ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಎಲೆಚುಕ್ಕೆ ರೋಗ(Arecanut leaf spot )ದಿಂದಾಗಿ ಆಗುಂಬೆ ಹಾಗೂ ನಗರ ಹೋಬಳಿಗಳಲ್ಲಿ ಸುಮಾರು 6,395 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ತೋಟಗಳಿಗೆ ಹಾನಿ ಉಂಟಾಗಿದೆ. ಈ ರೋಗದಿಂದಾಗಿ ಶೇ.20ರಿಂದ 25ರಷ್ಟು ಇಳುವರಿ ಹಾಗೂ ಮರಗಳಿಗೆ ಹಾನಿ ಉಂಟಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ (Dr.S.Selvamani) ಹೇಳಿದರು.
ಎಪಿಎಲ್ ಕಾರ್ಡಿಗೆ ಸಲ್ಲಿಸಿರುವ 662 ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು.
– ಡಾ.ಎಸ್.ಸೆಲ್ವಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ಹಾಗೂ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅಡಿಕೆ ಮರಗಳಿಗೆ ಕಂಡು ಬಂದಿರುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ರೈತರಿಗೆ ಉಚಿತವಾಗಿ ಔಷಧಿ ವಿತರಿಸಲು ಈಗಾಗಲೇ 1.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಅಡಿಕೆ ಬೆಳೆಗಾರರಿಗೆ ಎಲ್ಲ ನೆರವು ಒದಗಿಸಲು ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
READ | ಹಣ ಕೊಡುವ ಮುನ್ನ ಹುಷಾರ್, ಕೊಟ್ಟಿದ ಹಣ ವಾಪಸ್ ಕೇಳಿದ್ದಕ್ಕೆ ಆತ್ಮಹತ್ಯೆಯ ಬೆದರಿಕೆ!
ಎಲ್ಲೆಲ್ಲಿ ಎಷ್ಟೆಷ್ಟು ಎಲೆಚುಕ್ಕೆ ರೋಗ?
ಶಿವಮೊಗ್ಗ 250 ಹೆಕ್ಟೆರ್, ಭದ್ರಾವತಿ 87 ಹೆಕ್ಟೆರ್, ಶಿಕಾರಿಪುರ 188 ಹೆಕ್ಟೆರ್, ಸೊರಬ 200 ಹೆಕ್ಟೆರ್, ಸಾಗರ 1820 ಹೆಕ್ಟೆರ್, ಹೊಸನಗರ 1850 ಹೆಕ್ಟೆರ್, ಹಾಗೂ ತೀರ್ಥಹಳ್ಳಿಯಲ್ಲಿ 2 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಎಲೆಚುಕ್ಕೆ ರೋಗ ಕಂಡು ಬಂದಿದ್ದು, ಜಿಲ್ಲೆಗೆ ಸರ್ಕಾರ ಪ್ರಥಮ ಹಂತದಲ್ಲಿ 1.21 ಕೋಟಿ ರೂ. ಅನುದಾನ ಬಿಡುಗಡೆಗೆ ಮಂಜೂರಾತಿ ನೀಡಿದೆ ಎಂದು ಹೇಳಿದರು.
ರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಈ ಕುರಿತು ಸಮೀಕ್ಷೆ ನಡೆಸಲು ಕೇಂದ್ರ ತಂಡ ಸದ್ಯದಲ್ಲಿಯೇ ಜಿಲ್ಲೆಗೆ ಭೇಟಿ ನೀಡಲಿದೆ.
– ಜಿ.ಎನ್.ಪ್ರಕಾಶ್, ಡಿಡಿ, ತೋಟಗಾರಿಕಾ ಇಲಾಖೆ
ಜಲಜೀವನ್ ಮಿಷನ್
ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಜಲ ಜೀವನ್ ಮಿಷನ್ ಯೋಜನೆಯಡಿ ಎಲ್ಲ ಟೆಂಡರ್ ಪ್ರಕ್ರಿಯೆಗಳನ್ನು ಡಿಸೆಂಬರ್ ಅಂತ್ಯದ ಒಳಗಾಗಿ ಪೂರ್ಣಗೊಳಿಸಿ ಕಾಮಗಾರಿಯನ್ನು ಆರಂಭಿಸುವಂತೆ ಸೆಲ್ವಕುಮಾರ್ ಸೂಚನೆ ನೀಡಿದರು.
- ಯೋಜನೆಯ ಪ್ರಥಮ ಹಂತದಲ್ಲಿ 613 ಕಾಮಗಾರಿಗಳಿಗೆ 146 ಕೋಟಿ ರೂ. ಮಂಜೂರಾಗಿದ್ದು, 609 ಕಾಮಗಾರಿಗಳು ಪೂರ್ಣಗೊಂಡಿವೆ.
- ಎರಡನೇ ಹಂತದಲ್ಲಿ 268 ಕಾಮಗಾರಿಗಳಿಗೆ 136 ಕೋಟಿ ರೂ. ಮಂಜೂರಾಗಿದ್ದು, 122 ಕಾಮಗಾರಿಗಳು ಪೂರ್ಣಗೊಂಡಿವೆ.
- ಮೂರನೇ ಹಂತದಲ್ಲಿ 1126 ಕಾಮಗಾರಿಗಳಿಗೆ 422 ಕೋಟಿ ರೂ. ಮಂಜೂರಾಗಿದ್ದು 44 ಕಾಮಗಾರಿಗಳು ಪೂರ್ಣಗೊಂಡಿವೆ.
- ನಾಲ್ಕನೇ ಹಂತದಲ್ಲಿ 525 ಕಾಮಗಾರಿಗಳಿಗೆ 295 ಕೋಟಿ ರೂ. ಮಂಜೂರಾಗಿದ್ದು, ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಡಿ.ಪ್ರಕಾಶ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.