ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಂಗನ ಕಾಯಿಲೆ (ಕ್ಯಾಸನೂರು ಅರಣ್ಯ ಕಾಯಿಲೆ-KFD) ತಡೆಗೆ ಜಿಲ್ಲಾಡಳಿತ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಅದರನ್ವಯ ಈಗಿನಿಂದಲೇ ಕೆಎಫ್.ಡಿ ಅಂತರ ಜಿಲ್ಲಾ ಸಮನ್ವಯ ಇಲಾಖೆಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆಎಫ್.ಡಿ (kyasanur forest disease) ನಿಯಂತ್ರಣದ ನಿಟ್ಟಿನಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಏರ್ಪಡಿಸಲಾಗಿದ್ದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಿಸೆಂಬರ್ 3, 4ನೇ ವಾರದಿಂದ ಈ ಉಣ್ಣೆಗಳ ವಿಕಸನ ಆರಂಭವಾಗಿ ಮಾರ್ಚ್ ನಲ್ಲಿ ಹೆಚ್ಚಾಗಿ ಏಪ್ರಿಲ್’ಗೆ ಕಡಿಮೆ ಆಗುತ್ತದೆ. ಆದ್ದರಿಂದ ಈಗಿನಿಂದಲೇ ಆರೋಗ್ಯ ಇಲಾಖೆ, ಪಶುಪಾಲನಾ ಇಲಾಖೆ, ಅರಣ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಸಂಬಂಧಿಸಿ ಇಲಾಖೆಗಳು ಸಮನ್ವಯ ಸಾಧಿಸಿ ರೋಗ ನಿರ್ವಹಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
| ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ
ಪ್ರತಿ ವಾರ ವರದಿ ಸಲ್ಲಿಕೆ ಕಡ್ಡಾಯ
ತಾಲ್ಲೂಕು ಮತ್ತು ಗ್ರಾ.ಪಂ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳು ಪ್ರತಿ ವಾರ ಸಭೆ ಸೇರಿ ಕೆಎಫ್.ಡಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ತಾ.ಪಂ ಇಓಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಈಗಾಗಲೇ ಕೋವಿಡ್ ಸಮಯದಲ್ಲಿನ ಟಾಸ್ಕ್ ಫೋರ್ಸ್ ಸಮಿತಿಗಳ ಮೂಲಕ ಹಾಗೂ ಗ್ರಾ.ಪಂ ಮಟ್ಟದಲ್ಲಿ ಪಿಡಿಓ, ಪಿಎಚ್.ಸಿಗಳು ಇತರೆ ಸಂಬಂಧಿಸಿದ ಅಧಿಕಾರಿ/ ಸಿಬ್ಬಂದಿ ಒಟ್ಟಾಗಿ ಗ್ರಾಮ ಸಭೆಗಳಲ್ಲಿ ಕಾಯಿಲೆ ನಿಯಂತ್ರಣಕ್ಕಾಗಿ ಪ್ರತಿ ವಾರ ಸಭೆ ನಡೆಸಿ, ವರದಿ ನೀಡಬೇಕೆಂದರು.
READ | ಇಎಸ್ಐನಲ್ಲಿ 9 ಹುದ್ದೆಗಳಿಗೆ ನೇರ ಸಂದರ್ಶನ, ನೀವು ಪಾಲ್ಗೊಳ್ಳಿ
ಕೆಎಫ್.ಡಿ. ತಡೆಗೆ ಡಿಸಿ ನೀಡಿದ ಸೂಚನೆಗಳೇನು?
- ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಮತ್ತು ಸಂಬಂಧಿಸಿದ ಕಾರ್ಯಕ್ರಮಾಧಿಕಾರಿ ಕೆಎಫ್.ಡಿ ನಿರ್ವಹಣೆ ಕುರಿತು ಈಗಿನಿಂದಲೇ ಸರ್ವೇಕ್ಷಣಾ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು.
