- ಶಾಲೆಗಳ ಕ್ಯಾಂಪಸ್ನಲ್ಲಿ ಡ್ರೋನ್ ಕಾವಲು
- ಶಿಕ್ಷಣ ಇಲಾಖೆ ಎಚ್ಚರಿಕೆ ಹಿನ್ನೆಲೆ ಮಕ್ಕಳೂ ಜಾಥಾದಿಂದ ದೂರ
- ಧರ್ಮಗುರುಗಳ ಸಮಾಗಮಕ್ಕೆ ವೇದಿಕೆಯಾದ ನಮ್ಮ ನಡಿಗೆ ಶಾಂತಿಯ ಕಡೆಗೆ ಜಾಥಾ
- ರಸ್ತೆಯುದ್ದಕ್ಕೂ ತ್ಯಾಜ್ಯ ವಿಲೇವಾರಿ ಮಾಡಿದ ಸ್ವಯಂ ಸೇವಕರ ತಂಡ
- ಜಾಥಾದಲ್ಲಿ ಪಾಲ್ಗೊಂಡವರಿಗೆ ಬಿಸ್ಕೆಟ್, ಕುಡಿಯುವ ನೀರಿನ ವ್ಯವಸ್ಥೆ
- ಜಾಥಾಕ್ಕೆ ಜಿಲ್ಲಾಡಳಿತ, ರಕ್ಷಣಾ ಇಲಾಖೆ ಸಹಕಾರ
ಸುದ್ದಿ ಕಣಜ.ಕಾಂ | DISTRICT | 03 SEP 2022
ಶಿವಮೊಗ್ಗ: ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಹಿರಿಮೆ ಹೊಂದಿದ ಶಿವಮೊಗ್ಗದಲ್ಲಿ ಶಾಂತಿಯನ್ನು ಕದಡಬಾರದು. ಒಂದು ವೇಳೆ ಅಂತಹ ಪ್ರಸಂಗಗಳು ನಡೆದರೆ ಸತ್ಯಾಗ್ರಹ ಮಾಡಬೇಕಾದೀತು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಗುರುಗಳ ನೇತೃತ್ವದಲ್ಲಿ ಸಮಾನ ಮನಸ್ಕರು, ವಿವಿಧ ಸಂಘ, ಸಂಸ್ಥೆಗಳು, ಸಂಘಟನೆಗಳು, ರೈತ ಮುಖಂಡರು, ಪ್ರಗತಿಪರ ಚಿಂತಕರು, ವರ್ತಕರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಶನಿವಾರ ಹಮ್ಮಿಕೊಂಡಿದ್ದ ‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಬೃಹತ್ ಶಾಂತಿ ನಡಿಗೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಸಿಮ್ಸ್)ನಿಂದ ಆರಂಭಗೊಂಡು ಸೈನ್ಸ್ ಮೈದಾನದಲ್ಲಿ ಸಮಾವೇಶಗೊಡಿತುಲ. ಈ ಸಂದರ್ಭದಲ್ಲಿ ಶ್ರೀಗಳು ಮಾತನಾಡಿದರು.
ಧರ್ಮಗುರುಗಳ ಸಮ್ಮುಖದಲ್ಲಿ ಆರಂಭಗೊಂಡ ಈ ಶಾಂತಿ ನಡಿಗೆ ಮೊದಲ ಹಂತವಷ್ಟೆ. ನಿರಂತರ ಶಾಂತಿಗಾಗಿ ಈ ವೇದಿಕೆ ಸಂಕಲ್ಪ ಮಾಡುತ್ತದೆ. ಯಾವುದೇ ರೀತಿಯಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ನಡೆದರೆ ಎಲ್ಲ ಧರ್ಮಗುರುಗಳು ಒಂದಾಗಿ ಸತ್ಯಾಗ್ರಹ ಮಾಡುವಲ್ಲಿ ಹಿಂದೆ ಬೀಳುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ಇದು ಅಪರೂಪ ಹಾಗೂ ಅಭೂತಪೂರ್ವ ನಡಿಗೆ, ಇದು ಸಮಯೋಚಿತ ಮತ್ತು ಅರ್ಥಪೂರ್ಣ. ಶಾಂತಿಯ ಕರೆ ಮೊದಲೇನಲ್ಲ, ಸ್ವಾತಂತ್ರ್ಯಪೂರ್ವದಿಂದಲೂ ನಡೆಯುತ್ತಲೇ ಬಂದಿದೆ. ತ್ಯಾಗ, ಬಲಿದಾನಗಳಿಂದ ದೊರೆತ ಸ್ವಾತಂತವನ್ನು ದುರ್ಬಳಕೆ ಮಾಡಿಕೊಂಡರೆ ಸಹಿಸುವುದಿಲ್ಲ. ಈ ನಡಿಗೆ ರಾಜ್ಯ, ದೇಶಕ್ಕೆ ಮಾದರಿ ಆಗಲಿ. ಎಲ್ಲ ಇದು ದೇಶಾದ್ಯಂತ ನಡೆಯುವಂತಾಗಲಿ ಎಂದು ಕರೆಕೊಟ್ಟರು.
