ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಲೆನಾಡಿನ ಕುಗ್ರಾಮಗಳಿಗೂ 4ಜಿ ನೆಟ್ವರ್ಕ್ ಸೇವೆ ಶೀಘ್ರವೇ ಸಿಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ಶಿವಮೊಗ್ಗ ಜಿಲ್ಲೆಯಲ್ಲಿ 54 ಟವರ್’ಗಳ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಶಿವಮೊಗ್ಗ ಲೋಕಸಭಾ ಕ್ಷೇತ ವ್ಯಾಪ್ತಿಯ ನೆಟ್ವರ್ಕ್ ಸಂಪರ್ಕವಿಲ್ಲದ ಗ್ರಾಮೀಣ ಪ್ರದೇಶಗಳಿಗೆ ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆಯಾದ 4ಜಿ ಟವರ್’ಗಳನ್ನು ಮಂಜೂರು ಮಾಡಿದೆ. ದೂರ ಸಂಪರ್ಕ ವ್ಯವಸ್ಥೆಯಲ್ಲಿನ ಅಭಿವೃದ್ಧಿ ಮತ್ತು ಸುಧಾರಣಾ ದೃಷ್ಟಿಯಿಂದ ಕೇಂದ್ರದ ದೂರ ಸಂಪರ್ಕ ಸಚಿವ ಅಶಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ನೆಟ್ವರ್ಕ್ ಸೇವೆಯಿಂದ ವಂಚಿತ 96 ಕುಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಿಗೆ ತುರ್ತಾಗಿ ದೂರಸಂಪರ್ಕ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಲಾಗಿತ್ತು. ಅದಕ್ಕೆ ಸ್ಪಂದಿಸಿದ ಸಚಿವರು ಮೊದಲನೇ ಹಂತದಲ್ಲಿ 54ಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.
ಆತ್ಮನಿರ್ಭರ ಭಾರತದ 4ಜಿ ಟೆಕ್ನಾಲಜಿ ಯೋಜನೆಯಡಿ ದೇಶದಾದ್ಯಂತ ನೆಟ್ವವರ್ಕ್ ಇಲ್ಲದ ಕುಗ್ರಾಮಗಳಿಗೆ ಅತ್ಯಾಧುನಿಕ ದೂರಸಂಪರ್ಕ ನೀಡಲು 26,136 ಕೋಟಿ ರೂ. ವೆಚ್ಚದ 4ಜಿ ಮೊಬೈಲ್ ಸರ್ವಿಸ್ ಯೋಜನೆ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿ ದೇಶದ ಸುಮಾರು 24,680 ಕುಗ್ರಾಮಗಳಿಗೆ 4ಜಿ ಮೊಬೈಲ್ ಸರ್ವಿಸ್ ನೀಡಲಾಗುವುದು. ಆತ್ಮನಿರ್ಭರ ಭಾರತ ಯೋಜನೆಯ ಯೂನಿವರ್ಸಲ್ ಸರ್ವಿಸ್ ಆಬ್ಲಿಗೇಷನ್ ಫಂಡ್(ಯುಎಸ್.ಒಎಫ್)ನಿಂದ ಬಿಎಸ್ಸೆನ್ನೆಲ್ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
READ | ಭದ್ರಾವತಿ ಬೈಪಾಸ್’ನಲ್ಲಿ ಭೀಕರ ಅಪಘಾತ, ಪತಿಯ ನೋಡಲು ಹೋಗುತ್ತಿದ್ದ ಪತ್ನಿ ಅಪಘಾತದಲ್ಲಿ ಸಾವು
ನೆಟ್ವರ್ಕ್ ಕ್ಷೇತ್ರದಲ್ಲಿ ಕೇಂದ್ರ ನೀಡಿದ್ದೇನು?
- ಕರ್ನಾಟಕದ ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿಯ ಹಳ್ಳಿಗಳು, ಹರಿಯಾಣ, ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳ ತಾಲ್ಲೂಕುಗಳನ್ನು ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 54 ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆಯಾದ 4ಜಿ ಟವರ ಮಂಜೂರು ಮಾಡಲಾಗಿದೆ. ಹೊಸನಗರ 24, ಸಾಗರ 12, ಶಿವಮೊಗ್ಗ 3, ತೀರ್ಥಹಳ್ಳಿ 11 ಮತ್ತು ಬೈಂದೂರು 4 ಮಂಜೂರು. ಇನ್ನುಳಿದ ಗ್ರಾಮಗಳನ್ನು ಶೀಘ್ರವೇ ಪಟ್ಟಿಗೆ ಸೇರಿಸಲು ಕ್ರಮ.
