಿಕ ಸಂಗೀತ ಸ್ಪರ್ಧೆಗಳ ತೀರ್ಪುಗಾರರಾಗಿ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಣೆ ಮಾಡಿದ್ದರು.
ಸುಬ್ಬಣ್ಣನವರಿಗೆ ತಾತನೇ ಸಂಗೀತ ಗುರು
‘ಶಿವಮೊಗ್ಗ ಸುಬ್ಬಣ್ಣ’ ಅವರ ಮನೆಯೇ ಸಂಗೀತ ಪಾಠಶಾಲೆಯಾಗಿತ್ತು. ಇವರು ವೇದ, ಮಂತ್ರಗಳ ಝೇಂಕಾರ ಕೇಳುತ್ತಲೇ ಬೆಳೆವದರು. ತಾತ ಶಾಮಣ್ಣನವರು ಇವರ ಮೇಲೆ ಪ್ರಭಾವ ಬೀರಿದ್ದು, ಸಂಗೀತದ ಗುರುವಾಗಿ ಪ್ರಮುಖ ಪಾತ್ರವಹಿಸಿದ್ದರು.
READ | ಕೋಳಿ , ನಾಯಿಗಳಿಗೂ ಕಾಳಜಿ ಕೇಂದ್ರ
ಜಿ.ಸುಬ್ರಹ್ಮಣ್ಯಂ ‘ಸುಬ್ಬಣ್ಣ’ ಆಗಿದ್ದು…
1938ರ ಡಿಸೆಂಬರ್ 14ರಂದು ನಗರ ಗ್ರಾಮದಲ್ಲಿ ಗಣೇಶರಾವ್ ಮತ್ತು ರಂಗನಾಯಕಮ್ಮ ಅವರ ಪುತ್ರನಾಗಿ ಜನಿಸಿದ್ದರು. ಇವರ ನಿಜ ನಾಮಧೇಯ ‘ಜಿ.ಸುಬ್ರಹ್ಮಣ್ಯಂ’ ಎಂದಿತ್ತು. ನಂತರ ಇದನ್ನು ‘ಶಿವಮೊಗ್ಗ ಸುಬ್ಬಣ್ಣ’ ಎಂದು ಬದಲಿಸಿಕೊಂಡರು. ಶಾಲಾ ಹಂತದಲ್ಲಿ ‘ಹಾಡಿನ ಸುಬ್ಬಣ್ಣ’ ಎಂದೇ ಖ್ಯಾತಿ ಪಡೆದಿದ್ದರು.
ಸುಬ್ಬಣ್ಣ ಅವರು ಬಿಎ, ಬಿಕಾಂ, ಎಲ್.ಎಲ್.ಬಿ ಪದವಿ ಪಡೆದು ವಕೀಲರಾಗಿ ವೃತ್ತಿ ಆರಂಭಿಸಿದರು. ಬಳಿಕ ನೋಟರಿಯಾಗಿ ನೇಮಕಗೊಂಡರು. ಈ ಅವಧಿಯಲ್ಲಿ ಸಂಗೀತ ಕ್ಷೇತ್ರದಿಂದ ದೂರ ಉಳಿದಿದ್ದರೂ ರಕ್ತಗತವಾಗಿದ್ದ ಕಲೆ ಹಾಗೂ ಒಳಗಡೆ ಇದ್ದ ಸಂಗೀತಗಾರ ಮಾತ್ರ ಸುಮ್ಮನಿರಲು ಬಿಡಲಿಲ್ಲ.
