ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಡಿಕೆಯಲ್ಲಿ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗ (Leaf spot disease) ಕೋವಿಡ್-19ನಷ್ಟೇ ಅಪಾಯಕಾರಿಯಾಗಿದೆ. ಎಲೆಚುಕ್ಕೆ ರೋಗವೂ ಕೊರೊನಾದಷ್ಟೇ ವೇಗವಾಗಿ ಸಮುದಾಯ ಹಂತದಲ್ಲಿ ಮರಗಳಿಂದ ಮರಗಳಿಗೆ ಹರಡುತ್ತದೆ. ಹೀಗಾಗಿ, ಸರ್ಕಾರ ಕೋವಿಡ್(covid-19)ನಷ್ಟೇ ಗಂಭೀರವಾಗಿ ಈ ಕಾಯಿಲೆಯನ್ನು ಪರಿಗಣಿಸಬೇಕು ಎಂದು ಕೃಷಿ ವಿಜ್ಞಾನಿ ಪ್ರೊ.ಪ್ರಕಾಶ್ ಕಮ್ಮರಡಿ (prof.prakash kammardi) ಅಭಿಪ್ರಾಯಪಟ್ಟರು.
READ | 21/11/2022ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ದರ?
ಅಡಿಕೆ ವರ್ತಕರ ಸಭಾ ಭವನದಲ್ಲಿ ಸೋಮವಾರ ಕರೆದಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಗ ಕಾಣಿಸಿಕೊಂಡಿರುವ ಕಡೆ ಸಾಮೂಹಿಕ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಬೇಕು. ಈ ರೋಗ ಅಡಿಕೆ ಹೊಸತೇನಲ್ಲ. ಈ ಹಿಂದೆಯೂ ಇತ್ತು ಮುಂದೆಯೂ ಇರಲಿದೆ. ಆದರೆ ರೋಗ ಕಾಣಿಸಿಕೊಂಡಿರುವ ಕಡೆ ಒಬ್ಬ ರೈತರು ಔಷಧಿ ಸಿಂಪರಣೆ ಮಾಡಿ, ಮತ್ತೊಬ್ಬರು ಸುಮ್ಮನೇ ಇದ್ದರೆ ಆಗುವುದಿಲ್ಲ. ಸಾಮೂಹಿಕ ಚಿಕಿತ್ಸಾ ಕ್ರಮಗಳನ್ನು ಅನುಸರಿಸಬೇಕು. ಅದಕ್ಕಾಗಿ ಸರ್ಕಾರ ಡ್ರೋಣ್ ಮೂಲಕ ಔಷಧಿ ಸಿಂಪಡಣೆ ಮಾಡಬೇಕು ಎಂದರು.
ಎಲೆಚುಕ್ಕೆ ರೋಗಕ್ಕೇನು ಕಾರಣ?
ಅಡಿಕೆಯಲ್ಲಿ ಎಲೆಚುಕ್ಕೆ ರೋಗ ಹೆಚ್ಚಾಗುವುದಕ್ಕೆ ಮೂಲ ಕಾರಣ ಹವಾಮಾನ ವೈಪರೀತ್ಯವಾಗುತ್ತಿರುವುದು. ಈ ಮುಂಚೆ ಜೂನ್’ನಿಂದ ಅಕ್ಟೋಬರ್’ವರೆಗೆ ಮಳೆಗಾಲವಿರುತ್ತಿತ್ತು. ಈಗ ಮೇನಲ್ಲಿ ಆರಂಭವಾಗಿ ಜನವರಿ ತಿಂಗಳವರೆಗೂ ಮಳೆ ಸುರಿಯುತ್ತಿದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾದರೆ ಅಡಿಕೆ ಎಲೆಚುಕ್ಕೆ ರೋಗದ ಶಿಲೀಂದ್ರ ಬೆಳವಣಿಗೆಗೆ ಪೂರಕವಾಗುತ್ತದೆ. ಒಂದುವೇಳೆ, ಬಿಸಿಲು ಬಿದ್ದರೆ ಈ ರೋಗ ತಾನಾಗಿಯೇ ಹತೋಟಿಗೆ ಬರುತ್ತದೆ.
ತೇವಾಂಶದೊಂದಿಗೆ ಮಣ್ಣಿನ ನಿರ್ವಹಣೆಯೂ ಮುಖ್ಯ. ಮಣ್ಣಿನ ಪಿಎಚ್ 5 ರಿಂದ 6 ಇರಬೇಕು. ಅದಕ್ಕಿಂತ ಹೆಚ್ಚಾದರೆ ಗಿಡಗಳಿಗೆ ಪೂರಕ ಅಲ್ಲ. ಗಿಡಗಳು ಸುಲಭವಾಗಿ ಉಸಿರಾಡುವಂತೆ ಮಾಡಿಕೊಡಬೇಕು.
ಪ್ರಮುಖರಾದ ಡಿ.ಎಂ.ಶಂಕರಪ್ಪ, ಕಿಮ್ಮನೆ ಜಯರಾಂ, ದೇವಕುಮಾರ್, ಮಾದೇಶ ಹೆಗ್ಡೆ, ಮಂಜುನಾಥ, ಕೆ.ಟಿ.ಗಂಗಾಧರ, ಅನಿಲ್ಕುಮಾರ್, ನೇತ್ರಾವತಿ, ಚಿದಂಬರ ರಾವ್ ಉಪಸ್ಥಿತರಿದ್ದರು.