| HIGHLIGHTS |
- ಲೈಸೆನ್ಸ್ ನವೀಕರಣ ಸಂದರ್ಭದಲ್ಲಿ ಅಂಗಡಿಯ ನಾಮಫಲಕದ ಚಿತ್ರ ಲಗತ್ತಿಸಲು ಸೂಚಿಸಿ
- ಸಾರ್ವಜನಿಕ ಕ್ಷೇತ್ರದಲ್ಲಿ ನಡೆಯುವ ವ್ಯವಹಾರಗಳು ಕನ್ನಡದಲ್ಲೇ ನಡೆಸುವಂತೆ ಸೂಚನೆ
ಸುದ್ದಿ ಕಣಜ.ಕಾಂ | KARNATAKA | 07 SEP 2022
ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಅಂಗಡಿಗಳ ಮೇಲೆ ಕಡ್ಡಾಯವಾಗಿ ಕನ್ನಡ ನಾಮಫಲಕ (Board)ಗಳನ್ನು ಹಾಕಬೇಕು. ಹಾಕದೇ ಇರುವ ಅಂಗಡಿಗಳಿಗೆ ನೋಟಿಸ್ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ(Kannada Development Authority)ದ ಅಧ್ಯಕ್ಷ ಟಿ.ಎಸ್.ನಾಗಾಭರಣ (Talakadu Srinivasaiah Nagabharana) ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
READ | ಸರ್ಕಾರಿ ವೆಬ್ಸೈಟ್ಗಳಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡ ಅಂಕಿಗಳ ಬಳಕೆ ಹೆಚ್ಚಿಸಲು ಆರಂಭವಾಗಲಿದೆ ಅಭಿಯಾನ
ನಾಲ್ಕು ಸಾವಿರಕ್ಕೂ ಹೆಚ್ಚು ನೋಂದಾಯಿತ ಅಂಗಡಿಗಳಿದ್ದು, ಅವುಗಳಿಗೆ ಕನ್ನಡದಲ್ಲೇ ಬೋರ್ಡ್ ಅಳವಡಿಸಬೇಕು. ಲೈಸೆನ್ಸ್ ನವೀಕರಣಕ್ಕಾಗಿ ಬರುವಾಗ ಅವರಿಗೆ ಕಡ್ಡಾಯವಾಗಿ ಅಂಗಡಿಯ ಚಿತ್ರ ಲಗತ್ತಿಸುವಂತೆ ಸೂಚನೆ ನೀಡಬೇಕು. ಈ ನಿಟ್ಟಿನಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಪಾಲಿಕೆ ಆಯುಕ್ತರಿಗೆ ನಾಗಾಭರಣ ಸೂಚನೆ ನೀಡಿದರು.
ಇದೇ ರೀತಿ ಬ್ಯಾಂಕ್, ಆರ್.ಟಿ.ಓ, ಮೆಸ್ಕಾಂ, ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರಿಗೆ ಸೇವೆಗಳನ್ನು ಕನ್ನಡದಲ್ಲಿಯೇ ಒದಗಿಸಬೇಕು. ಇಲ್ಲಿ ಅರ್ಜಿ ನಮೂನೆಗಳು, ಚಲನ್ ಇತ್ಯಾದಿಗಳು ಕನ್ನಡದಲ್ಲಿಯೂ ಇರುವಂತೆ ಖಾತ್ರಿಪಡಿಸಬೇಕು. ಎಲ್ಲ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಸ್ಥಳೀಯ ಸಂಸ್ಥೆಗಳು ಅಂಗಡಿಗಳಿಗೆ ಪರವಾನಗಿ ನೀಡುವ ಸಂದರ್ಭದಲ್ಲಿ ಇದನ್ನು ಅನುಷ್ಠಾನಗೊಳಿಸಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಉಪಸ್ಥಿತರಿದ್ದರು.
https://suddikanaja.com/2021/06/04/property-tax-collection-door-to-door-by-online/