- ಬ್ಯಾಟರಿ ಬ್ಯಾಕ್ ಅಪ್ ಇಲ್ಲದೇ ಆಗಾಗ ದೂರ ಸಂಪರ್ಕ ವ್ಯವಸ್ಥೆಯಲ್ಲಿ ಆಗುತ್ತಿರುವ ಅಡಚಣೆ ಕುರಿತು ಸಚಿವರ ಗಮನಕ್ಕೆ ತರಲಾಗಿತ್ತು. ಇದಕ್ಕಾಗಿ ಅವರು 22 ಬ್ಯಾಟರಿ ಸೆಟ್ಗಳ ಮಂಜೂರಾತಿ ನೀಡಿರುವುದಲ್ಲದೇ, ಇನ್ನುಳಿದಂತೆ ಇಡೀ ಜಿಲ್ಲೆಯಾದ್ಯಂತ ದೂರಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ 104 ಬ್ಯಾಟರಿ ಸೆಟ್’ಗಳ ಮಂಜೂರು
- ದೂರಸಂಪರ್ಕ ಕ್ಷೇತ್ರದಲ್ಲಿ ಹಲವಾರು ಸುಧಾರಣಾ ಕ್ರಮಗಳು ಜಾರಿಯಲ್ಲಿದ್ದು, ಭಾರತ್ ನೆಟ್ ವ್ಯವಸ್ಥೆಯಡಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಅತ್ಯಂತ ಸುಧಾರಿತ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗುತ್ತಿದ್ದು ಈಗಾಗಲೇ 151 ಗ್ರಾ.ಪಂಗಳಿಗೆ ನೀಡಲಾಗಿದೆ. ಉಳಿದ ಗ್ರಾ.ಪಂಗಳಿಗೂ ಆದಷ್ಟು ಶೀಘ್ರವಾಗಿ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
- ಮಲೆನಾಡಿನ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯಲ್ಲಿನ ನೆಟ್ವರ್ಕ್ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೆ ಮೇರೆಗೆ ಕೇಂದ್ರ ಸರ್ಕಾರವು ಭಾರತ್ ನೆಟ್ ಉದ್ಯಮಿ(ಬಿಎನ್.ಯು) ಸ್ಕೀಂ ಅಡಿಯಲ್ಲಿ ದೇಶದ ನಾಲ್ಕು ಬ್ಲಾಕ್’ಗಳಲ್ಲಿ ಪೈಲಟ್ ಯೋಜನೆಯಾಗಿ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಬಿಎಸ್ಸೆನ್ನೆಲ್ ವತಿಯಿಂದ ಕಾರ್ಯಗತಗೊಳಿಸಲು ತೀರ್ಮಾನ
- ವಿವಿಧ ಆಪರೇಟರ್’ಗಳಿಂದ ಪಡೆಯಲಾದ ಲೆವಿ ಮೊತ್ತವನ್ನು ಯುಎಸ್.ಓಎಫ್ ಅಡಿಯಲ್ಲಿ ವಿನಿಯೋಗಿಸಿ, ದೇಶದ ವಿವಿಧೆಡೆ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಯೋಜನೆಯಡಿ ಸಂಪರ್ಕ ಪಡೆಯಲು ಯಾವುದೇ ವೆಚ್ಚ ಇರುವುದಿಲ್ಲ. ಉಚಿತವಾಗಿ ಮೊಡೆಮ್ ಒದಗಿಸಲಾಗುತ್ತದೆ.
- 200 ಎಂಬಿಪಿಎಸ್ ವರೆಗಿನ ಸ್ಪೀಡ್ ಲಭ್ಯವಿದ್ದು ಮೊದಲ 75 ದಿನಗಳವರೆಗೆ ಉಚಿತವಾಗಿದ್ದು ನಂತರ ಕೇವಲ 275 ರೂ. ಮಾತ್ರ ಶುಲ್ಕ ಪಡೆಯಲಾಗುವುದು. ಈ ಯೋಜನೆಯನ್ನು ಡಿಸೆಂಬರ್ ಅಂತ್ಯದೊಳಗೆ ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ.
ಮಾಧ್ಯಮಗೋಷ್ಠಿಯಲ್ಲಿ ಬಿಎಸ್ಸೆನ್ನೆಲ್ ಜನರಲ್ ಮ್ಯಾನೇಜರ್ ಧನಂಜಯ ಕುಮಾರ್ ತ್ರಿಪಾಠಿ, ಡೆಪ್ಯುಟಿ ಜನರಲ್ ಮ್ಯಾನೇಜರ್’ಗಳಾದ ಕೃಷ್ಣ ಮೊಗೇರ್, ಎಚ್.ಎಸ್.ವೆಂಕಟೇಶ್, ಶೇಷಗಿರಿ ಇದ್ದರು.
TOP 10 NEWS | ಶಿವಮೊಗ್ಗದ ಇಂದಿನ ಟಾಪ್ 10 ಸುದ್ದಿಗಳು, ಜಿಲ್ಲೆಯ ವಿವಿಧ ಬೆಳವಣಿಗೆಗಳ ಮಾಹಿತಿ ಇಲ್ಲಿದೆ