ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಟೋ ದರ ನಿಗದಿ ಮತ್ತು ಸಾರಿಗೆ ಇಲಾಖೆಯ ವಿವಿಧ ವಿಷಯಗಳ ಕುರಿತು ಸೋಮವಾರ ಏರ್ಪಡಿಸಲಾಗಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ಹಲವು ಸೂಚನೆಗಳನ್ನು ನೀಡಿದ್ದಾರೆ. ಕಟ್ಟುನಿಟ್ಟಿನ ನಿಯಮ ಜಾರಿಗೆ ಜಿಲ್ಲಾಡಳಿತ ಮುಂದಾಗಿದೆ.
ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ವಿಶ್ವಾಸನೀಯ ಸೇವೆಯನ್ನು ಒದಗಿಸುವ ಮೂಲಕ ಜನರಲ್ಲಿ ಉತ್ತಮ ಬಾಂಧವ್ಯ ಹೊಂದಬೇಕು. ಜನರಿಂದ ದೂರು ಬರದಂತೆ ಸೇವೆ ಕಲ್ಪಿಸಬೇಕು.
| ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ
ಆಟೋ ಚಾಲಕರಿಗೆ ಟಫ್ ರೂಲ್ಸ್
- ಶಿವಮೊಗ್ಗ ನಗರದಲ್ಲಿ ಸಂಚರಿಸುವ ಆಟೋಗಳಿಗೆ ಪ್ರತಿ 1.50 ಕಿ.ಮೀ.ಗಳಿಗೆ ₹40 ಹಾಗೂ ನಂತರದ ಪ್ರತಿ ಕಿ.ಮೀ.ಗೆ ₹20ರಂತೆ ದರ ನಿಗದಿಪಡಿಸಿ ನಿರ್ಣಯ ಕೈಗೊಳ್ಳಲಾಗಿದ್ದು, ಎಲ್ಲ ಆಟೋಗಳ ಚಾಲಕರು ನಿಗದಿಪಡಿಸಿದ ದರದಂತೆ ಸೇವೆ ನೀಡಬೇಕು.
- ನಗರದಲ್ಲಿ ಸಂಚರಿಸಲು ಎಲ್ಲ ಆಟೋ ಚಾಲಕರು ತಮ್ಮ ಆಟೋಗಳಿಗೆ ಮುಂದಿನ ಒಂದು ತಿಂಗಳ ಕಾಲಾವಧಿಯೊಳಗಾಗಿ ಕಡ್ಡಾಯವಾಗಿ ಮೀಟರ್ (meter) ಅಳವಡಿಸಿಕೊಳ್ಳಬೇಕು. ತಪ್ಪಿದ್ದಲ್ಲಿ ಅಂತಹ ಆಟೋಗಳ ಸಂಚಾರಕ್ಕೆ ನೀಡಿದ ಅನುಮತಿಯನ್ನು ನಿರಾಕರಿಸುವುದರ ಜತೆಗೆ ಚಾಲಕರಿಗೆ ದಂಡ ವಿಧಿಸಲಾಗುವುದು.
- ಎಲ್ಲ ಆಟೋಗಳ ಚಾಲಕರು (auto drivers) ತಮ್ಮ ಕರ್ತವ್ಯದ ಅವಧಿಯಲ್ಲಿ ಸಮವಸ್ತ್ರ ಧರಿಸಬೇಕು. ವಾಹನಗಳ ವಿಮೆ ಜಾರಿಯಲ್ಲಿರಬೇಕು. ಸಕಾಲದಲ್ಲಿ ವಾಹನದ ಪರವಾನಗಿ ನವೀಕರಿಸಿಕೊಂಡಿರುವುದು ಕಡ್ಡಾಯ. ಸಾರಿಗೆ ನಿಯಮ ಪಾಲನೆ ಮಾಡದ ಆಟೋ ಚಾಲಕರ ವಿರುದ್ಧ ನಿಯಮಾನುಸಾರ ಕ್ರಮ ಅನಿವಾರ್ಯ.
