ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೊಡಚಾದ್ರಿ(Kodachadri)ಯ ಸರ್ವಜ್ಞ ಪೀಠ(sarvagna peetha)ದಿಂದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ(Kolluru Mookambike temple)ದವರೆಗೆ ಕೇಬಲ್ ಕಾರ್ (cable car) ಆರಂಭಿಸುವುದಕ್ಕೆ ಅಗತ್ಯ ಪರಿಶೀಲನೆಗೋಸ್ಕರ ಕೇಂದ್ರ ತಂಡವು ಭೇಟಿ ನೀಡಿ ಪರಿಶೀಲನೆ ಮಾಡಿದೆ.
ಕೇಂದ್ರ ತಂಡವು ಕೊಡಚಾದ್ರಿಗೆ ಭೇಟಿ ನೀಡಿ ಸಂಭಾವ್ಯ ಅಡೆತಡೆಗಳನ್ನು ವೀಕ್ಷಿಸಿದರು. ಬಳಿಕ ಸಂಸದ ಬಿ.ವೈ.ರಾಘವೇಂದ್ರ (BY Raghavendra) ಅವರು ಶಿವಮೊಗ್ಗದ ತಮ್ಮ ನಿವಾಸದಲ್ಲಿ ಸಭೆ ಕರೆದು ಈ ಬಗ್ಗೆ ವಿವರವಾಗಿ ಚರ್ಚಿಸಿದರು.
READ | ಅಡಿಕೆಯ ಎಲ್ಲ ಸಮಸ್ಯೆಗಳಿಗೆ ಪ್ರತ್ಯೇಕ ಮಂಡಳಿಯೇ ಪರಿಹಾರ, ಕೃಷಿ ವಿಜ್ಞಾನಿ ಪ್ರೊ.ಪ್ರಕಾಶ್ ಕಮ್ಮರಡಿ ಹೇಳಿದ್ದೇನು?
ನವೆಂಬರ್ 19, 20ರಂದು ಯೋಜನೆಯ ಪ್ರಾರಂಭ ಮತ್ತು ಅಂತ್ಯದ ಸ್ಥಳಗಳನ್ನು ಗುರುತಿಸಿ ಸರ್ವೇ ಪೂರ್ಣಗೊಳಿಸಲಾಗಿದೆ. ಸುಮಾರು ಆರು ಪಥ ನಕ್ಷೆಗಳನ್ನು ತಯಾರಿಸಲಾಗಿದೆ. ಅದರಲ್ಲಿರುವ ಅಡೆತಡೆಗಳನ್ನು ನಿವಾರಿಸಿ ಪಥನಕ್ಷೆ ಅಂತಿಮಗೊಳಿಸುವುದಕ್ಕೆ ಇರುವ ಅಡೆತಡೆಗಳ ಬಗ್ಗೆ ಪ್ರವಾಸೋದ್ಯಮ, ಅರಣ್ಯ ಇಲಾಖೆ ವನ್ಯಜೀವಿ ವಿಭಾಗ, ಕಂದಾಯ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಗಳೊಂದಿಗೆ ಚರ್ಚಿಸಲಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಸರ್ವಜ್ಞ ಪೀಠದ ದರ್ಶನ ಪಡೆದು ಕೊಲ್ಲೂರು ಮೂಕಾಂಬಿಕೆಗೆ ತೆರಳಲು ರಸ್ತೆ ಮಾರ್ಗವಿದ್ದು, 40 ಕಿ.ಮೀ. ಆಗುತ್ತದೆ. ರಸ್ತೆ ಸಹ ದುರ್ಗಮವಾಗಿದೆ. ಒಂದುವೇಳೆ, ಕೇಬಲ್ ಕಾರ್ ಸಿದ್ಧವಾದರೆ ಬರೀ 2 ಕಿ.ಮೀ. ದೂರವಾಗಲಿದೆ. ಇದರಿಂದ ಪ್ರವಾಸಿಗರಿಗೆ ಹಾಗೂ ಭಕ್ತಾದಿಗಳಿಗೆ ಅನುಕೂಲವಾಗಲಿದೆ.
| ಬಿ.ವೈ.ರಾಘವೇಂದ್ರ, ಸಂಸದ
ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದೇನು?
- ಕೇಂದ್ರ ಭೂಸಾರಿಗೆ ಮಂತ್ರಾಲಯವು ಪರ್ವತಮಾಲಾ ಯೋಜನೆ ಅಡಿ ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಬಲ್ ಕಾರ್ ನಿರ್ಮಾಣ ಮಾಡುವ ಯೋಜನೆ ಇದಾಗಿದೆ.
- ನ್ಯಾಶನಲ್ ಹೈವೇ ಲಾಜಿಸ್ಟಿಕ್ಸ್ ಮ್ಯಾನೇಜ್ಮೆಂಟ್ ಲಿಮಿಟೆಡ್(ಎನ್.ಎಚ್.ಎಲ್.ಎಂ.ಎಲ್)ಗೆ ಅನುಷ್ಠಾನಗೊಳಿಸುವ ಜವಾಬ್ದಾರಿ ವಹಿಸಿ ನವದೆಹಲಿಯಲ್ಲಿರುವ ಕೆ ಆಂಡ್ ಜೆ ಕನ್ಸಲ್ಟೆನ್ಸಿ ಇವರಿಗೆ ಯೋಜನೆಯ ಡಿಪಿಆರ್ ತಯಾರಿಸಲು ಕಾರ್ಯಾದೇಶನ ನೀಡಲಾಗಿದೆ.
- ಅಧಿಕಾರಿಗಳ ತಂಡವು ಒಂದು ತಿಂಗಳ ಅವಧಿಯೊಳಗೆ ಡಿಪಿಆರ್ ಸಿದ್ಧಪಡಿಸಿ ಯೋಜನೆಯ ಅನುಷ್ಠಾನಕ್ಕೆ ಟೆಂಡರ್ ಕರೆಯಬೇಕು.