HIGHLIGHTS
- ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯಿಂದ ಎಲೆಚುಕ್ಕೆ ರೋಗದ ಬಗ್ಗೆ ಜಾಗೃತಿ ಕಾರ್ಯಕ್ರಮ
- ಮಳಲೂರಿನ ಅರೇಹಳಿ ಗ್ರಾಮದಲ್ಲಿ ಆಯೋಜಿಸಿದ್ದ ಅಡಿಕೆ ಬೆಳೆಯ ಎಲೆಚುಕ್ಕೆ ರೋಗದ ಹತೋಟಿ ಕುರಿತು ತರಬೇತಿ ಕಾರ್ಯಕ್ರಮ
- ತರಬೇತಿ ಕಾರ್ಯಕ್ರಮದಲ್ಲಿ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡ ರೈತರು
ಸುದ್ದಿ ಕಣಜ.ಕಾಂ| DISTRICT | 14 SEP 2022
ಶಿವಮೊಗ್ಗ: ಅಡಿಕೆ ಬೆಳೆಯಲ್ಲಿ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗದ ಲಕ್ಷಣಗಳು, ಕಾರಣವಾದ ಅಂಶಗಳು ಹಾಗೂ ಹತೋಟಿ ಕ್ರಮಗಳ ಬಗ್ಗೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ (keladi shivappa nayaka university) ಹಾಗೂ ತೀರ್ಥಹಳ್ಳಿ ತೋಟಗಾರಿಕೆ ಇಲಾಖೆ(Horticulture department)ಯ ಸಹಯೋಗದಲ್ಲಿ ಮಳಲೂರಿನ ಅರೇಹಳಿ ಗ್ರಾಮದಲ್ಲಿ ಆಯೋಜಿಸಿದ್ದ ಅಡಿಕೆ ಬೆಳೆಯ ಎಲೆಚುಕ್ಕೆ ರೋಗ (Areca leaf spot)ದ ಹತೋಟಿ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ವಿವಿಯ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜಪ್ಪ ಅಡಿವಪ್ಪರ್ ವಿವರಣೆ ನೀಡಿದ್ದಾರೆ.
ರೋಗದ ಲಕ್ಷಣಗಳು
ಎಲೆ ಚುಕ್ಕೆಗೆ ಬಾಧಿತ ಮರಗಳ ಕೆಳಗಿನ ಸೋಗೆಗಳ ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸುತ್ತವೆ. ಮುಂದುವರಿದು ಈ ಚುಕ್ಕೆಗಳು ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಹೆಡೆಗಳನ್ನು ಆವರಿಸುತ್ತವೆ. ನಂತರ ಹೆಡೆಗಳು ಒಣಗಲಾರಂಭಿಸುತ್ತವೆ. ಇಂತಹ ಒಣಗಿದ ಎಲ್ಲ ಹೆಡೆಗಳು ಜೋತು ಬಿದ್ದು ಮರ ಶಕ್ತಿ ಕಳೆದುಕೊಂಡು ಇಳುವರಿ ಕುಂಠಿತಗೊಳ್ಳುತ್ತದೆ ಎಂದು ತಿಳಿಸಿದರು.
