ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಷ್ಟ್ರೀಯ ಹೆದ್ದಾರಿ 766(ಸಿ) ಬೈಂದೂರು- ರಾಣೆಬೆನ್ನೂರು ಹೆದ್ದಾರಿಯ ಅಭಿವೃದ್ಧಿ 1012.75 ಕೋಟಿ ರೂ.ಗಳ ಅನುದಾನ ಮಂಜೂರಾತಿ ಹಾಗೂ ಶಿವಮೊಗ್ಗ ನಗರ ಉತ್ತರ ಭಾಗದ ಬೈಪಾಸ್ ರಸ್ತೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
READ | ಶಿವಮೊಗ್ಗದಲ್ಲಿ ರಾತ್ರಿ ವೇಳೆ ಹೈ ಸೆಕ್ಯೂರಿಟಿ, 16 ಕಡೆ ಚೆಕ್ ಪೋಸ್ಟ್, ಒಂದೇ ರಾತ್ರೀಲಿ 46 ಕೇಸ್
ಕೋಟಿಗಳ ಅನುದಾನ ಮಂಜೂರಾತಿ
ಕರಾವಳಿ ಪ್ರದೇಶ ಬೈಂದೂರಿನಿಂದ ಕೊಲ್ಲೂರು, ನಗರ, ಹೊಸನಗರ, ಆನಂದಪುರ, ಶಿಕಾರಿಪುರ, ಮಾಸೂರು, ರಟ್ಟೆಹಳ್ಳಿ, ಮೂಲಕ ರಾಣೆಬೆನ್ನೂರಿಗೆ ಹೋಗುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 766(ಸಿ)ಯನ್ನು ಸಂಪೂರ್ಣವಾಗಿ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಲು ಕೇಂದ್ರ ಭೂಸಾರಿಗೆ ಸಚಿವರಿಗೆ ಮನವಿ ಮಾಡಲಾಗಿತ್ತು. ಅದರ ಫಲವಾಗಿ ಕೇಂದ್ರ ಭೂಸಾರಿಗೆ ಮಂತ್ರಾಲಯವು ಸಕಾರಾತ್ಮಕವಾಗಿ ಸ್ಪಂದಿಸಿ ಕಳೆದ ವರ್ಷ ಸದರಿ ಹೆದ್ದಾರಿಯ ಏಳು ಕಿರು ಸೇತುವೆಗಳ ಹಾಗೂ 27.70 ಕಿ.ಮೀ ಉದ್ದದ ದ್ವಿಪಥ ರಸ್ತೆ ನಿರ್ಮಾಣದ ಒಟ್ಟು 238.70 ಕೋಟಿಗಳ ಡಿ.ಪಿ.ಆರ್ಗೆ ಮಂಜೂರಾತಿ ನೀಡಿದ್ದು ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ ಎಂದು ತಿಳಿಸಿದ್ದಾರೆ.
ರಸ್ತೆ ಅಭಿವೃದ್ಧಿಗೆ ಅನುಮೋದನೆ ನೀಡಿರುವ ಕೇಂದ್ರ ಭೂಸಾರಿಗೆ ಸಚಿವರಿಗೆ ಖುದ್ದು ಭೇಟಿಯಾಗಿ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದ್ದೇನೆ.
| ಬಿ.ವೈ.ರಾಘವೇಂದ್ರ, ಸಂಸದ
ರಸ್ತೆ ಅಗಲೀಕರಣಕ್ಕೆ 394 ಕೋಟಿ ಅನುದಾನ
ಮುಂದುವರಿದು ಈ ವರ್ಷ 2022-23 ನೇ ಸಾಲಿಗೆ ಬೈಂದೂರಿನಿಂದ ಹಾಲ್ಕಲ್ ಜಂಕ್ಷನ್ ಮತ್ತು ಕೊಲ್ಲೂರು ಮೂಲಕ ನಾಗೋಡಿವರೆಗಿನ 40.40 ಕಿ.ಮೀ ಉದ್ದದ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸುವ 394.05 ಕೋಟಿ ರೂ. ಮೊತ್ತದ ಡಿ.ಪಿ.ಆರ್ಗೆ ಕೇಂದ್ರ ಭೂಸಾರಿಗೆ ಮಂತ್ರಾಲಯವು ಮಂಜೂರಾತಿ ನೀಡಿರುತ್ತದೆ.
