
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸೇವಾ ನ್ಯೂನತೆ ಎಸಗಿದ ರಾಷ್ಟ್ರೀಯ ಬ್ಯಾಂಕ್’ವೊಂದಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ಸಹಿತ ಮರುಪಾವತಿಗೆ ಆದೇಶಿಸಿದೆ.
ಶಿವಮೊಗ್ಗದ ನಿವಾಸಿ ಲತಾ ರಮೇಶ್ ಮತ್ತು ಮಕ್ಕಳು ಇವರು 1ನೇ ಎದುರುದಾರರಾದ ಶಿವಮೊಗ್ಗ ಮುಖ್ಯ ಶಾಖೆಯ ಪ್ರಧಾನ ವ್ಯವಸ್ಥಾಪಕರು ಹಾಗೂ 2ನೇ ಎದುರುದಾರರಾದ ಮ್ಯಾನೇಜರ್ ಹೊಸ ಯಲ್ಲಾಪುರ, ಧಾರವಾಡ ಇವರ ವಿರುದ್ಧ ದೂರು ಸಲ್ಲಿಸಿದ್ದರು.
READ | ಹಿಂದೂ ಹರ್ಷ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿಗೆ ಜಾಮೀನು
ಮನೆ ನಿರ್ಮಾಣಕ್ಕೆ ಬ್ಯಾಂಕಿನಿಂದ ಸಾಲ
ಲತಾ ರಮೇಶ್ ಇವರ ಪತಿ ದಿವಂಗತ ರಮೇಶ್ ಮಾಜಿ ಸೈನಿಕರಾಗಿದ್ದು, ವಾಸದ ಮನೆ ನಿರ್ಮಾಣಕ್ಕೆ ಶಿವಮೊಗ್ಗದ ಬ್ಯಾಂಕಿನಿಂದ ₹17,60,000 ಸಾಲ ಪಡೆದಿದ್ದು, ಸಾಲ ಮರು ಪಾವತಿಗೆ ವಿಮಾ ಸೌಲಭ್ಯಕ್ಕಾಗಿ ₹80,000 ಹೆಚ್ಚುವರಿ ಸಾಲ ಸಹ ಪಡೆದು ಅಧಿಕೃತಗೊಳಿಸುವಲ್ಲಿ ವಿಫಲರಾಗಿರುತ್ತಾರೆ.
ಸಾಲದ ಖಾತೆಗೆ ಅನಧಿಕೃತವಾಗಿ ವರ್ಗಾವಣೆ
ಸಾಲದ ಮೊತ್ತವನ್ನು ದಿವಂಗತ ರಮೇಶ್ ಅವರ ಧಾರವಾಡದ ಶಾಖೆಯಿಂದ ಶಿವಮೊಗ್ಗದ ಸಾಲದ ಖಾತೆಗೆ ಅನಧಿಕೃತವಾಗಿ ವರ್ಗಾಯಿಸಿದ್ದು, ಈ ಹಿಂದೆ ಶಿವಮೊಗ್ಗ ಗ್ರಾಹಕ ಆಯೋಗ(shivamogga Consumer Commission)ದ ಪ್ರಕರಣ ಸಂಖ್ಯೆ 84/2020ರಲ್ಲಿ ಎದುರುದಾರ ಬ್ಯಾಂಕ್ ವಿರುದ್ಧ ಸೇವಾ ನ್ಯೂನತೆ ಸರಿಪಡಿಸಲು ದಂಡ ಸಹಿತವಾಗಿ ಆದೇಶ ಆಗಿರುತ್ತದೆ. ಆದಾಗ್ಯೂ ಬ್ಯಾಂಕಿನವರು ಮತ್ತೆ ವಿವಿಧ ದಿನಾಂಕಗಳಲ್ಲಿ ಒಟ್ಟು ₹1,73,000 ಗಳನ್ನು ಧಾರವಾಡ ಶಾಖೆಯ ಮೃತ ರಮೇಶ್ ಅವರ ಖಾತೆಯಿಂದ ಶಿವಮೊಗ್ಗದ ಬ್ಯಾಂಕಿನ ಸಾಲದ ಖಾತೆಗೆ ಮೃತರ ವಾರಸುದಾರರ ಗಮನಕ್ಕೆ ತಾರದೇ ಮತ್ತು ಒಪ್ಪಿಗೆ ಪಡೆಯದೇ ಬ್ಯಾಂಕಿನ ನಿಯಮಾವಳಿಗೆ ವಿರುದ್ಧವಾಗಿ, ಅನಧಿಕೃತವಾಗಿ ವರ್ಗಾಯಿಸಿರುತ್ತಾರೆ.
READ | ಗ್ರಾಹಕರಿಗೆ ಶಾಕ್, ಇಂದಿನಿಂದ ಹಾಲು, ಮೊಸರಿನ ದರ ಹೆಚ್ಚಳ, ಕಾರಣವೇನು?, ಕಳೆದ ಸಲ ಯಾವಾಗ ಏರಿಕೆಯಾಗಿತ್ತು ಬೆಲೆ?
ಹಣ ಮರುಪಾವತಿಗೆ ಆದೇಶ
ದೂರನ್ನು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಅಡಿ ಪರಿಶೀಲಿಸಿದ ಆಯೋಗವು ಬ್ಯಾಂಕ್ ಸೇವಾ ನ್ಯೂನತೆ ದೃಢಪಟ್ಟಿರುವುದು ಕಂಡು ಬಂದಿದ್ದರಿಂದ ಬ್ಯಾಂಕ್ ಕಾನೂನು ಬಾಹಿರವಾಗಿ ವರ್ಗಾಯಿಸಿದ ಮೊತ್ತ 1,73,000 ರೂ.ಗಳನ್ನು ಶೇ.8 ಬಡ್ಡಿಸಹಿತ ಮೃತ ರಮೇಶ್ ಅವರ ಧಾರವಾಡದ ಉಳಿತಾಯ ಖಾತೆಗೆ ಮರುಪಾವತಿಸಲು ಆದೇಶಿಸಿದೆ.
ದೂರದಾರರಿಗೆ ಉಂಟಾದ ಮಾನಸಿಕ ಹಿಂಸೆ ಮತ್ತು ತೊಂದರೆಗಳಿಗೆ 1 ಲಕ್ಷ ರೂ. ಪರಿಹಾರ ಹಾಗೂ ವ್ಯಾಜ್ಯ ವೆಚ್ಚ 5000 ರೂ. ಬ್ಯಾಂಕಿನವರು ದೂರುದಾರರಿಗೆ ಪಾವತಿಸುವಂತೆ ಆದೇಶಿಸಿದೆ.
ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯ ಬಿ.ಡಿ.ಯೋಗಾನಂದ, ಮಹಿಳಾ ಸದಸ್ಯೆ ಸವಿತಾ ಬಿ.ಪಟ್ಟಣಶೆಟ್ಟಿ ಇವರ ಪೀಠವು ಈ ಆದೇಶ ನೀಡಿದೆ.