READ | ಶಿವಮೊಗ್ಗದಲ್ಲಿ ನಡೆಯಲಿದೆ ನೇರ ಸಂದರ್ಶನ, ಎಸ್ಸೆಸ್ಸೆಲ್ಸಿ, ಐಟಿಐ, ಡಿಪ್ಲೊಮಾ ಪಾಸ್ ಆದವರಿಗೆ ಉದ್ಯೋಗ ಅವಕಾಶ
ರೋಗಕ್ಕೆ ಕಾರಣವಾದ ಅಂಶಗಳು
ಈ ಎಲೆಚುಕ್ಕೆ ರೋಗವು ಕೊಲ್ಲೆಟೋಟ್ರೈಕಮ್ ಗ್ಲೀಯೋಸ್ಪೊರೈಡ್ಸ್ ಮತ್ತು ಫಿಲ್ಲೊಸ್ಟಿಕ್ಟ ಅರಕೆ ಎಂಬ ಎರಡು ಶಿಲೀಂದ್ರಗಳಿಂದ ಉಂಟಾಗುತ್ತದೆ. ಶಿಲೀಂದ್ರವು ಬಿದ್ದ ಗರಿಗಳಲ್ಲಿ ವಾಸಿಸುವುದು, ಮಳೆ ಹನಿಗಳು ಚಿಮ್ಮುವುವಿಕೆಯಿಂದ ಶಿಲೀಂದ್ರದ ಕಣಗಳು ಗಾಳಿಯಲ್ಲಿ ಸೇರಿ ಗರಿಗಳನ್ನು ತಲುಪುತ್ತವೆ. ಹಾಗೆಯೇ ತೇವಭರಿತ ಬಿಸಿಲಿನ ವಾತಾವರಣ, ಕಡಿಮೆ ಉಷ್ಣಾಂಶ (180 ರಿಂದ 240 ಸೆ) ಮತ್ತು ಹೆಚ್ಚಿನ ಆರ್ದ್ರತೆ (ಶೇ.80 ರಿಂದ 90) ಈ ರೋಗದ ತೀವ್ರತೆ ಮತ್ತು ಹರಡುವಿಕೆಗೆ ಪೂರಕವಾದ ಅಂಶಗಳಾಗಿರುತ್ತವೆ. ರೋಗವು ವರ್ಷ ಪೂರ್ತಿ ಕಂಡುಬಂದರೂ ಸಹ ಮಾರ್ಚ್ ನಿಂದ ಸೆಪ್ಟಂಬರ್ ತಿಂಗಳ ವರೆಗೂ ಹೆಚ್ಚಾಗಿ ಬಾಧೆಯನ್ನು ಉಂಟುಮಾಡುತ್ತದೆ ಎಂದು ತರಬೇತಿಯಲ್ಲಿ ತಿಳಿಸಿದರು.
ರೋಗ ನಿರ್ವಹಣೆ ಹೇಗೆ?
ರೋಗ ಬಾಧಿತ ಒಣಗಿದ ಗರಿಗಳನ್ನು ಕತ್ತರಿಸಿ ತೆಗೆದು ನಾಶಪಡಿಸುವುದರಿಂದ ರೋಗ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು. ಬಿಸಿಲು ಬೀಳುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು. ರೋಗ ಲಕ್ಷಣದ ಪ್ರಾರಂಭದಲ್ಲಿ ಮುಂಜಾಗ್ರತವಾಗಿ ಶಿಲೀಂಧ್ರನಾಶಕಗಳಾದ ಮ್ಯಾಂಕೋಜೆಬ್ (2.5 ಗ್ರಾಂ) ಅಥವಾ ಸಾಫ್ (ಮ್ಯಾಂಕೋಜೆಬ್ 63%+ ಕಾರ್ಬೆನ್ಡೈಜೀಮ್ 12%) 2 ಗ್ರಾಂ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಅಥವಾ ಹೆಕ್ಸಕೊನಜೋಲ್ 5% ಎಸ್.ಸಿ ಅಥವಾ ಪ್ರೊಪಿಕೊನಜೋಲ್ 25% ಇ.ಸಿ ಅಂತರವ್ಯಾಪಿ ಶಿಲೀಂಧ್ರನಾಶಕಗಳನ್ನು 1 ಮಿ.ಲೀ. ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಅಂಟು ದ್ರಾವಣದ (1 ಮಿ.ಲೀ) ಜೊತೆಗೆ ಸಿಂಪಡಿಸಬೇಕು ಎಂದು ಅವರು ತರಬೇತಿಯಲ್ಲಿ ತಿಳಿಸಿದರು.
https://suddikanaja.com/2021/10/14/areca-palms-suffers-from-fungal-disease-no-need-to-worry-scientist-said/