ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆರ್ಥಿಕ ಇಲಾಖೆಯು ಏಳನೇ ವೇತನ ಆಯೋಗ(7th Pay Commission)ಕ್ಕೆ ಶನಿವಾರ ಅಸ್ತು ನೀಡಿದೆ. ಇಬ್ಬರು ಸದಸ್ಯರು, ಒಬ್ಬ ಕಾರ್ಯದರ್ಶಿ ಹಾಗೂ ಅಧ್ಯಕ್ಷರನ್ನೊಳಗೊಂಡ ಆಯೋಗವನ್ನು ರಚಿಸಿದ್ದು, ವರದಿಯನ್ನು ಆರು ತಿಂಗಳೊಳಗೆ ಸಲ್ಲಿಸುವಂತೆ ಆರ್ಥಿಕ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜಯಶ್ರೀ ಆದೇಶದಲ್ಲಿ ತಿಳಿಸಿದ್ದಾರೆ.
READ | ಡಿಸಿಸಿ ಬ್ಯಾಂಕ್ ಪರೀಕ್ಷೆಯ ಕೀ-ಉತ್ತರ ಪ್ರಕಟ ಆಕ್ಷೇಪಣೆಗಳಿದ್ದರೆ ಸಲ್ಲಿಸಿ
ಆಯೋಗದಲ್ಲಿ ಯಾರಾರಿದ್ದಾರೆ?
ಐಎಎಸ್ ಅಧಿಕಾರಿಗಳಾದ ಸುಧಾಕರ್ ರಾವ್ (ಅಧ್ಯಕ್ಷ), ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಬ್ಸಿಬಾ ರಾಣಿ ಕೊರ್ಲಪಾಟಿ (ಕಾರ್ಯದರ್ಶಿ) ಹಾಗೂ ಸದಸ್ಯರಾಗಿ ಪಿ.ಬಿ.ರಾಮಮೂರ್ತಿ, ಶ್ರೀಕಾಂತ್ ಬಿ.ವನಹಳ್ಳಿ ಅವರನ್ನು ನಿಯೋಜಿಸಲಾಗಿದೆ.
ಏಳನೇ ವೇತನ ಆಯೋಗ ರಚನೆಯಾಗಿದೆ. ಇನ್ಮುಂದೆ ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವ ಗುರಿ ಇದೆ. ನೌಕರರು ಸಹ ಹಳೇ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆಯೂ ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಲಾಗುವುದು.
| ಸಿ.ಎಸ್.ಷಡಾಕ್ಷರಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದ್ದೇನು?
- ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ವಿಧಾನಸಭೆ ಚುನಾವಣೆ ನಡೆಯುವುದರಿಂದ ಮುಂಬರುವ ಬಜೆಟ್’ನಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೇತನ ಪರಿಷ್ಕರಣೆಯ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
- ಕಳೆದ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಯೋಗ ರಚನೆ ಮಾಡುವುದಾಗಿ ಘೋಷಿಸಿದ್ದರು. ಅದರಂತೆ, ಶನಿವಾರ ಆರ್ಥಿಕ ಇಲಾಖೆ ಆಯೋಗ ರಚಿಸಿದೆ.
- ರಾಜ್ಯ ಸರ್ಕಾರ ಮಾರ್ಚ್ ಅಂತ್ಯದೊಳಗೆ ವೇತನ ಪರಿಷ್ಕರಣೆ ಮಾಡದಿದ್ದರೆ ಸರ್ಕಾರದ ಮನವೊಲೈಸಲಾಗುವುದು. ಆಯೋಗದೊಂದಿಗೆ ಭೇಟಿ ಮಾಡಿ ಅವರಿಗೆ ಮನದಟ್ಟು ಮಾಡಿಕೊಡಲಾಗುವುದು.
- ಇಲ್ಲಿಯವರೆಗೆ ಒಟ್ಟು 12 ಆಯೋಗ, ಸಮಿತಿಗಳನ್ನು ರಚನೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ನಾಲ್ಕೂವರೆ ವರ್ಷಕ್ಕೆ ವೇತನ ಆಯೋಗ ರಚಿಸಲಾಗಿದೆ. ಐದು ವರ್ಷಕ್ಕೆ ಮುನ್ನ ಯಾವುದೇ ಆಯೋಗ ರಚನೆಯಾಗಿರಲಿಲ್ಲ.
- ಈ ಮುಂಚಿನ ಆಯೋಗಗಳಂತೆ ವೇತನ ಪರಿಷ್ಕರಣೆಯೊಂದಿಗೆ ಇಲಾಖೆ ಸಬಲೀಕರಣ, ಅಧಿಕಾರಿಗಳ ಕಾರ್ಯಕ್ಷಮತೆ ಹೆಚ್ಚಿಸುವ ವರದಿಗಳನ್ನು ನೀಡಬೇಕಾದ ಅಗತ್ಯತೆ ಇದಕ್ಕಿಲ್ಲ. ಹೀಗಾಗಿ, ಮಾರ್ಚ್ ಅಂತ್ಯದೊಳಗೆ ಆಯೋಗವು ವರದಿ ನೀಡಲಿದ್ದು, ಜಾರಿಗೆ ಬರಲಿದೆ.
ಹಲವು ಸವಾಲುಗಳ ನಡುವೆ ರಾಜ್ಯ ಇಷ್ಟೊಂದು ಅಭಿವೃದ್ಧಿ ಸಾಧಿಸಬೇಕಾದರೆ ಹಾಗೂ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಬೇಕಾದರೆ ಅದಕ್ಕೆ ಕಾರಣ ಸರ್ಕಾರಿ ನೌಕರರ ಶ್ರಮ. ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ನೌಕರರು ಸರಿಯಾದ ಸೇವೆಯನ್ನು ಜನರಿಗೆ ನೀಡುತ್ತಿದ್ದಾರೆ. ಇದನ್ನು ಪರಿಗಣಿಸಿ ವೇತನ ಪರಿಷ್ಕರಣೆ ಮಾಡಲಿದೆ ಎಂಬ ನಂಬಿಕೆ ಇದೆ.
ಮಾಧ್ಯಮಗೋಷ್ಠಿಯಲ್ಲಿ ಚೇತನ್, ಅಮರನಾಥ್, ಮುರುಳಿ, ಅಶ್ವಥ್, ಮನೋಜ್, ದೀಪಕ್ ಉಪಸ್ಥಿತರಿದ್ದರು.
Click here for order