ಸುದ್ದಿ ಕಣಜ.ಕಾಂ | KARNATAKA | 23 SEP 2022
ಶಿವಮೊಗ್ಗ (Shivamogga): ಜಿಲ್ಲಾ ಪೊಲೀಸರು ಶಂಕಿತ ಉಗ್ರರ(suspected terrorist)ನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಸಾಕಷ್ಟು ರೋಚಕ ವಿಚಾರಗಳು ಬೆಳಕಿಗೆ ಬಂದಿವೆ. ಅವರು ಬಾಂಬ್ (Bomb) ತಯಾರಿಕೆಯನ್ನು ಕಲಿತಿದ್ದೆಲ್ಲಿ, ಪ್ರಯೋಗಾರ್ಥ ಬಾಂಬ್ ಸ್ಫೋಟ(Experimental bombing)ಗೊಳಿಸಿದ್ದೆಲ್ಲಿ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಇನ್ನೂ ಸಾಕಷ್ಟು ವಿಚಾರಗಳ ಬಗ್ಗೆ ತಿಳಿದುಬರಬೇಕಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ (BM Lakshmiprasad) ಅವರು ಶುಕ್ರವಾರ ಮಾಧ್ಯಮಗೋಷ್ಠಿ ಕರೆದು ಮಾತನಾಡಿದ್ದು ಈ ಎಲ್ಲ ಅಂಶಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
READ | ಶಂಕಿತ ಉಗ್ರರ ಪ್ರಕರಣ, ಶಿವಮೊಗ್ಗದ 11 ಕಡೆಗಳಲ್ಲಿ ದಾಳಿ, ಮಹತ್ವದ ದಾಖಲೆ ವಶಕ್ಕೆ
ಸುಳಿವು ಸಿಕ್ಕಿದ್ದು ಹೇಗೆ?
- ಆಗಸ್ಟ್ 15ರಂದು ಪ್ರೇಮ್ ಸಿಂಗ್’ಗೆ ಚಾಕು ಇರಿತ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಜಬೀ ಈ ಪ್ರಕರಣದ ಕಿಂಗ್ ಪಿನ್ ಆಗಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಜಬೀ ತೀರ್ಥಹಳ್ಳಿಯ ಶಾರೀಕ್ ಜತೆಗೆ ಸಂಪರ್ಕ ಹೊಂದಿರುವುದು ಗೊತ್ತಾಗಿದೆ. ಶಾರೀಕ್ 2020ರಲ್ಲಿ ಮಂಗಳೂರಿನ ಗೋಡೆ ಬರಹದ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದು, ಸುಮಾರು 8 ತಿಂಗಳವರೆಗೆ ಜೈಲಿನಲ್ಲಿದ್ದು, ಫೆಬ್ರವರಿ 2021 ಬಿಡುಗಡೆಯಾಗಿರುತ್ತಾನೆ.
- ಶಾರೀಕ್ ಸಹಚರರಾದ ಮಂಗಳೂರಿನ ಮಾಜ್ ಹಾಗೂ ಶಿವಮೊಗ್ಗದ ಸಿದ್ದೇಶ್ವರನಗರ ನಿವಾಸಿ ಸೈಯಯದ್ ಯಾಸೀನ್ ಅಲಿಯಾಸ್ ಬೈಲ್ ಎಂಬಾತನನ್ನು ಬಂಧಿಸಲಾಗಿದೆ. ಬಂಧಿಸಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.
