ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳ್ಳಲು ಒಟ್ಟು 1,52,096 ಅರ್ಜಿಗಳು ಬಂದಿದ್ದು, 1,45,539 ಅರ್ಜಿಗಳನ್ನು ಅಪ್ಡೇಟ್ ಮಾಡಲಾಗಿದೆ. 5,584 ಅರ್ಜಿಗಳು ತಿರಸ್ಕೃತಗೊಂಡಿದ್ದು, 973 ಅರ್ಜಿಗಳು ಬಾಕಿ ಇವೆ ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್. ಹೊನ್ನಳ್ಳಿ (Dr.Nagendra F.Honnali) ಹೇಳಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಾರಾಂಶ ಪರಿಷ್ಕರಣೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿ, ನಮೂನೆ 7ರಲ್ಲಿ 1,43,575 ಅರ್ಜಿಗಳು ಬಂದಿವೆ. 3,341 ತಿರಸ್ಕೃತವಾಗಿ 1,40,227 ಅರ್ಜಿಗಳು ಅನುಮೋದನೆಯಾಗಿವೆ. ನಮೂನೆ 8ರಲ್ಲಿ ಹೆಸರು, ಸಂಬಂಧ ಬದಲಾವಣೆ, ತಪ್ಪು ವಯಸ್ಸು ತಿದ್ದುಪಡಿ ಇತರೆ ಒಟ್ಟು 91,434 ಅರ್ಜಿಗಳು ಬಂದಿದ್ದು, 4259 ತಿರಸ್ಕೃತವಾಗಿ 87,173 ಅರ್ಜಿಗಳನ್ನು ಅಪ್ಡೇಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮತದಾರರ ಪರಿಷ್ಕರಣೆ ಸಂಬಂಧ ಇರುವ ದೂರು ಉಸ್ತುವಾರಿ ವ್ಯವಸ್ಥೆ (ಕಂಪ್ಲೈಂಟ್ ಮಾನಿಟರಿಂಗ್ ಸಿಸ್ಟಂ)ಯಡಿ ಇದುವರೆಗೆ 533 ದೂರುಗಳನ್ನು ಸ್ವೀಕರಿಸಿ ಉತ್ತರಿಸಲಾಗಿದೆ. ಇದುವರೆಗೆ ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ನಮೂನೆ 6(ಹೊಸ ಸೇರ್ಪಡೆ), 6ಎ, 7 ಮತ್ತು 8 (ತಿದ್ದುಪಡಿ, ವರ್ಗಾವಣೆ, ಮರಣ ಇತರೆ ಕಾರಣಗಳಿಂದ ಪಟ್ಟಿಯಿಂದ ಹೆಸರು ರದ್ದತಿ, ಕ್ಷೇತ್ರ ಬದಲಾವಣೆ ಇತರೆ) ಸೇರಿದಂತೆ ಒಟ್ಟು 3,98,178 ಅರ್ಜಿಗಳು ಬಂದಿದ್ದು, ಪರಿಶೀಲನೆಗೊಳಪಡಿಸಿ, ಈ ಪೈಕಿ 14,008 ಜನರ ಹೆಸರನ್ನು ತೆಗೆಯಲಾಗಿದೆ. 3,80,375 ಅರ್ಜಿಗಳು ಅಪ್ಡೇಟ್ ಆಗಿದ್ದು 1016 ಅರ್ಜಿಗಳು ಬಾಕಿ ಇವೆ. ಬಿಎಲ್ಎ ಗಳಿಗೆ ಬೂತ್ವಾರು ಪಟ್ಟಿ ನೀಡಲಾಗುವುದು ಈ ಕುರಿತು ಅವರು ಪರಿಶೀಲನೆ ನಡೆಸಬಹುದು.
– ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ
ಬಿಎಲ್ಓಗಳ ಮನೆ ಮನೆ ಸರ್ವೇ ಬಳಿಕ ಲಿಂಗಾನುಪಾತ ಹೆಚ್ಚು
ಬಿಎಲ್ಓ ಗಳ ಮನೆ ಮನೆ ಸರ್ವೇ ಕಾರ್ಯ ಶೇ.100 ಆಗಿದೆ. ಸರ್ವೇ ನಂತರ ಎಲ್ಲ ಮತ ಕ್ಷೇತ್ರಗಳಲ್ಲಿ ಲಿಂಗ ಅನುಪಾತ ಹೆಚ್ಚಾಗಿದೆ. ಸರ್ವೇಗೂ ಮುನ್ನ 1013.95 ಇದ್ದ ಲಿಂಗಾನುಪಾತ ಸರ್ವೇ ನಂತರ 1017.7 ಆಗಿದೆ. 18-19 ವರ್ಷದ ಲಿಂಗಾನುಪಾತ 0.46 ರಿಂದ 1.29 ನಷ್ಟು ಹೆಚ್ಚಾಗಿದೆ. 2023ರ ಜನವರಿ 5ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
READ | 30ಕ್ಕೂ ಹೆಚ್ಚು ಜನರಲ್ಲಿ ದಿಢೀರ್ ವಾಂತಿ ಭೇದಿ, ಆತಂಕದಲ್ಲಿ ಜನ
ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ
ಬಿಎಲ್ ಓಗಳ ಮನೆ ಮನೆ ಸರ್ವೇ ನಂತರ ಮತದಾರರ ಲಿಂಗಾನುಪಾತದಲ್ಲಿ ಸುಧಾರಣೆ ಕಂಡಿದೆ. ಪ್ರತಿ ಮತಗಟ್ಟೆಯ ಮತಗಟ್ಟೆ ಅಧಿಕಾರಿಗಳು ಇನ್ನೂ ವಿಚಕ್ಷಣೆಯಿಂದ ಕಾರ್ಯ ನಿರ್ವಹಿಸಬೇಕು. ಹಾಗೂ ಪಕ್ಷಗಳ ಬೂತ್ ಮಟ್ಟದ ಏಜೆಂಟ್ ಗಳು ಸಹ ತಮ್ಮ ವ್ಯಾಪ್ತಿಯಲ್ಲಿ ಹೊಸ ಸೇರ್ಪಡೆ, ಮರಣ ಇತರೆ ಕಾರಣಗಳಿಗೆ ಹೆಸರನ್ನು ಪಟ್ಟಿಯಿಂದ ತೆಗೆಸುವ ಬಗ್ಗೆ ಮಾಹಿತಿಯನ್ನು ನೀಡಬೇಕು. ಬಿಎಲ್ಓ ಗಳು ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವರು ಎಂದು ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರಾಗಿ ನೇಮಕಗೊಂಡಿರುವ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ (Dr.S.Selvakumar) ಎಂದರು.
ಸಭೆಯಲ್ಲಿ ಐಎಎಸ್ ಪ್ರೊಬೇಷನರಿ ಅಧಿಕಾರಿ ದಲ್ಜೀತ್ ಕುಮಾರ್, ಶಿವಮೊಗ್ಗ ಮತ್ತು ಸಾಗರ ಉಪ ವಿಭಾಗದ ಎಸಿ ಗಳು, ಚುನಾವಣಾ ತಹಸೀಲ್ದಾರ್ ಮಂಜುಳಾ ಭಜಂತ್ರಿ, ಬಿಜೆಪಿ ಪಕ್ಷದ ಮುಖಂಡರಾದ ಕೆ.ಜಿ.ಕುಮಾರಸ್ವಾಮಿ, ವಿನ್ಸೆಂಟ್ ರಾಡ್ರಿಗಸ್, ಕಾಂಗ್ರೆಸ್ ಪಕ್ಷದ ಚಂದನ್ ಇತರರು ಪಾಲ್ಗೊಂಡಿದ್ದರು.
https://suddikanaja.com/2022/12/27/dcc-bank-providing-yeshasvini-health-insurance-scheme-bank-president-channaveerappa-requested-to-utilize-it/