ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹೊಸ ಪಿಂಚಣಿ ನೀತಿ(new pension scheme- ಎನ್.ಪಿ.ಎಸ್) ವಿರುದ್ಧ ಹೋರಾಟ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಮಾಧ್ಯಮಗೋಷ್ಠಿ ಕರೆದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಹೋರಾಟದ ದಿನಾಂಕವನ್ನು ನಿಗದಿಪಡಿಸಿದ್ದಾರೆ.
ಮಾರ್ಚ್’ಗೆ ವೇತನ ಆಯೋಗದ ವರದಿ ಸಲ್ಲಿಕೆಯಾಗಲಿದೆ. ಏಪ್ರಿಲ್ ಬಳಿಕ ಎನ್.ಪಿ.ಎಸ್ ವಿರುದ್ಧದ ನಿರ್ಣಾಯಕ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಎಲ್ಲವೂ ಪಾರದರ್ಶಕವಾಗಿಯೇ ಇದೆ, ನಿರ್ಧಾರದಂತೆ ವೇತನ ಆಯೋಗಕ್ಕೆ ಒತ್ತು
ಐದು ವರ್ಷಕ್ಕೆ ಒಂದು ಸಲ ವೇತನ ಆಯೋಗ ರಚನೆ ಆಗಬೇಕು. 1952ರಿಂದ ಇಲ್ಲಿಯವರೆಗೆ ಈ ಕೆಲಸವೇ ಆಗಿಲ್ಲ. ಹೀಗಾಗಿ, ಸಂಘದಲ್ಲಿ ಚರ್ಚಿಸಿ ಆಯೋಗ ರಚನೆಗೆ ಮೊದಲ ಆದ್ಯತೆ ನೀಡಬೇಕೆಂದು ಹೋರಾಟ ರೂಪಿಸಲಾಯಿತು. ಇದು ಸಂಘದ ಗಮನದಲ್ಲೂ ಇದೆ. ಎಲ್ಲರೂ ಸೇರಿಯೇ ನಿರ್ಧರಿಸಿದ್ದೇವು. ಷಡಾಕ್ಷರಿಯೊಬ್ಬರೇ ನಿರ್ಣಯಿಸಿರಲಿಲ್ಲ. ಅದರ ಫಲವಾಗಿ ಇದೆ ಮೊದಲ ಬಾರಿ ಅವಧಿಗೂ ಮೊದಲು ವೇತನ ಆಯೋಗ ರಚಿಸಲಾಗಿದೆ ಎಂದು ಹೇಳಿದರು.
12 ಲಕ್ಷ ಜನರಿಗೆ ಪ್ರಯೋಜನ
ಹೊಸ ಪಿಂಚಣಿ ಮತ್ತು ಹಳೆಯ ಪಿಂಚಣಿ(old pension scheme)ಯ ಒಟ್ಟು 8 ಲಕ್ಷ ನೌಕರರು, 4.50 ಲಕ್ಷ ನಿವೃತ್ತ ನೌಕರರು ಸೇರಿ ಒಟ್ಟು 12 ಲಕ್ಷ ಮಂದಿಗೆ ವೇತನ ಆಯೋಗದಿಂದ ಅನುಕೂಲ ಆಗಲಿದೆ ಎಂದು ತಿಳಿಸಿದರು.
ಹೊಸ ಪಿಂಚಣಿ ನೀತಿ (ಎನ್.ಪಿ.ಎಸ್) ವಿರುದ್ಧ ಸಂಘ ಕ್ರಮಬದ್ಧವಾಗಿ, ನಿರ್ಣಾಯಕ ಹೋರಾಟ ನಡೆಸಲಿದೆ. ಎನ್.ಪಿ.ಎಸ್ ವಿರುದ್ಧ ಹೋರಾಟದ ವಿಚಾರವಾಗಿ ಕೆಲವರು ತಮ್ಮನ್ನು ಸರ್ಕಾರದ ಏಜೆಂಟ್ ಎಂದು ಆರೋಪಿಸಿದ್ದಾರೆ. ಇದರಿಂದ ನಾನೇನೂ ವಿಚಲಿತನಾಗುವುದಿಲ್ಲ. ವೇತನ ಆಯೋಗ ಮತ್ತು ಎನ್.ಪಿ.ಎಸ್ ರದ್ಧತಿ ನಮ್ಮ ಪ್ರಮುಖ ಬೇಡಿಕೆಯಾಗಿವೆ. ಇದಕ್ಕಾಗಿ ಕ್ರಮಬದ್ಧವಾಗಿ ಹೋರಾಟ ರೂಪಿಸಲಾಗುವುದು.
ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷ, ಸರ್ಕಾರಿ ನೌಕರರ ಸಂಘ
ಎರಡರಲ್ಲಿ ಒಂದು ಪೂರೈಸುವುದಾಗಿ ಸರ್ಕಾರ ಹೇಳಿತ್ತು
ಎನ್.ಪಿ.ಎಸ್ ರದ್ದತಿ ಹಾಗೂ ವೇತನ ಆಯೋಗ ಜಾರಿ ಎರಡು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿತ್ತು. ಎರಡೂ ಬೇಡಿಕೆ ಈಡೇರಿಸಿದ್ದರೆ ಸರ್ಕಾರದ ಮೇಲೆ 40 ಸಾವಿರ ಕೋಟಿ ರೂ. ಹೊರೆಯಾಗಲಿದೆ ಎಂದು ಸರ್ಕಾರ ಹೇಳಿತ್ತು. ಇದೆ ಕಾರಣಕ್ಕೆ ಮೊದಲು ವೇತನ ಆಯೋಗದತ್ತ ಗಮನ ಹರಿಸಿದ್ದೇವೆ ಎಂದರು.
READ | ಮತ್ತೆ ಕೊರೋನಾ ನಾಲ್ಕನೇ ಅಲೆ ಆತಂಕ, ಬಿಎಫ್ 7 ಮೂರು ಪ್ರಕರಣ ದೃಢ, ಏನೆಲ್ಲ ಮುನ್ನೆಚ್ಚರಿಕೆ?
ಎನ್.ಪಿ.ಎಸ್ ಬಗ್ಗೆ ಹೇಳಿದ್ದೇನು?
- ಎನ್.ಪಿ.ಎಸ್ ಸಮಸ್ಯೆ ನಾನು ಅಧ್ಯಕ್ಷನಾಗುವುದಕ್ಕೂ ಮುಂಚಿನಿಂದ ಅಂದರೆ ಕಳೆದ 16 ವರ್ಷಗಳಿಂದ ಇದೆ. ಆಗ ಷೇರು ಮಾರುಕಟ್ಟೆ ಚೆನ್ನಾಗಿತ್ತು. ಈಗ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದನ್ನು ಸಿಎಂ ಗಮನಕ್ಕೂ ತರಲಾಗಿದೆ.
- ಮೂರು ರಾಜ್ಯದಲ್ಲಿ ಎನ್.ಪಿ.ಎಸ್ ರದ್ಧತಿಗೆ ಆದೇಶವಾಗಿದೆ ಎಂದು ಹೇಳಲಾಗಿದೆ. ಆದರೆ ಅಲ್ಲೆಲ್ಲೂ ಹಳೆಯ ಪಿಂಚಣಿ ನೀತಿ ಜಾರಿಗೊಳಿಸಿಲ್ಲ. ಕೇಂದ್ರ ಸರ್ಕಾರ ಎನ್.ಪಿ.ಎಸ್. ರದ್ಧತಿಯನ್ನು ತಿರಸ್ಕರಿಸಿದೆ ಎಂದು ಮಾಹಿತಿ ನೀಡಿದರು.
- ಎನ್.ಪಿ.ಎಸ್ ರದ್ಧತಿಗೆ ನಡೆಯುತ್ತಿರುವ ಹೋರಾಟಕ್ಕೆ ತಮ್ಮ ವಿರೋಧವಿಲ್ಲ. ದೊಡ್ಡ ಮಟ್ಟದ ಹೋರಾಟ ಆದರಷ್ಟೆ ಸರ್ಕಾರ ಗಮನ ಹರಿಸುತ್ತದೆ. ಹೋರಾಟಗಳನ್ನು ಯೋಜನ ಬದ್ಧವಾಗಿ ರೂಪಿಸಬೇಕು. ಮೊದಲು ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಿ, ಸಮಯ ಪಡೆಯಬೇಕು. ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಬೇಕು. ಆ ಬಳಿಕ ಹೋರಾಟ ನಡೆಸಬೇಕು.
- ರಾಜ್ಯದ 3.5 ಲಕ್ಷ ಎನ್.ಪಿ.ಎಸ್ ನೌಕರರು ಯಾವುದೆ ಯೋಚನೆ ಮಾಡುವ ಅಗತ್ಯವಿಲ್ಲ. ಸರ್ಕಾರಿ ನೌಕರರ ಸಂಘ ಹೋರಾಟ ನಡೆಸಲಿದೆ.
ಮಾಧ್ಯಮಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಮೋಹನ್, ಮಾರುತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.