HIGHLIGHTS
- ಗುಂಡೇಟು ಪ್ರಕರಣವನ್ನು ಬೇಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ ನಗರ ಪೊಲೀಸರು
- ಗುಂಡೇಟು ಪ್ರಕರಣದ ಸತ್ಯಾಂಶಗಳನ್ನು ಬಿಚ್ಚಿಟ್ಟ ಮರಣೋತ್ತರ ಪರೀಕ್ಷಾ ವರದಿ
ಸುದ್ದಿ ಕಣಜ.ಕಾಂ | TALUK | 19 SEP 2022
ಹೊಸನಗರ ( Hosanagar): ನಗರ ಸಮೀಪದ ನೇಗಿಲೋಣಿಯಲ್ಲಿ ಗುಂಡೇಟಿಗೆ ಯುವಕ ಮೃತಪಟ್ಟ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನ(JC)ಕ್ಕೆ ಒಪ್ಪಿಸಿದ್ದಾರೆ.
ನೇಗಿಲೋಣಿ (negiloni) ರಾವೆ ಗ್ರಾಮದ ಕೀರ್ತಿ(30), ರಾವೆ ಗ್ರಾಮದ ನಾಗರಾಜ್(39) ಎಂಬುವವರನ್ನು ಬಂಧಿಸಲಾಗಿದೆ.
ಕಳೆದ ಆಗಸ್ಟ್ 26ರಂದು ನೇಗಿಲೋಣಿ ರಾವೆ ಗ್ರಾಮದ ನಿವಾಸಿ ಅಂಬರೀಶ್ (30) ಅವರು ಗುಂಡೇಟಿಗೆ ಬಲಿಯಾಗಿದ್ದರು.
READ | ಸಿಮ್ಸ್’ನಲ್ಲಿ ಉದ್ಯೋಗ ಅವಕಾಶ, ಏಳು ಹುದ್ದೆಗಳು ಖಾಲಿ, ಆಕರ್ಷಕ ಸಂಬಳ
ದಾಖಲಾದ ಪ್ರಕರಣದಲ್ಲಿ ಏನಿತ್ತು ಆರೋಪ?
ಅಂಬರೀಶ್ ಅವರು ಪರವಾನಗಿ ಇಲ್ಲದ ನಾಡ ಬಂದೂಕನ್ನು ತೆಗೆದುಕೊಂಡು ಆತನ ಸ್ನೇಹಿತ ಕೀರ್ತಿ ಎಂಬುವವರೊಂದಿಗೆ ತೋಟಕ್ಕೆ ಹೋಗಿ ಕಾಡುಕೋಣಗಳನ್ನು ಓಡಿಸಿದ್ದು, ಕೀರ್ತಿಯು ವಾಪಸ್ ಮನೆಗೆ ಹೋದ ನಂತರದಲ್ಲಿ ಅಂಬರೀಶನು ಆತನ ಬಂದೂಕಿನಲ್ಲಿ ಮದ್ದು ಗುಂಡುಗಳನ್ನು ತುಂಬಿಕೊಂಡು ತನ್ನ ಮನೆಗೆ ವಾಪಸ್ಸು ಬರುತ್ತಿರುವಾಗ ಗಾಳಿ ಗುಡ್ಡದ ಕಲ್ಲು ಬಂಡೆ ಮೇಲೆ ಬಿದ್ದು, ಬಂದೂಕಿನ ಕುದುರೆಗೆ ಆತನು ಧರಿಸಿದ್ದ ರಬ್ಬರ್ ಬೂಟ್ ತಾಗಿ ಬಂದೂಕಿನಲ್ಲಿ ತುಂಬಿರುವ ಮದ್ದು ಗುಂಡು ಸಿಡಿದು ಎದೆಯ ಕೆಳಭಾಗಕ್ಕೆ ತಗಲಿ ಮೃತಪಟ್ಟಿರುತ್ತಾನೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಅದರನ್ವಯ, ಐಪಿಸಿ ಕಲಂ 304 (ಎ), ಆಯುಧ ಕಾಯ್ದೆ 3, 25, 27 (2) ಅನ್ವಯ ಪ್ರಕರಣ ದಾಖಲಿಸಲಾಗಿತ್ತು.
ದೇಹದಲ್ಲಿ ಗುಂಡಿಗೂ ಬಂದೂಕಿಗೂ ಸಂಬಂಧವೇ ಇಲ್ಲ!
