HIGHLIGHTS
- ಸಚಿವ ಸ್ಥಾನ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ ಶಾಸಕ ಕೆ.ಎಸ್.ಈಶ್ವರಪ್ಪ
- ಆರೋಪ ಮುಕ್ತನಾದರೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಇನ್ನೂ ಕರೆದು ಮಾತಾಡಿಲ್ಲ
ಸುದ್ದಿ ಕಣಜ.ಕಾಂ | KARNATAKA | 17 SEP 2022
ಶಿವಮೊಗ್ಗ: ‘ನಾನು ಮದುವೆ ಗಂಡಾಗಲು ಸಿದ್ಧನಿದ್ದೇನೆ. ಇವತ್ತೇ ಬಂದು ಮಂತ್ರಿಯಾಗು ಎಂದರೆ ಅದಕ್ಕೂ ನಾನ್ ರೆಡಿ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿದ ಅವರು, ಆರೋಪಮುಕ್ತನಾದರೆ ಮಂತ್ರಿ ಸ್ಥಾನ ನೀಡುವುದಾಗಿ ಹೇಳಿದ್ದರು. ಆದರೆ, ಇದುವರೆಗೆ ಸಂಪುಟ ವಿಸ್ತರಣೆ ಮಾಡಿಲ್ಲ. ನನಗೆ ಕರೆದೂ ಮಾತಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿದ್ದನ್ನು ಕೇಳಲು ವಿಡಿಯೋ ವೀಕ್ಷಿಸಿ (VIDEO REPORT)
‘ನನಗೆ ಸಂಪುಟದಲ್ಲಿ ಯಾವ ಕಾರಣಕ್ಕೆ ಸ್ಥಾನಮಾನ ನೀಡಿಲ್ಲ ಎಂಬ ವಿಚಾರದ ಬಗ್ಗೆ ನನಗಿಂತ ಸಚಿವ ಸ್ಥಾನ ನೀಡುವುದಾಗಿ ಹೇಳಿದವರನ್ನೇ ವಿಚಾರಿಸಬೇಕು. ನಾನು ಮಂತ್ರಿ ಸ್ಥಾನ ನೀಡುವಂತೆ ಇದುವರೆಗೆ ಯಾರಿಗೂ ಭೇಟಿಯಾಗಿಲ್ಲ, ಆಗುವುದೂ ಇಲ್ಲ’ ಎಂದು ಸಿಡಿಮಡಿಗೊಂಡರು.
ಪಕ್ಷದ ನಾಯಕರು ನಿರ್ಧಾರ ಕೈಗೊಳ್ಳುವರು
ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುವುದನ್ನು ರಾಷ್ಟ್ರದ ನಾಯಕರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.