ಶಿವಮೊಗ್ಗ ಶಾಂತಿಯ ತವರೂರು. ಎಲ್ಲರೂ ಸಾಮರಸ್ಯ, ಸೌಹಾರ್ದದಿಂದ ಬಾಳಬೇಕು. ಇವನಾರವ ಎನ್ನುವ ಬದಲು ಇವ ನಮ್ಮವ ಎಂದು ಕಾಣಬೇಕು. ರಾಷ್ಟ್ರಕವಿ ಅವರ ವಿಶ್ವ ಮಾನವ ಸಂದೇಶ ನಾವೆಲ್ಲರೂ ಸಾಕಾರಗೊಳಿಸಬೇಕು.
| ಡಾ.ಕ್ಲಿಫರ್ಡ್ ರೋಷನ್ ಪಿಂಟೋ, ನಿರ್ದೇಶಕ
VIDEO REPORT
ವಿವಿಧ ಧರ್ಮ ಗುರುಗಳಿಲ್ಲದ ವಿಷ ಬೀಜ ನಮಗ್ಯಾಕೆ ಬೇಕು. ಜಿಲ್ಲೆಯು ಶಾಂತಿ ಬೀಡು. ಅಶಾಂತಿ ಬಿತ್ತುವವರಿಗೆ ಇದು ಎಚ್ಚರಿಕೆ. ಜಿಲ್ಲೆಯಲ್ಲಿ ಕೈಗಾರಿಕೆ ಉದ್ಯಮಿಗಳು ಬರುವಂತಾಗಬೇಕು. ಯುವಕರಿಗೆ ಉದ್ಯೋಗ ದೊರೆಯುವಂತಾಗಬೇಕು. ಇದು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ವಿವಿಧತೆಯಲ್ಲಿ ಏಕತೆ ಹೊಂದಿದೆ. ಈ ವೇದಿಕೆ ಸ್ವಾಹಾರ್ದತೆ ಕೇಂದ್ರವಾಗಿ ಕಂಗೊಳಿಸುತ್ತಿದೆ.
| ಮೌಲಾನ ಶಾವುಲ್ ಹಮೀದ್, ಮುಸ್ಲಿಂ ಧರ್ಮಗುರು
ಕಳೆಗಟ್ಟಿದ ಶಾಂತಿ ಮೆರವಣಿಗೆ
ಬೆಳಗ್ಗೆ 10.30 ಗಂಟೆಗೆ ಸಿಮ್ಸ್ ಮುಂಭಾಗ ಜಿಲ್ಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಾಫ ಹುಸೇನ್, ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಅಲ್ಲಿಂದ ಆರಂಭಗೊಂಡ ಶಾಂತಿ ನಡಿಗೆ ಮುಖ್ಯ ಬಸ್ ನಿಲ್ದಾಣ ಮೂಲಕ ಬಿ.ಎಚ್.ರಸ್ತೆ ಮಾರ್ಗವಾಗಿ ಅಮೀರ್ ಅಹಮದ್ ವೃತ್ತ, ಶಿವಪ್ಪನಾಯಕ ಸರ್ಕಲ್ ಮೂಲಕ ಹೊರಟು ಸೈನ್ಸ್ ಮೈದಾನ ತಲುಪಿತು. 6 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಶ್ರೀ ಬಸವ ಮರುಳ ಸಿದ್ಧ ಸ್ವಾಮೀಜಿ, ಜಡೆಮಠದ ಶ್ರೀ ಮಹಾಂತ ಸ್ವಾಮೀಜಿ, ಮುಸ್ಲಿಂ ಧರ್ಮಗುರುಗಳಾದ ಮುಫ್ತಿ ಅಖೀಲ್ ರಜಾ, ಮೌಲಾನ ಶಾವುಲ್ ಹಮೀದ್, ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಸರ್ಜಿ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ, ಓಪನ್ ಮೈಂಡ್ಸ್ ವಲ್ರ್ಡ್ ಶಾಲೆಯ ವ್ಯವಸ್ಥಾಪಕ ಕೆ.ಕಿರಣ್ ಕುಮಾರ್, ವಕೀಲ ಕೆ.ಪಿ.ಶ್ರೀಪಾಲ್, ಡಿ.ಎಸ್.ಎಸ್. ರಾಜ್ಯ ಸಂಚಾಲಕ ಗುರುಮೂರ್ತಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ಉಪಸ್ಥಿತರಿದ್ದರು.
https://suddikanaja.com/2022/09/01/namma-nade-shanthi-kade-in-shimoga/