HIGHLIGHTS
- ಕುವೆಂಪು ರಂಗಮಂದಿರದಲ್ಲಿ ಅದ್ಧೂರಿಯಾಗಿ ನಾರಾಯಣ ಗುರು ಜಯಂತಿ ಆಚರಣೆ
- ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಸಮಾಜ ಬಾಂಧವರು ಭಾಗಿ
ಸುದ್ದಿ ಕಣಜ.ಕಾಂ | DISTRICT | 11 SEP 2022
ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು (brahmashree narayana guru)ಗಳ 168ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ (KS Eshwarappa) ಅವರು ಮೀಸಲಾತಿ ಕುರಿತು ಮಹತ್ವದ ವಿಚಾರವೊಂದನ್ನು ಪ್ರಸ್ತಾಪಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಆರ್ಯ ಈಡಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
VIDEO REPORT | ಉತ್ತರ ಕರ್ನಾಟಕದಲ್ಲಿ ಒಬ್ಬರಿಗೊಬ್ಬರು ಚಾಕು ಹಾಕಿಕೊಳ್ಳುತ್ತಾರೆ: ಕೆ.ಎಸ್.ಈಶ್ವರಪ್ಪ ಹೇಳಿಕೆ
READ | ಸಕ್ರೆಬೈಲಿನ ವಿಡಿಯೋ ವೈರಲ್, ರಸ್ತೆ ಬದಿಯ ವ್ಯಕ್ತಿಯೊಬ್ಬರನ್ನು ಅಟ್ಟಾಡಿಸಿಕೊಂಡು ಹೋದ ಆನೆ
ಪಂಚಮಸಾಲಿ, ಕುರುಬರ ಮೀಸಲಾತಿ ಬಗ್ಗೆ ಈಶ್ವರಪ್ಪ ಹೇಳಿದ್ದೇನು?
ಪಂಚಮಸಾಲಿ ಹಾಗೂ ಕುರುಬರಿಗೆ ಮೀಸಲಾತಿಯ ಅಗತ್ಯವಿದೆಯೇ? ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಲಿ ಎಂಬ ಉದ್ದೇಶದಿಂದ ದೀನ- ದಲಿತರಿಗೆ ಸಂವಿಧಾನದಲ್ಲಿ ಮೀಸಲಾತಿ ಸೌಲಭ್ಯ ನೀಡಲಾಗಿದೆ. ಆದರೆ, ಈಗೀಗ ಎಲ್ಲ ಜಾತಿಯವರು ಮೀಸಲಾತಿ ಕೇಳುತ್ತಿದ್ದಾರೆ. ಪಂಚಮಸಾಲಿ ಅವರು 2ಎ ಹಾಗೂ ಕುರುಬರು ಎಸ್.ಟಿ. ಮೀಸಲಾತಿ ಕೋರುತ್ತಿದ್ದಾರೆ. ನೈಜವಾಗಿ ಪ್ರಬಲ ಜಾತಿಯವರಿಗೆ ಮೀಸಲಾತಿ ಬೇಕಾ ಎಂದು ಪ್ರಶ್ನಿಸಿದರು.
ಪ್ರಬಲ ಜಾತಿಗಳು ಮೀಸಲಾತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿದ್ದಾರೆ. ಪರಿಣಾಮ, ರಾಜಕೀಯ ಪ್ರಣಾಳಿಕೆಗೂ ಇದು ಸೇರ್ಪಡೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೀಸಲಾತಿ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಅನೇಕ ಪ್ರಬಲ ಸಮುದಾಯದವರು ಮೀಸಲಾತಿ ಕೇಳುತ್ತಿರುವುದು ದುರದೃಷ್ಟಕರ. ಮೀಸಲಾತಿಯನ್ನು ಕಡು ಬಡವರಿಗೆ, ನಿರ್ಗತಿಕರಿಗೆ ಹಾಗೂ ಕೆಳವರ್ಗದ ಜನರಿಗೆ ತಲುಪಿಸುವ ಬದಲಾಗಿ ಉಳ್ಳವರೆ ಮೀಸಲಾತಿಯಿಂದ ಲಾಭ ಪಡೆಯುತ್ತಿದ್ದಾರೆ ಎಂದು ವಿಷಾದಿಸಿದರು.