- ಚಾಲಕರು ತಮ್ಮ ಆಸನದ ಇಕ್ಕೆಲಗಳಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಪ್ರಯಾಣಿಸುವುದು. ಶಾಲಾ ಮಕ್ಕಳನ್ನು ನಿಗದಿಪಡಿಸಿದ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೂರಿಸಿಕೊಂಡು ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಅತ್ಯಂತ ವೇಗವಾಗಿ ಸಂಚರಿಸುವುದು ಹಾಗೂ ಸೀಟುಗಳ ಲೆಕ್ಕದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು ಸಲ್ಲದು. ಇಂತಹ ಸಂದರ್ಭಗಳಲ್ಲಿ ಆಟೋ ಚಾಲಕರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು.
- ನಗರದ ರೈಲ್ವೇ ನಿಲ್ದಾಣ (Railway station) ಮತ್ತು ಬಸ್ ನಿಲ್ದಾಣಗಳ (Bus stand) ಸಮೀಪದಲ್ಲಿ ಮುಂಗಡ ಪಾವತಿಸುವ (prepaid) ಆಟೋಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು.
- ಶಿವಮೊಗ್ಗ ನಗರದ 180ಕ್ಕೂ ಹೆಚ್ಚು ಸ್ಥಳಗಳಲ್ಲಿರುವ ಆಟೋ ನಿಲ್ದಾಣಗಳ ಪೈಕಿ ಕೆಲವು ನಿಲ್ಧಾಣಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ಆಟೋ ನಿಲ್ದಾಣ ಅಸ್ತವ್ಯಸ್ಥಗೊಂಡಿವೆ. ಅವುಗಳನ್ನು ತ್ವರಿತವಾಗಿ ದುರಸ್ತಿ ಮಾಡಿಸಿ, ಸುಗಮ ಸಂಚಾರಕ್ಕೆ ಕ್ರಮ ವಹಿಸಲಾಗುವುದು. ಈ ಬಗ್ಗೆ ಸ್ಮಾರ್ಟ್ ಸಿಟಿ ಆಯುಕ್ತರಿಗೆ ಸೂಚಿಸಲಾಗುವುದು.
- ಬಿ.ಎಚ್. ರಸ್ತೆ(BH Road), ನೆಹರೂ ರಸ್ತೆ (Nehru Road) ಸೇರಿದಂತೆ ಪ್ರಮುಖ ಜನಸಂದಣಿಯ ಪ್ರದೇಶಗಳಲ್ಲಿ ರಸ್ತೆಯ ಮೇಲೆ ಆಟೋಗಳನ್ನು ನಿಲ್ಲಿಸಿ, ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವುದು ಕಂಡುಬಂದಿದ್ದು, ಆಟೋ ಚಾಲಕರು ಇಂತಹ ಅವಘಡಗಳಿಗೆ ಅವಕಾಶ ನೀಡದಂತೆ ಗಮನಹರಿಸಬೇಕು.
- ಸಂಚರಿಸುವ ಇ-ಆಟೋ(e-auto)ಗಳಿಗೆ ಅನುಕೂಲವಾಗುವಂತೆ ನಗರದ 4-5 ಸ್ಥಳಗಳಲ್ಲಿ ಚಾರ್ಜಿಂಗ್ ಪಾಯಿಂಟ್ಗಳನ್ನು ತೆರೆಯಲು ಇರಬಹುದಾದ ಸಾಧ್ಯಗಳ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿ(RTO) ಗಮನಹರಿಸಬೇಕು.
READ | ನ.15ರಂದು ಮೊಸರಳ್ಳಿ- ಭದ್ರಾವತಿ ರಸ್ತೆಯಲ್ಲಿ ಸಂಚಾರ ಬಂದ್, ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ
ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಐಎಎಸ್ ಪ್ರೊಬೇಷನರಿ ಅಧಿಕಾರಿ ದಲ್ಜೀತ್ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ ಸೇರಿದಂತೆ ಸಂಬಂಧಿತ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಆಟೋ ಚಾಲಕರ ಸಂಘದ ಅಧ್ಯಕ್ಷರು-ಪದಾಧಿಕಾರಿಗಳು ಉಪಸ್ಥಿತರಿದ್ದರು.