ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸೂಚನೆ ಮೇರೆಗೆ ಶಿವಮೊಗ್ಗ ಸ್ಮಾರ್ಟ್ ಸಿಟಿ (shimoga smart city) ವತಿಯಿಂದ ಶಿವಮೊಗ್ಗ ನಗರಕ್ಕೆ ಸಂಬಂಧಿಸಿದಂತೆ ‘ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ’ವನ್ನು ತಯಾರಿಸುವ ಸಲುವಾಗಿ ನಾಗರಿಕ ಅಭಿಪ್ರಾಯ ಸಂಗ್ರಹಣೆಯ ಸಮೀಕ್ಷೆ ಕಾರ್ಯವನ್ನು ನವೆಂಬರ್ 9 ರಿಂದ ಡಿಸೆಂಬರ್ 23 ರವರೆಗೆ ಕೈಗೊಳ್ಳಲಾಗುವುದು.
ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ನ.9 ರಂದು ಮಧ್ಯಾಹ್ನ 2.30 ಕ್ಕೆ ವರ್ಚುಯಲ್ ಆಗಿ ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ ತಯಾರಿಸಲು ಮಾಡುತ್ತಿರುವ ಸಮೀಕ್ಷೆ ‘ಸಿಟಿಜೆನ್ ಪರ್ಸೆಪ್ಷನ್ ಸರ್ವೇ’ ಕಾರ್ಯವನ್ನು ಉದ್ಘಾಟಿಸಿದರು.
ಯಾವ ಉದ್ದೇಶಕ್ಕಾಗಿ ಸಮೀಕ್ಷೆ, ಏನು ಪ್ರಯೋಜನ?
ವಿವಿಧ ಇಲಾಖೆಗಳಡಿ ನಾಗರಿಕರಿಗೆ ದೊರೆತ ಸೌಲಭ್ಯಗಳ ಮೌಲ್ಯಮಾಪನ ಮಾಡಿ, ಅನುಷ್ಠಾನಗೊಂಡ ಯೋಜನೆಗಳು, ನಾಗರಿಕರ ಜೀವನ ಮಟ್ಟ, ಆರ್ಥಿಕ ಸಾಮರ್ಥ್ಯ ಮತ್ತು ಸುಸ್ಥಿರತೆಯನ್ನು ಪ್ರತಿಬಿಂಬಿಸುವಲ್ಲಿ ಶಿವಮೊಗ್ಗ ನಗರವು ಯಾವ ಸ್ಥಾನದಲ್ಲಿದೆ ಎಂಬುದನ್ನು ಅರಿಯಲು ಈ ಸಮೀಕ್ಷಾ ಸೂಚ್ಯಂಕ ಸಹಕಾರಿಯಾಗಿದೆ.
READ | ದೇಶದಲ್ಲಿ ಇದೇ ಮೊದಲು ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ, ಶಿವಮೊಗ್ಗದಿಂದ ಸಾವಿರ ವಿದ್ಯಾರ್ಥಿಗಳು ಭಾಗಿ
ಈ ಸೂಚ್ಯಂಕದ ಆಧಾರದ ಮೇಲೆ ನಗರ ಯೋಜನೆಗಳ ನೀತಿ ನಿರೂಪಣೆ ಮತ್ತು ಯೋಜನೆಗಳ ಅನುಷ್ಠಾನವನ್ನು ಸರ್ಕಾರ ಕೈಗೊಳ್ಳುತ್ತದೆ. ಸಮೀಕ್ಷೆಯು ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಇದ್ದು, ಕ್ಯೂ ಆರ್ ಕೋಡ್ ಮೂಲಕ ಹಾಗೂ https://eoj2022.org/ ಲಿಂಕ್ ಬಳಸಿ ಸಿಟಿಜೆನ್ ಪರ್ಸೆಪ್ಷನ್ ಸರ್ವೇ(Citizen Perception Survey) ಎಂಬ ಈ ಸಮೀಕ್ಷೆಯಲ್ಲಿ ಶಿವಮೊಗ್ಗ ನಗರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ದಾಖಲಿಸುವಂತೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಕೋರಿದ್ದಾರೆ.