ಸುದ್ದಿ ಕಣಜ.ಕಾಂ | DISTRICT | 05 SEP 2022
ಶಿವಮೊಗ್ಗ: ಜನಪ್ರತಿನಿಧಿಗಳು ಶಾಸಕರು, ಸಂಸದರು ಆದರೆ ಪ್ರತ್ಯೇಕ ಪಿಂಚಣಿ ವ್ಯವಸ್ಥೆ ಇದೆ. ಅವರಿಗೆ ಓಲ್ಡ್ ಪೆನ್ಶನ್ ಸ್ಕೀಮ್(ಓಪಿಎಸ್) ಅಡಿಯಲ್ಲೇ ಸೌಲಭ್ಯಗಳು ಲಭ್ಯವಾಗುತ್ತವೆ. ಅದೇ ಇಡೀ ಜೀವನ ಸೇವೆಯಲ್ಲಿ ಸವೆಸುವ ಸರ್ಕಾರಿ ನೌಕರರಿಗೇಕೆ ನ್ಯಾಷನಲ್ ಪೆನ್ಶನ್ ಸಿಸ್ಟಂ(ಎನ್.ಪಿಎಸ್) ನೀಡಲಾಗಿದೆ? ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾರ್ಮಿಕವಾಗಿ ಪ್ರಶ್ನಿಸಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಜನಪ್ರತಿನಿಧಿಗಳಿಗೊಂದು, ಸರ್ಕಾರಿ ನೌಕರರಿಗೆ ಇನ್ನೊಂದು ಪಿಂಚಣಿ ವ್ಯವಸ್ಥೆ ಏಕಿದೆ? ಎಂದರು.
READ | ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ಮಂತ್ರಿಯಾದರೂ ಅಚ್ಚರಿಪಡಬೇಕಿಲ್ಲ, ಆಯನೂರು ಭವಿಷ್ಯ
ವ್ಯವಸ್ಥೆಯ ಮೇಲೆ ಸಿಡಿದೆದ್ದ ಆಯನೂರು
- ವ್ಯವಸ್ಥೆಯೇ ಸರಿಯಿಲ್ಲ. ಹೊರಡಿಸಲಾಗುವ ಸುತ್ತೋಲೆಗಳು, ಆದೇಶಗಳು ಪ್ರಾಯೋಗಿಕ ಮಾನದಂಡಕ್ಕೆ ಕೆಲವೊಮ್ಮೆ ಒಳಪಡುವುದೇ ಇಲ್ಲ. ಶಿಕ್ಷಕರು ಬೋಧನೆ ಬಿಟ್ಟು ಎಲ್ಲ ಕೆಲಸಗಳನ್ನು ಮಾಡಬೇಕು. ಹಾಗಾದರೆ ಪಾಠ ಮಾಡುವುದು ಯಾವಾಗ?
- ಗೊಂದಲ ಸೃಷ್ಟಿಸುವ ವರ್ಗಾವಣೆಗಳಿಂದಾಗಿ ಗಂಡ ಎಲ್ಲೋ ಹೆಂಡತಿ ಇನ್ನೆಲ್ಲೋ ವಾಸವಾಗಿರುವ ಸಾಕಷ್ಟು ಉದಾಹರಣೆಗಳಿವೆ. ಇವುಗಳನ್ನು ಕೂಡಲೇ ಸರ್ಕಾರ ಬಗೆಹರಿಸಬೇಕು.
- ಸರ್ಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ಸೇವೆ ಪಡೆಯುವ ಸವಲತ್ತು ಕಲ್ಪಿಸಲಾಗಿದೆ. ಇದಕ್ಕೆ ಶಿಕ್ಷಕರು ಒಳಪಡುತ್ತಾರೆ. ಆದರೆ, ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೇಕೆ ಈ ಸೌಲಭ್ಯ ನೀಡಿಲ್ಲ? ಅವರು ಶಿಕ್ಷಕರಲ್ಲವೇ?
- ಅತಿಥಿ ಶಿಕ್ಷಕರಾಗಿ ಕೆಲಸ ಮಾಡುವ ಮಹಿಳೆಗೆ ಹೆರಿಗೆ ರಜೆಯೇ ಇಲ್ಲ. ಅಪ್ಪನಿಗೆ ಫೆಟರ್ನಿಟಿ ಲೀವ್ ಇಲ್ಲ. ರಜೆ ಹಾಕಿದರೆ ಸಂಬಳಕ್ಕೆ ಕತ್ತರಿ ಬೀಳುತ್ತದೆ.
- ಶಿಕ್ಷಕರಿಗೆ ಸುಳ್ಳಾಡುವುದನ್ನು ಕಲಿಸುತ್ತಿರುವುದೇ ಈ ವ್ಯವಸ್ಥೆಯಲ್ಲಿನ ಲೋಪಗಳು. ಪುಸ್ತಕಗಳನ್ನು ನೀಡಲಾಗುತ್ತದೆ. ಹೆಚ್ಚುವರಿ ಪುಸ್ತಕಗಳಾದರೂ ಎಲ್ಲವೂ ಖರ್ಚಾಗಿವೆ ಎಂಬ ಲೆಕ್ಕ ತೋರಿಸಬೇಕು. ಈ ಎಲ್ಲ ಲೋಪಗಳು ಸುಧಾರಣೆ ಕಾಣಬೇಕು.
READ | ಜೀವ ಉಳಿಸಿದ ಕಾನ್ಸ್ಟೇಬಲ್ಗಳಿಗೆ ಪ್ರಶಂಸಾ ಪತ್ರ, ಯಾರಿಗೆಲ್ಲ ಶಹಭಾಷ್ಗಿರಿ?
ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ, ಸಾಹಿತಿ ಚಟ್ನಹಳ್ಳಿ ಮಹೇಶ್ ಉಪನ್ಯಾಸ ನೀಡಿದರು. ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಮೇಯರ್ ಸುನೀತಾ ಅಣ್ಣಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕರಕ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ.ದಿವಾಕರ್, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಜೆ.ಸುಮತಿ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಸ್.ರಾಘವೇಂದ್ರ, ಪ್ರಮುಖರಾದ ಡಿ.ಬಿ.ರುದ್ರಪ್ಪ, ಆರ್.ಅಂಜನಪ್ಪ, ಎಸ್.ಕಾಳಾನಾಯ್ಕ್, ಬಿ.ಆರ್.ಬಸವರಾಜಪ್ಪ, ಬಿಇಓ ಪಿ.ನಾಗರಾಜ್, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
https://suddikanaja.com/2021/10/28/best-scientist-award-secured-by-a-manjunath-native-of-hosanagara/