ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಇತ್ತೀಚೆಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಕೆಪಿಸಿಸಿ ಮಲೆನಾಡು ರೈತರ ಸಮಸ್ಯೆಗಳ ಅಧ್ಯಯನ ಸಮಿತಿ ಸಂಯೋಜಕ ಬಿ.ಎ.ರಮೇಶ್ ಹೆಗ್ಡೆ (B.A. Ramesh Hegde) ಉತ್ತರಿಸಿದ್ದಾರೆ.
ಶರಾವತಿ ಮುಳುಗಡೆ ಸಂತ್ರಸ್ತರ ವಿಚಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ದ್ವಿಮುಖ ನಡೆಯನ್ನು ಅನುಸರಿಸುತ್ತಿದ್ದಾರೆ ಎಂದು ಹೆಗ್ಡೆ ಆರೋಪಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರು ತೋರುತ್ತಿರುವ ಕಾಳಜಿಯನ್ನು ಶರಾವತಿ ಸಂತ್ರಸ್ತರಿಗೆ ತೋರಿಸಿದ್ದಿದ್ದರೆ ಸಮಸ್ಯೆಕ್ಕೆ ಪರಿಹಾರ ಸಿಗುತ್ತಿತ್ತು. ಡಿನೋಟಿಫಿಕೇಶನ್ ವಿರುದ್ಧವಾಗಿ ತೀರ್ಪು ಬಂದು ಒಂದೂವರೆ ವರ್ಷವಾದರೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ.
| ಬಿ.ಎ.ರಮೇಶ್ ಹೆಗ್ಡೆ, ಸಂಯೋಜಕ, ಕೆಪಿಸಿಸಿ ಮಲೆನಾಡು ರೈತರ ಸಮಸ್ಯೆಗಳ ಅಧ್ಯಯನ ಸಮಿತಿ
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡಲು 56 ಡಿನೋಟಿಫಿಕೇಷನ್ ಮಾಡಲಾಗಿತ್ತು ಎಂದು ತಿಳಿಸಿದರು.
ರಮೇಶ್ ಹೆಗ್ಡೆ ಸವಾಲು
- 2015ರ ಜೂನ್ 26 ಹಾಗೂ 2016ರ ಅಕ್ಟೋಬರ್ 28ರಲ್ಲಿ ಸಂತ್ರಸ್ತ ರೈತರಿಗೆ ವಿವಿಧ ಅರಣ್ಯ ಪ್ರದೇಶದಡಿ ಪುನರ್ವಸತಿ ಕಲ್ಪಿಸಲು ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಜನಪ್ರತಿನಿದಿಗಳ ಸಭೆಯಲ್ಲಿ ಅಂದು ಶಾಸಕರಾಗಿದ್ದ ರಾಘವೇಂದ್ರ ಅವರು ಭಾಗವಹಿಸಿದ್ದರು. ಅಂದು ಡಿನೋಟಿಫಿಕೇಷನ್ ಸರಿಯಿಲ್ಲ ಅಂತ ಯಾಕೆ ಪ್ರಸ್ತಾಪ ಮಾಡಲಿಲ್ಲ. ಈಗ ತಪ್ಪಾಗಿದೆ ಅಂತ ಆಕ್ಷೇಪಣೆ ಮಾಡುತ್ತಿದ್ದಾರೆ. ಅವರಿಗೆ ಅರಿವಿನ ಕೊರತೆ ಇದಿಯಾ?
- ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ 2018ರ ಜನವರಿ 16ರಲ್ಲಿ ಶಿಕಾರಿಪುರ ತಾಲೂಕಿನ ಕಟ್ಟಿಗೆಹಳ್ಳ ಗ್ರಾಮದಲ್ಲಿ ಸುಮಾರು 250ಕ್ಕೂ ಅಧಿಕ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿತ್ತು. ಅಂದು ರಾಘವೇಂದ್ರ ಅವರೇ ತಮ್ಮ ಹಸ್ತದಿಂದ ಹಕ್ಕುಪತ್ರ ವಿತರಿಸಿದ್ದರು. ಅವತ್ತಿನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಕಾಗೋಡು ತಿಮ್ಮಪ್ಪ ಅವರನ್ನು ಹೊಗಳಿ ಇವತ್ತು ಯಾಕೆ ಆಕ್ಷೇಪಣೆ ಮಾಡುತ್ತೀದ್ದೀರಿ. ಇದು ದ್ವಿಮುಖ ನಡೆ ಅಲ್ಲವೇ?
- ಈಗ ಅರಣ್ಯ ಹಕ್ಕು ಕಾಯ್ದೆ, ಅರಣ್ಯ ಸಂರಕ್ಷಣಾ ಕಾಯ್ದೆ 1980, ಅರಣ್ಯ ಭೂಮಿ ಇಂಡೀಕರಣ ಸರಿಯಿಲ್ಲ ಅಂತ ಹೇಳುತ್ತೀದ್ದಿರಿ. ಮಲೆನಾಡಿನ ರೈತರ ಮೇಲೆ ಡಾ.ಕಸ್ತೂರಿ ರಂಗನ್ ವರದಿ ತೂಗು ಕತ್ತಿ ನೇತಾಡುತ್ತಿದೆ. ರಾಘವೇಂದ್ರ ಅವರು ಮೂರು ಬಾರಿ ಸಂಸದರಾಗಿದ್ದಾರೆ. ಈ ಬಗ್ಗೆ ಸಂಸತ್ತಿನಲ್ಲಿ ಯಾಕೆ ಚರ್ಚಿಸಿಲ್ಲ?
2011ರಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಜಾರಿಗೆ ತಂದು ರೈತರನ್ನು ಜೈಲಿಗೆ ಕಳಿಸಿದ್ದು ಇದೇ ಬಿಜೆಪಿ. ಸೊಪ್ಪಿನಬೆಟ್ಟ, ಕುಮ್ಕಿ, ಬ್ಯಾಣ ಮೊದಲಾದ ಸ್ವರೂಪದ ಭೂಮಿಯನ್ನು ಅರಣ್ಯ ಎಂದು ಘೋಷಣೆ ಮಾಡಿದ್ದು, ಯಡಿಯೂರಪ್ಪ ನೇತೃತ್ವದ ಸರ್ಕಾರ. ರೈತರು ಜೈಲಿಗೆ ಹೋಗಲು ಇವರೇ ನೇರ ಹೊಣೆ ಎಂದು ಆರೋಪಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರ ಜಾಗೃತ ಸಮಿತಿ ಸಂಚಾಲಕ ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡರಾದ ಜಿ.ಡಿ ಮಂಜುನಾಥ್, ಎನ್.ಪಿ ಧರ್ಮರಾಜ್ ಉಪಸ್ಥಿತರಿದ್ದರು.
https://suddikanaja.com/2022/12/01/today-arecanut-rate-in-karnataka-149/