ಪಿಎಸ್ಐ ನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ತಂಡವು ಪ್ರಕರಣದ ತನಿಖೆ ಕೈಗೊಂಡು, ಮೃತ ಅಂಬರೀಶನ ಮರಣೋತ್ತರ ಶವ ಪರೀಕ್ಷಾ ವರದಿಯನ್ನು ಪರಿಶೀಲಿಸಲಾಗಿ, ಮೃತದೇಹದಲ್ಲಿ ದೊರೆತ ಗುಂಡುಗಳು ಮತ್ತು ಆತನ ಬಳಿ ಇದ್ದ ನಾಡ ಬಂದೂಕಿನಿಂದ ಸಿಡಿದ ಗುಂಡುಗಳಾಗಿರದೇ ಇದ್ದ ಬಗ್ಗೆ ಅನುಮಾನ ಬಂದಿದ್ದರಿಂದ, ಮೃತನೊಂದಿಗೆ ಕಾಡಿಗೆ ಹೋಗಿದ್ದ ಕೀರ್ತಿ ಈತನನ್ನು ವಿಚಾರಣೆಗೆ ಒಳಪಡಿಸಲಾಗಿದೆ.
READ | ಭದ್ರಾವತಿಯಲ್ಲಿ ಲಾರಿಯಲ್ಲಿ ಮಲಗಿದ್ದವರ ಮೇಲೆ ಚಾಕುದಿಂದ ಹಲ್ಲೆ ನಡೆಸಿ ದರೋಡೆ
ವಿಚಾರಣೆಯಲ್ಲಿ ಹೇಳಿದ್ದೇನು?
- ಕಾಡು ಬೆಕ್ಕು ಶಿಕಾರಿ | ಸ್ನೇಹಿತರಾದ ಅಂಬರೀಶ್ ಮತ್ತು ನಾಗರಾಜ್ ಅವರೊಂದಿಗೆ ಕಾಡಿಗೆ ಶಿಕಾರಿ ಮಾಡುವ ಉದ್ದೇಶದಿಂದ ಹೋಗಿದ್ದು, ಕಾಡು ಬೆಕ್ಕನ್ನು ಬೇಟೆ ಮಾಡಿ, ನಾಗರಾಜನು ಶಿಕಾರಿಯನ್ನು ಪಿಕಪ್’ನಲ್ಲಿ ಹಾಕಿದ್ದನು.
- ಮಿಸ್ ಫೈಯರ್ | ನಾನು (ಕೀರ್ತಿ) ಮತ್ತು ಅಂಬರೀಶ ಇಬ್ಬರೂ ಪುನಃ ಶಿಕಾರಿ ಮಾಡಲು ಗಾಳಿಗುಡ್ಡದ ಕಾಡಿಗೆ ಹೋದ ಸಮಯದಲ್ಲಿ ಅಂಬರೀಶನು ನಾಗರಾಜನು ತಂದುಕೊಟ್ಟಿದ್ದ ದಯಾನಂದ್ ಎಂಬುವವರ ಲೈಸೆನ್ಸ್ ಇರುವ ಎಸ್.ಬಿ.ಬಿ.ಎಲ್ ಬಂದೂಕನ್ನು ನಿರ್ಲಕ್ಷ್ಯತನದಿಂದ ಹಿಡಿದುಕೊಂಡು ಕಾಡಿನ ಕಲ್ಲು ಬಂಡೆಗಳ ಮೇಲೆ ಕುಳಿತುಕೊಳ್ಳಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದೆ. ಬಂದೂಕು ಫೈರ್ ಆಗಿ ಅಂಬರೀಶನು ಮೃತಪಟ್ಟಿರುತ್ತಾನೆ.
- ಸಾಕ್ಷ್ಯ ನಾಶ | ತಾನು ಮತ್ತು ನಾಗರಾಜ್ ಸೇರಿ ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಫೈರ್ ಆದ ಎಸ್.ಬಿ.ಬಿ.ಎಲ್ ಬಂದೂಕನ್ನು ಬದಲಾಯಿಸಿ ಅಂಬರೀಶನ ಪರವಾನಿಗೆ ಇಲ್ಲದ ನಾಡಬಂದೂಕನ್ನು ಮೃತ ದೇಹದ ಬಳಿ ಇಟ್ಟು, ಬೇಟೆ ಮಾಡಿದ ಕಾಡು ಬೆಕ್ಕನ್ನು ಹಾಗೂ ಫೈರ್ ಆದ ಖಾಲಿ ತೋಟವನ್ನು ನಾಶಪಡಿಸಿ, ಸಾಕ್ಷ್ಯ ನಾಶ ಮಾಡಲಾಗಿದೆ.
ಆರೋಪಿತರಾದ ಕೀರ್ತಿ ಮತ್ತು ನಾಗರಾಜ್ ಅವರುಗಳು ದಯಾನಂದ್ ಎಂಬುವವನಿಂದ ಲೈಸೆನ್ಸ್ ಹೊಂದಿದ ಎಸ್.ಬಿ.ಬಿ.ಎಲ್ ಬಂದೂಕನ್ನು ಹಾಗೂ ಕೆಲವರಿಂದ ಜೀವಂತ ಎಸ್.ಬಿ.ಬಿ.ಎಲ್ ತೋಟಗಳನ್ನು ತೆಗೆದುಕೊಂಡು ಶಿಕಾರಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.