- ಸೈಯದ್ ಯಾಸಿನ್ ಪಿ.ಯು.ಸಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಆತನ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಾಜ್ ಮುನೀರ್ ಅಹಮ್ಮದ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಮಾಜ್ ಮುನೀರ್ ಅಹಮ್ಮದ್ ಮುಖಾಂತರ ಯಾಸಿನ್ಗೆ ಶಾರೀಕ್ನ ಪರಿಚಯವಾಯಿತು. ತಾನು ಮಾಜ್ ಮತ್ತು ಶಾರೀಕ್ ಭೇಟಿಯಾದಾಗಲೆಲ್ಲ ಶಾರೀಕ್ ಮತ್ತು ಮಾಜ್ ಮುಸ್ಲಿಂ ಮೂಲಭೂತವಾದದ ಬಗ್ಗೆ ಮಾತನಾಡುತ್ತಿದ್ದರು. ಯಾಸಿನ್ನ ಮೊಬೈಲ್ಗೆ ಮುಸ್ಲಿಂ ಉಗ್ರವಾದಿಗಳಿಗೆ ಸಂಬಂದಿಸಿದ ಮತ್ತು ಇಸ್ಲಾಂಗೆ ಸಂಬಂದಿಸಿದ ಪಿ.ಡಿ.ಎಫ್, ಪೈಲ್ಗಳನ್ನು, ವಿಡಿಯೋ-ಆಡಿಯೋಗಳನ್ನು ಮತ್ತು ಅವುಗಳ ಲಿಂಕ್ಗಳನ್ನು ಟೆಲಿಗ್ರಾಂ, ಇನ್ಸಾ ಗ್ರಾಮ್, ವೈ, ಎಲಿಮೆಂಟ್ ಇತ್ಯಾದಿ ಮೆಸ್ಸೆಂಜರ್ ಆಪ್ಗಳ ಮುಖಾಂತರ ಕಳುಹಿಸುತ್ತಿದ್ದನು ಎಂದು ಎಸ್.ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
READ | ಶಿವಮೊಗ್ಗದ ಪ್ರಕರಣವನ್ನು NIA ತನಿಖೆ ವಹಿಸಿದ್ದಕ್ಕೆ ಪ್ರಶ್ನಿಸಿದವರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಟಾಂಗ್
ಟೆಲಿಗ್ರಾಂನಲ್ಲೇ ಬಾಂಬ್ ತಯಾರಿಕೆಯ ಟ್ರೈನಿಂಗ್
ಆರೋಪಿಗಳು ತಮ್ಮ ಮೊಬೈಲ್’ಗಳಲ್ಲಿ ಟೆಲಿಗ್ರಾಂ ಆಪ್ ಅನ್ನು ಹೊಂದಿದ್ದರು. “ಇಸ್ಲಾಂಮಿಕ್ ಸ್ಟೇಟ್” ಅಧಿಕೃತ ಮಾಧ್ಯಮವಾದ “ಅಲ್-ಹಯತ್”ನ ಟೆಲಿಗ್ರಾಂ ಚಾನಲ್ ನ ಸದಸ್ಯರಾಗಿದ್ದರು. ಇದರಿಂದ ಐಸಿಎಸ್ ಅವರ ಬಹಳಷ್ಟು ಪ್ರಚಾರಕ್ಕೆ ಸಂಬಂಧಿಸಿದ ಸಾಮಾಗ್ರಿಗಳನ್ನು ಸ್ವೀಕರಿಸುತ್ತಿದ್ದರು.
ಶಾರೀಕ್ ಹಂಚಿಕೊಂಡ ಪಿ.ಡಿ.ಎಫ್. ಫೈಲ್ಗಳ ಮತ್ತು ವಿಡಿಯೋಗಳಲ್ಲಿ ಬಾಂಬ್ ತಯಾರು ಮಾಡುವ ವಿದಾನವನ್ನು ತಿಳಿದುಕೊಂಡು ಅದಕ್ಕೆ ಬೇಕಾಗಿರುವ ಟೈಮರ್, ರೀಲೆ ಸಕ್ರ್ಯೂಟ್ಗಳನ್ನು ಅಮೇಜಾನ್ನ ಮುಖಾಂತರ ಖರೀದಿಸಿದ್ದು, ಶಿವಮೊಗ್ಗದಲ್ಲಿ 9 ವೊಲ್ಡ್ನ ಎರಡು ಬ್ಯಾಟರಿಗಳು, ಸ್ವಿಚ್, ವೈರ್ಗಳು, ಮ್ಯಾಚ್ ಬಾಕ್ಸ್ಗಳು ಹಾಗೂ ಇತರೆ ಸ್ಫೋಟಕ ವಸ್ತುಗಳನ್ನು ಖರೀದಿಸಿ ಬಾಂಬ್ ತಯಾರುಮಾಡಿರುತ್ತಾರೆ ಎಂದು ಎಸ್.ಪಿ ತಿಳಿಸಿದರು.
ಸ್ಫೋಟಕ ಟೆಸ್ಟಿಂಗ್ ನಡೆದಿದ್ದೆಲ್ಲಿ?