ಇದಲ್ಲದೆ, ಹೆದ್ದಾರಿಯ ಶಿಕಾರಿಪುರ ಪಟ್ಟಣಕ್ಕೆ 6.576 ಕಿ.ಮೀ ಉದ್ದದ ಬೈಪಾಸ್ ರಸ್ತೆ ನಿರ್ಮಾಣ ಮಾಡಲು 66.44 ಕೋಟಿ ಮೊತ್ತದ ಡಿ.ಪಿ.ಆರ್ ಹಾಗೂ ಹೊಸನಗರ ಮಾವಿನಕೊಪ್ಪ ವೃತ್ತದಿಂದ ಹೊಸನಗರ ಬೈಪಾಸ್, ಶರಾವತಿ ಹಿನ್ನೀರಿಗೆ 1.54 ಕಿ.ಮೀ ಮತ್ತು 0.72 ಕಿ.ಮೀ. ಉದ್ದದ 2 ಭಾರೀ ಸೇತುವೆಗಳ ನಿರ್ಮಾಣದೊಂದಿಗೆ ಆಡುಗೋಡಿವರೆಗೆ 13.82 ಕಿ.ಮೀ ಉದ್ದದ ಬದಲೀ ರಸ್ತೆ ನಿರ್ಮಾಣ ಮಾಡುವ ರೂ 313.56 ಕೋಟಿಯ ಡಿ.ಪಿ.ಆರ್ಗೆ ಮಂಜೂರಾತಿ ನೀಡಲಾಗಿದ್ದು ಬಾಕಿ ಉಳಿದ ಹೆದ್ದಾರಿ ಅಗಲೀಕರಣ ಮಾಡಲು ಡಿ.ಪಿ.ಆರ್ ತಯಾರಿಸಲು ಸಹ ಕೇಂದ್ರ ಭೂಸಾರಿಗೆ ಮಂತ್ರಾಲಯವು ಆದೇಶಿಸಿರುತ್ತದೆ.
ಸದರಿ ಹೆದ್ದಾರಿಯನ್ನು ಸಂಪೂರ್ಣ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಲು ಕ್ರಮವಹಿಸಿ ಈವರೆಗೂ ಒಟ್ಟು 1,012.75 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ.
READ | ಶಿವಮೊಗ್ಗದಲ್ಲಿ ನಡೆಯಲಿದೆ ಲೀಡರ್’ಶಿಪ್ ಟ್ರೈನಿಂಗ್, ಪಾಲ್ಗೊಳ್ಳಲು ಏನು ಮಾಡಬೇಕು?
ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಒಪ್ಪಿಗೆ
- ಶಿವಮೊಗ್ಗ- ಹೊನ್ನಾಳಿ- ಮಲೆಬೆನ್ನೂರು-ಹರಿಹರ- ಹರಪನಹಳ್ಳಿ- ಮರಿಯಮ್ಮನಹಳ್ಳಿ ರಸ್ತೆ
- ಶಿವಮೊಗ್ಗ- ಶಿಕಾರಿಪುರ- ಶಿರಾಳಕೊಪ್ಪ- ಹಾನಗಲ್- ತಡಸ ರಸ್ತೆ- ಆಯನೂರು- ರಿಪ್ಪನ್ಪೇಟೆ-ಹುಂಚ- ತೀರ್ಥಹಳ್ಳಿ- ಮಾಸ್ತಿಕಟ್ಟೆ- ಕುಂದಾಪುರ ರಸ್ತೆ
- ಸಾಗರ- ಸೊರಬ-ಶಿರಾಳಕೊಪ್ಪ- ಆನವಟ್ಟಿ ರಸ್ತೆಗಳನ್ನು ಸಹ ಮೇಲ್ದರ್ಜೆಗೇರಿಸಿ 4 ಪಥದ ರಸ್ತೆಗಳನ್ನಾಗಿ ಅಗಲೀಕರಣಗೊಳಿಸಿ ಕೊಡಲು ಸಹ ಕೋರಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಶಿವಮೊಗ್ಗ ನಗರದ ಉತ್ತರ ಭಾಗದ ಬಾಕಿ ಉಳಿದ 15 ಕಿ.ಮೀ ಉದ್ದದ ಬೈಪಾಸ್ ರಸ್ತೆಗೆ ಮಂಜೂರಾತಿ ನೀಡಿ ಶಿವಮೊಗ್ಗ ನಗರಕ್ಕೆ 34 ಕಿ.ಮೀ ಉದ್ದದ ರಿಂಗ್ ರಸ್ತೆ ಪೂರ್ಣಗೊಳಿಸಲು ನೆರವು ನೀಡಲು ಕೋರಲಾಗಿತ್ತು. ಅದಕ್ಕೂ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸದಸ್ಯರಿಗೆ ಶಿವಮೊಗ್ಗ ನಗರದ ಉತ್ತರಭಾಗದ ಬೈಪಾಸ್ ರಸ್ತೆಗೆ ಮಂಜೂರಾತಿ ದೊರಕಿಸಿಕೊಡಲು ಕ್ರಮವಹಿಸಲು ಸೂಚಿಸಿರುತ್ತಾರೆ ಎಂದು ರಾಘವೇಂದ್ರ ತಿಳಿಸಿದ್ದಾರೆ.
https://suddikanaja.com/2022/12/20/health-department-recruitment-various-post-in-all-districts-of-karnataka/