ಸುದ್ದಿ ಕಣಜ.ಕಾಂ ಶಿವಮೊಗ್ಗ (Shivamogga)
ನಾಗರಿಕ ಸುರಕ್ಷತಾ ಕಾಯ್ದೆ(Public safety act)ಯನ್ನು ಶಿವಮೊಗ್ಗ ಮಹಾನಗರ ಪಾಲಿಕೆ (shimoga city corporation) ವ್ಯಾಪ್ತಿಯಲ್ಲಿ ಕಟ್ಟುನಿಟ್ಟನಿಂದ ಅನುಷ್ಠಾನಗೊಳಿಸಲು ನವೆಂಬರ್ 30ರ ವರೆಗೆ ಗಡುವು ನೀಡಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ (alok Kumar) ತಿಳಿಸಿದರು.
ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯ್ದೆ ಅನ್ವಯ ಹೆಚ್ಚು ಜನ ಸೇರುವ ಜಾಗಗಳಾದ ಮಾಲ್, ದೊಡ್ಡ ಹೋಟೆಲ್, ಶೈಕ್ಷಣಿಕ ಧಾರ್ಮಿಕ ಸಂಸ್ಥೆ, ಕ್ರೀಡಾ ಸಂಕೀರ್ಣ, ಆಸ್ಪತ್ರೆ, ಬಸ್, ರೈಲ್ವೆ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಜನಸಂಚಾರದ ಮೇಲೆ ಕಣ್ಣಿಡುವ ಸಿಸಿಟಿವಿ ಸೇರಿದಂತೆ ಇನ್ನಿತರ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚನೆ ನೀಡಿದರು.
READ | ಕಲಬೆರಕೆ ಆಹಾರ ಬ್ರೇಕ್ ಗೆ ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್
ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನಾಗರಿಕರಿಗೆ ಹೆಚ್ಚಿನ ಭದ್ರತೆ ನೀಡುವ ಸಲುವಾಗಿ ‘ಕರ್ನಾಟಕ ನಾಗರಿಕ ಸುರಕ್ಷತಾ ಕಾಯ್ದೆ (Public safety act) 2017’ಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಸುರಕ್ಷತೆ ದೃಷ್ಟಿಯಿಂದ ಅನುಷ್ಠಾನಗೊಳಿಸಬೇಕು ಎಂದರು.
ಶಿವಮೊಗ್ಗದಲ್ಲಿ ರೌಡಿಗಳ ಮೇಲೆ ಕಣ್ಣಿಡಲಾಗಿದೆ. ಅವರ ಚಟುವಟಿಕೆಗಳನ್ನು ವೀಕ್ಷಿಸಲಾಗುತ್ತಿದೆ. ಒಂದುವೇಳೆ, ಸಮಾಜ ಕಂಟಕ ಕೃತ್ಯಗಳಲ್ಲಿ ತೊಡಗಿಸಿಕೊಂಡರೆ ಅಂತಹವರ ಬೇಲ್ ರದ್ದುಪಡಿಸಲಾಗುವುದು. ಈ ಹಿಂದಿದ್ದ ರೌಡಿಗಳ ಹೆಸರಿನಲ್ಲಿ ಹಫ್ತಾ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹವರನ್ನು ಸುಮ್ಮನೆ ಬಿಡುವುದಿಲ್ಲ. ಸಾಗರ ಜೋಡಿ ಕೊಲೆ ಪ್ರಕರಣ ಸಂಬಂಧ 150ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಲಾಗಿದೆ. ಇದುವರೆಗೆ, ಹೆಚ್ಚೇನೂ ಮಾಹಿತಿ ಲಭ್ಯವಾಗಿಲ್ಲ. ಡಬಲ್ ಮರ್ಡರ್ ಆಗಿರುವುದರಿಂದ ಇನ್ನಷ್ಟು ಗಂಭೀರವಾಗಿ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು.
| ಅಲೋಕ್ ಕುಮಾರ್, ಎಡಿಜಿಪಿ, ಕಾನೂನು ಸುವ್ಯವಸ್ಥೆ ವಿಭಾಗ
ಶಿವಮೊಗ್ಗದಲ್ಲಿ ಕಾಯ್ದೆ ಅಡಿಯ ನಿಯಮಗಳನ್ನು ಪಾಲನೆ ಮಾಡದೇ ಇರುವವರಿಗೆ ನೋಟಿಸ್ ನೀಡಬೇಕು. ಅದಕ್ಕೂ ಬಗ್ಗದಿದ್ದರೆ ದಂಡ ವಿಧಿಸಬೇಕು. ಇದರೆಡೆಗೆ ಶಿವಮೊಗ್ಗ ಉಪ ವಿಭಾಗದ ಡಿಎಸ್.ಪಿ ಅವರು ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.
READ | ಶಿವಮೊಗ್ಗದಲ್ಲಿ ಆಪರೇಷನ್ ಬುಲ್ಡೋಜರ್, ಎಲ್ಲೆಲ್ಲಿ ನಡೆಯಲಿದೆ ತೆರವು ಕಾರ್ಯಾಚರಣೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ಶಿವಮೊಗ್ಗದಂತಹ ಸೂಕ್ಷ್ಮ ಪ್ರದೇಶಕ್ಕೆ ಅಗತ್ಯ
ನಾಗರಿಕ ಸುರಕ್ಷತಾ ಕಾಯ್ದೆ ಖಡಕ್ ಆಗಿ ಪಾಲನೆಗೆ ಬಂದರೆ ಶಿವಮೊಗ್ಗದಂತಹ ಸೂಕ್ಷ್ಮ ಪ್ರದೇಶದಲ್ಲಿ ಆರೋಪಿಗಳ ಪತ್ತೆ ಸೇರಿದಂತೆ ಅಪರಾಧಗಳಾಗುವುದನ್ನು ತಡೆಯುವುದಕ್ಕೂ ಅನುಕೂಲವಾಗಲಿದೆ ಎಂದರು.
ಶಿವಮೊಗ್ಗ ನಗರದಲ್ಲಿ ಈಗಾಗಲೇ ಹಲವೆಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಆ ಎಲ್ಲ ಕ್ಯಾಮೆರಾಗಳು ಮಾನಕಟರಿಂಗ್ ಸೆಂಟರ್ ಮೂಲಕ ಪೊಲೀಸರ ನಿಯಂತ್ರಣಕ್ಕೆ ಒಳಪಟ್ಟಿವೆ. ಆದ್ದರಿಂದ, ಇಡೀನಗರದ ಮೇಲೆ ನಿಗಾ ಇಡಬಹುದಾಗಿದೆ. ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಾಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.