ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ದೇಶದಲ್ಲಿ ಇದೇ ಮೊದಲು ಅಂತರರಾಷ್ಟ್ರೀಯ ಮಟ್ಟದ ‘ಸಾಂಸ್ಕೃತಿಕ ಜಾಂಬೂರಿ’ (National scout jamboree)ಯನ್ನು ಡಿಸೆಂಬರ್ 21ರಿಂದ 27ರ ವರೆಗೆ ದಕ್ಷಿಣ ಕನ್ನಡದ ಮೂಡುಬಿದರೆಯ ಆಳ್ವಾಸ್’ನಲ್ಲಿ ಆಯೋಜಿಸಲಾಗಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತರು ಮತ್ತು ಜಾಂಬೂರಿಯ ಮುಖ್ಯಸ್ಥ ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಹೇಳಿದರು.
ಜಾಂಬೂರಿಯಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಮೇಳಗಳನ್ನು ಏರ್ಪಡಿಸಲಾಗಿದೆ. ಕಲಾ ಮೇಳ, ಸಂಸ್ಕೃತಿ ಮೇಳ, ಆಹಾರ ಮೇಳ, ವಿಜ್ಞಾನ ಮೇಳ, ಕೃಷಿ ಮೇಳ, ಪುಸ್ತಕ, ಸಂಗೀತ ಮೇಳಗಳು ನಡೆಯಲಿವೆ. ಕಡಲಚಾರಣ, ಶಾಂತಿಜಾಥ, ಸಾಹಸ ಕ್ರೀಡೆ, ಸಾಹಸಮಯ, ಹಾಸ್ಯಮಯ ಚಟುವಟಿಕೆ, ಯೋಗ ಇವುಗಳು ಕಾರ್ಯಕ್ರಮದ ಹರ್ಷೋಲ್ಲಾಸವನ್ನು ಹೆಚ್ಚಿಸಲಿವೆ.
| ಡಾ.ಎಂ.ಮೋಹನ್ ಆಳ್ವ, ಅಧ್ಯಕ್ಷ, ಆಳ್ವಾಸ್ ಶಿಕ್ಷಣ ಸಂಸ್ಥೆ
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.
READ | ಭದ್ರಾವತಿಯ ಸ್ವಚ್ಛತಾ ರಾಯಭಾರಿ ನಟಿ ಆಶಾ ಭಟ್, ಐರನ್ ಸಿಟಿಗೆ ಇಂದು ಭೇಟಿ
50 ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗಿ
ಜಾಂಬೂರಿಯಲ್ಲಿ ದೇಶ-ವಿದೇಶಗಳಿಂದ ಸುಮಾರು 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವರು. ಅದರಲ್ಲಿ ಶಿವಮೊಗ್ಗದಿಂದ ಒಂದು ಸಾವಿರ ಮಕ್ಕಳು ಇರುವರು. ಏಳು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ₹40 ಕೋಟಿಗೂ ಹೆಚ್ಚು ಹಣ ಖರ್ಚಾಗುವ ನಿರೀಕ್ಷೆಯಿದೆ. ಹಲವು ಸಂಘ, ಸಂಸ್ಥೆಗಳು ಸಹಾಯ ಮಾಡುತ್ತಿವೆ. ಈ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ನ ಪ್ರಮುಖರಾದ ಎಚ್.ಡಿ.ರಮೇಶ್ ಶಾಸ್ತ್ರಿ, ಕೆ.ಟಿ.ಚಂದ್ರಕುಮಾರ್, ಶಕುಂತಲಾ ಚಂದ್ರಶೇಖರ್, ಡಾ.ಧನಂಜಯ್ ಸರ್ಜಿ, ರೋಟರಿ ವಿಜಯ್ಕುಮಾರ್, ಭಾರತಿ ಚಂದ್ರಶೇಖರ್, ಚೂಡಾಮಣಿಪವರ್, ಪಾಣಿ ರಾಜಪ್ಪ, ಪ್ರಭಾ ಶಾಮಣ್ಣ, ರಮೇಶ್ಬಾಬು ಉಪಸ್ಥಿತರಿದ್ದರು.