1963ರಲ್ಲಿ ಇವರು ಆಕಾಶವಾಣಿ ಗಾಯಕರಾಗಿ ಆಯ್ಕೆಯಾದರು. ಚಂದ್ರಶೇಖರ್ ಕಂಬಾರ ಅವರ ‘ಕರಿಮಾಯಿ’ ಚಿತ್ರದ ಮೂಲಕ ಹಿನ್ನೆಲೆ ಗಾಯಕರಾಗಿ ಚಲನಚಿತ್ರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ನಂತರ ನಡೆದಿದೆಲ್ಲವೂ ದಾಖಲೆ. ಸುಗಮ ಸಂಗೀತ ಕ್ಷೇತ್ರದಲ್ಲಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಾ ಮುನ್ನಡೆದರು. ವೃತ್ತಿ (ವಕೀಲ) ಮತ್ತು ಪ್ರವೃತ್ತಿ (ಗಾಯಕ) ಹೆಸರುಗಳು ಬೇರೆ ಬೇರೆ ಆಗಿದ್ದವು. ಅಲ್ಲಿ ಜಿ.ಸುಬ್ರಹ್ಮಣ್ಯಂ ಇಲ್ಲಿ ಶಿವಮೊಗ್ಗ ಸುಬ್ಬಣ್ಣ ಈ ಗೊಂದಲ ಇತ್ಯರ್ಥಕ್ಕಾಗಿಯೇ ಅವರ ತಮ್ಮ ಹೆಸರನ್ನು ‘ಶಿವಮೊಗ್ಗ ಸುಬ್ಬಣ್ಣ’ ಮಾಡಿಕೊಂಡರು.
ಚಂದ್ರಶೇಖರ್ ಕಂಬಾರ ಅವರ ನಿರ್ದೇಶನದ ಕಾಡುಕುದುರೆ ಚಿತ್ರದ ‘ಕಾಡುಕುದುರೆ’ ಹಾಡಿಗೆ ರಜತ ಕಮಲ ರಾಷ್ಟ್ರ ಪ್ರಶಸ್ತಿ ಪಡೆದು ಈ ಪ್ರಶಸ್ತಿಗೆ ಭಾಜನರಾದ ಮೊದಲ ಕನ್ನಡಿಗರೆಂಬ ಖ್ಯಾತಿಗೆ ಪಾತ್ರರಾದರು. 1979ರಲ್ಲಿ ಅಂದಿನ ರಾಷ್ಟ್ರಪತಿ ನೀಲಂ ಸಂಜೀವ್ ರೆಡ್ಡಿ ಅವರಿಂದ ರಜತಕಮಲ ಪ್ರಶಸ್ತಿ ಪಡೆದರು. ಅಲ್ಲಿಂದ ಸುಬ್ಬಣ್ಣನವರ ಗೆಲುವಿನ ಕುದುರೆಯ ಸವಾರಿ ಶುರುವಾಯಿತು.
ಕೋಡಗಾನ ಕೋಳಿ ನುಂಗಿತ್ತಾ, ಅಳಬೇಡಾ ತಂಗಿ ಅಳಬೇಡ, ಬಿದ್ದೀಯಬ್ಬೇ ಮುದುಕಿ ಮೊದಲಾದ ಶಿಶುನಾಳ ಶರೀಫರ ಗೀತೆಗಳನ್ನು ಹಾಡಿದರು. ಇವುಗಳು ಸಾಕಷ್ಟು ಕೀರ್ತಿ ತಂದುಕೊಟ್ಟವು.
ರಾಜ್ಯ ಸರ್ಕಾರ ಇವರಿಗೆ ಸಂತ ಶಿಶುನಾಳ ಶರೀಫ ಪ್ರಶಸ್ತಿ, ಸಂಗೀತ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕಲಾತಿಲಕ ಪ್ರಶಸ್ತಿ ನೀಡಿ ಗೌರವಿಸಿದೆ.
ಅಡಿಗರ ‘ಮೋಹನ ಮುರಳಿ’ ಹಾಡಿನ ಬಳಿಕ ಸುಬ್ಬಣ್ಣ ಭಾವಗೀತೆಗಳನ್ನು ಹಾಡುವ ನಿರ್ಧಾರಕ್ಕೆ ಬಂದರು. ಬಳಿಕ ಕುವೆಂಪು ಅವರ ಸಾಹಿತ್ಯಕ್ಕೆ ದನಿ ತುಂಬಿದರು.
https://suddikanaja.com/2021/02/28/the-antiquity-of-kannada-language-in-northern-kannada/