ಶಿವಮೊಗ್ಗದ ತುಂಗಾನದಿಯ ದಡದಲ್ಲಿರುವ ಸ್ಥಳೀಯವಾಗಿ ‘ಕೆಮ್ಮನಗುಂಡಿ’ ಎಂದು ಕರೆಯುವ ಜಾಗದಲ್ಲಿ ಆರೋಪಿಗಳು ತಯಾರಿಸಿದ ಬಾಂಬ್ ಅನ್ನು ಪ್ರಾಯೋಗಿಕವಾಗಿ ಸ್ಫೋಟ ಮಾಡಿದ್ದಾರೆ. ಪ್ರಾಯೋಗಿಕವಾಗಿ ಮಾಡಿರುವ ಸ್ಫೋಟವು ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಜಿಹಾದ್ ಮಾಡಲು ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿರುತ್ತಾರೆ.
ರಾಷ್ಟ್ರ ಧ್ವಜ ಸುಟ್ಟ ಶಂಕಿತ ಉಗ್ರರು
ಸ್ವಾತಂತ್ರ್ಯ ದಿನಾಚರಣೆಯ ನಂತರದ ದಿನಗಳಲ್ಲಿ ಭಾರತ ದೇಶದ ರಾಷ್ಟ್ರ ಧ್ವಜವನ್ನು ಬಾಂಬ್ ಸಿಡಿಸಿದ ಜಾಗದ ಹತ್ತಿರ ಸುಟ್ಟು ಹಾಕಿ ಅದನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿರುತ್ತಾರೆ. ಬಾಂಬ್ ತಯಾರಿಸಲು ಬೇಕಾದ ಹಣವನ್ನು ಶಾರೀಕ್ ಆನ್ ಲೈನ್ ಮುಖಾಂತರ ಯಾಸಿನ್ಗೆ ಕಳುಹಿಸಿರುತ್ತಾನೆ.
ವಿವಿಧೆಡೆ ದಾಳಿ, ಸಿಕ್ಕಿದ್ದೇನು?
ಪ್ರಕರಣದ ಮೂರು ಜನ ಆರೋಪಿತರ ಮತ್ತು ಅವರ ಸಂಬಂಧಿಕರ ಮನೆಗಳು ಸೇರಿದಂತೆ ಶಿವಮೊಗ್ಗ ನಗರ, ಮಂಗಳೂರು ನಗರ ಹಾಗೂ ತೀರ್ಥಹಳ್ಳಿಯಲ್ಲಿ ಒಟ್ಟು 11 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧಿಸಲಾಗಿದೆ. ಈ ವೇಳೆ ಸಾಕಷ್ಟು ಸಾಮಗ್ರಿಗಳು ಸಿಕ್ಕಿವೆ ಎಂದು ಎಸ್.ಪಿ ತಿಳಿಸಿದರು.
- ಒಟ್ಟು 14 ಮೊಬೈಲ್ಗಳು ಮತ್ತು 1 ಡಾಂಗಲ್
2 ಲ್ಯಾಪ್ಟಾಪ್ಗಳು, 1 ಪೆನ್ ಡ್ರೈವ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ಗ್ಯಾಡ್ಜಟ್’ಗಳು
ಬಾಂಬ್ ಸ್ಫೋಟ ಮಾಡಿದ ಸ್ಥಳದಲ್ಲಿ ದೊರಕಿದ ಛಿದ್ರಗೊಂಡ ಬಾಂಬಿನ ಅವಶೇಷಗಳು - ಬಾಂಬ್ ತಯಾರಿಸಲು ಬೇಕಾದ ಸಾಮಗ್ರಿಗಳು
- ಅರೆಬರೆ ಸುಟ್ಟಿರುವ ಭಾರತದ ತ್ರಿವರ್ಣ ರಾಷ್ಟ್ರ ಧ್ವಜ
- ಪ್ರಮುಖ ದಸ್ತಾವೇಜುಗಳು ಮತ್ತು ದಾಖಲಾತಿಗಳು
- ಆರೋಪಿತ ಶಾರೀಕ್ ಈತನು ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ರಿಡ್ಜ್ ಕಾರ್
Arrest | ಐಸಿಸ್’ನೊಂದಿಗೆ ಶಿವಮೊಗ್ಗ ಲಿಂಕ್, ಶಾರೀಕ್ ಸಹಚರರು ಅರೆಸ್ಟ್, ಕಿಂಗ್ ಪಿನ್ ಎಸ್ಕೇಪ್