- ಗ್ರಾಮವಾರು ಮ್ಯಾಪಿಂಗ್ ಹಾಗೂ ಜಾಗೃತಿ ಮೂಡಿಸುವ ಕಾರ್ಯ ಈಗಿನಿಂದಲೇ ಆರಂಭಿಸಬೇಕು.
- ವಿಶೇಷವಾಗಿ ತೀರ್ಥಹಳ್ಳಿಯಲ್ಲಿ ಹೆಚ್ಚಾಗಿ ಕಂಡುಬರುವ ಪ್ರದೇಶದಲ್ಲಿ ಅರಿವು ಮತ್ತು ಸೂಕ್ತ ಕ್ರಮ ವಹಿಸಬೇಕು.
- ಪಶುಪಾಲನಾ ಇಲಾಖೆಯವರು ಸಾಕುಪ್ರಾಣಿಗಳಲ್ಲಿ ಉಣ್ಣೆ ನಿಯಂತ್ರಣ ಕ್ರಮಗಳಾದ ರಾಸುಗಳಿಗೆ ನಿವಾರಕ(ರೆಪೆಲೆಂಟ್)ಗಳ ಬಳಕೆ, ರಾಸುಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸಲು ಸೂಚನೆ ನೀಡುವುದು
- ಅರಣ್ಯ ಪ್ರದೇಶದಲ್ಲಿ ಮೇಯುವುದನ್ನು ತಡೆಯುವುದು, ಮಂಗಗಳ ಸಾವಾದಲ್ಲಿ ಮಾರ್ಗಸೂಚಿಯನ್ವಯ ಮರಣೋತ್ತರ ಪರೀಕ್ಷೆ ಮಾಡಿಸುವುದು
- ಅರಣ್ಯ ಇಲಾಖೆಯವರು ಮಂಗನ ಸಾವಾದಲ್ಲಿ ಗುರುತಿಸಿ, ವರದಿ ನೀಡಿ, ವಿಲೇವಾರಿಗೆ ಸೂಕ್ತ ಕ್ರಮ ಜರುಗಿಸುವುದು. ಜೊತೆಗೆ, ಕೆ.ಎಫ್.ಡಿ. ನಿರ್ವಹಣೆ ಕುರಿತು ಮಾಹಿತಿ, ಶಿಕ್ಷಣ ನೀಡುವುದು, ವಿಚಕ್ಷಣೆ ಇತರೆ ಕ್ರಮ ವಹಿಸಬೇಕು.
- ಪಂಚಾಯಿತಿ ಮಟ್ಟದಲ್ಲಿ ಕೆಎಫ್.ಡಿ ಸೋಂಕು ನಿರ್ವಹಣೆ ಕುರಿತು ಅರಿವು ಹೆಚ್ಚಿಸಬೇಕು. ಗ್ರಾ.ಪಂ ಪಿಡಿಓ, ಆಶಾ ಕಾರ್ಯಕರ್ತೆಯರು ಒಳಗೊಂಡು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಕೇವಲ ಜಿಲ್ಲೆ ಮಾತ್ರವಲ್ಲ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೆಎಪ್.ಡಿ ಸ್ಥಿತಿಗತಿ ಬಗ್ಗೆ ನಿಗಾ ಇಡಬೇಕು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ಸಾಗರ ಉಪವಿಭಾಗಾಧಿಕಾರಿ ಪಲ್ಲವಿ, ಸಾಗರ ಉಪವಿಭಾಗದ ಅರಣ್ಯ ಅಧಿಕಾರಿ ಯೋಗೇಶ್, ಜಿ.ಪಂ ಉಪಕಾರ್ಯದರ್ಶಿ ಜಯಲಕ್ಷ್ಮಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಶಿವಯೋಗಿ ಯಲಿ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
https://suddikanaja.com/2022/12/02/leopard-trap-at-haramaghatta/