READ | ಇಂದು ಓಂ ಗಣಪತಿ ವಿಸರ್ಜನೆ, ಶಿವಮೊಗ್ಗದ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಮಾರ್ಗ ಬದಲಾವಣೆ
ತುಳಿತಕ್ಕೆ ಒಳಗಾದವರ ಉನ್ನತಿಗೆ ಶ್ರಮಿಸಿದ ಮಹಾತ್ಮ
ಕೇರಳದಲ್ಲಿ ಹುಟ್ಟಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಉನ್ನತಿಗೆ ಶ್ರಮಿಸಿ, ಬಸವೇಶ್ವರ, ಕನಕದಾಸರಂತೆ ಇವರು ಸಾಮಾಜಿಕ ಬದ್ಧತೆಯಿಂದ ದೇವರುಗಳಿಗೆ ದೇವರಾಗಿದ್ದವರು ಎಂದು ಈಶ್ವರಪ್ಪ ಬಣ್ಣಿಸಿದರು.
ಮಡಿವಂತ ವ್ಯಕ್ತಿಗಳು ಈಶ್ವರನ ದೇಗುಲಗಳನ್ನು ನಿರ್ಮಾಣ ಮಾಡುತ್ತಾರೆ. ಆದರೆ ಅಲ್ಲಿ ಹಿಂದುಳಿದವರಿಗೆ ಹಾಗೂ ದಲಿತರಿಗೆ ಪ್ರವೇಶ ಇರುವುದಿಲ್ಲ. ಆದ್ದರಿಂದ, ನಾನೇ ಈಶ್ವರನ ದೇವಾಲಯ ನಿರ್ಮಿಸಿ ದಲಿತರಿಗೆ, ಹಿಂದುಳಿದರಿಗೆ ಪ್ರವೇಶಿಸುವಂತೆ ಮಾಡಿಸುತ್ತೇನೆ ಎಂದು ಬ್ರಹ್ಮಶ್ರೀಗಳು ಹೇಳಿದಂತೆ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದರು ಎಂದು ಹೇಳಿದರು.
ಮಹಾ ಪುರುಷರನ್ನೂ ಜಾತಿಗಳಿಗೆ ಸೀಮಿತಗೊಳಿಸಿ ಅವರ ಹೆಸರಿಗೆ ಧಕ್ಕೆ ತರಬಾರದು. ಎಲ್ಲ ಮಹನೀಯರು ಜಾತಿ ಮೀರಿ ಕೆಲಸ ಮಾಡಿದ್ದಾರೆ. ಆದ್ದರಿಂದ ನಾವುಗಳು ಕಟ್ಟ ಕಡೆಯ ವ್ಯಕ್ತಿಗಳನ್ನು ಸಮಾಜದ ಮುನ್ನೆಲೆಗೆ ತರುವಂತ ಕೆಲಸ ಮಾಡಿದರೆ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ನಾರಾಯಣ ಗುರುಗಳ ಕುರಿತು ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಅದ ಎಂ.ಎಸ್.ಹರೀಶ್ ಅವರು ವಿಶೇಷ ಉಪನ್ಯಾಸ ನೀಡಿದರು. ಭದ್ರಾವತಿ ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎನ್.ಜಿ ನಾಗರಾಜ್, ಮಹಾನಗರ ಪಾಲಿಕೆಯ ಸದಸ್ಯೆ ಲಕ್ಷ್ಮಿ ಶಂಕರ್ ನಾಯ್ಕ್, ಜಿ. ಪಂ.ಉಪಾಧ್ಯಕ್ಷ ದೊಡ್ಡಪ್ಪಗೌಡ, ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್. ಹೊನ್ನಳಿ, ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್, ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ, ಸಮಾಜದ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನ, ಕಿಡಿಕಾರಿದ ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ಇವರ ಬೇಡಿಕೆಗಳೇನು?