ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೋವಿಡ್ ವರ್ಷ ಕೋವಿಡ್ ಕಾರಣದಿಂದಾಗಿ ಶ್ರೀಕ್ಷೇತ್ರ ಸಿಗಂದೂರಿನಲ್ಲಿ ಅದ್ಧೂರಿ ಜಾತ್ರೆ ಆಯೋಜನೆ ಸಾಧ್ಯವಾಗಿರಲಿಲ್ಲ. ಈ ವರ್ಷ ಅತ್ಯಂತ ವೈಭವದಿಂದ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ನಾಡಿನ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹರಿದುಬರುತ್ತಿದ್ದಾರೆ.
READ | ಬಿ.ಎಡ್ ಕೋರ್ಸಿನ ಮೂಲ ದಾಖಲೆಗಳ ಪರಿಶೀಲನೆ ಆರಂಭ, ಎಲ್ಲಿಯವರೆಗೆ ಕಾಲಾವಕಾಶ?
ತಳಿರು ತೋರಣದಿಂದ ಶೃಂಗಾರ
ಜಾತ್ರೆ ಪ್ರಯುಕ್ತ ಸಂಪೂರ್ಣ ದೇವಾಲಯವನ್ನು ಶೃಂಗರಿಸಲಾಗಿದೆ. ದೇವಳಕ್ಕೆ ಬಣ್ಣಬಳಿಯಲಾಗಿದೆ. ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರ ಮಾಡಲಾಗಿದೆ. ದೇವಾಲಯ ಆವರಣದಲ್ಲಿ ದೀಪಾಲಂಕಾರ ಮಾಡಿದ್ದು, ಎಲ್ಲೆಡೆ ಹಬ್ಬದ ವಾತಾವರಣವಿದೆ.
ಹಿನ್ನೀರು ಭಾಗಕ್ಕೆ ಬೇಲಿ
ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಇಡೀ ಪರಿಸರವನ್ನು ಶುಭ್ರಗೊಳಿಸಲಾಗಿದೆ. ಎಲ್ಲೆಡೆ ಸೂಚನಾ ಫಲಕ ಹಾಕಿದ್ದು, ದೇವಾಲಯದ ಸುತ್ತ ಇರುವ ಹಿನ್ನೀರಿ ಭಾಗಕ್ಕೆ ಬೇಲಿ ಹಾಕಲಾಗಿದೆ. ಕೋವಿಡ್ ನಿಯಮಾನುಸಾರ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಭಕ್ತರಿಗಾಗಿ ಊಟದ ವ್ಯವಸ್ಥೆ
ಜ.14 ಮತ್ತು 15ರಂದು ನಡೆಯುವ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಸಹಸ್ರಾರು ಭಕ್ತರ ಅನುಕೂಲಕ್ಕಾಗಿ ಉಪಹಾರ, ಊಟ ಹಾಗೂ ಸಿಹಿತಿಂಡಿಗಳ ವ್ಯವಸ್ಥೆ ಮಾಡಲಾಗಿದೆ. ಕರೂರು ಹೋಬಳಿ ಸೇರಿದಂತೆ ದೂರದ ಪ್ರದೇಶಗಳಿಂದ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.
ಸುಮಾರು 300 ಮಂದಿ ಸ್ವಯಂ ಸೇವಕರು ಜಾತ್ರೆಯಲ್ಲಿ ಭಕ್ತಾದಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸೇವಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.
READ | ಗ್ರಾಹಕರೇ ಗಮನಿಸಿ, ಕರೆಂಟ್ ಬಿಲ್ ಸಿಕ್ಕವರಿಗೆ ನೀಡದಿರಲು ಮೆಸ್ಕಾಂ ಎಚ್ಚರಿಕೆ
ಯಾವ ದಿನ ಏನೇನು ಕಾರ್ಯಕ್ರಮ?
ಜ.14ರಂದು ದೇವಿಯ ಮೂಲ ಸ್ಥಳವಾದ ಸೀಗೆಕಣಿವೆಯಲ್ಲಿ ಜ್ಯೋತಿ ಸ್ವರೂಪದಲ್ಲಿ ದೇವಿಯ ಮೆರವಣಿಗೆ ನಡೆಯಲಿದೆ. ಮೂಲ ಸ್ಥಳದಲ್ಲಿ ಐದು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯಿದೆ. ಅಂದು ಬೆಳಗ್ಗೆ ಅಲ್ಲಿಯೇ ಉಪಾಹಾರದ ವ್ಯವಸ್ಥೆಯನ್ನು ಆಡಳಿತ ಮಂಡಳಿ ಮಾಡಿದೆ.
ಜಾತ್ರೆಯನ್ನು ಖ್ಯಾತ ಚಲನಚಿತ್ರ ನಟ ರಾಘವೇಂದ್ರ ರಾಜ್ಕುಮಾರ್ ಹಾಗೂ ವಡನ್ಬೈಲ್ ಪದ್ಮಾವತಿ ಕ್ಷೇತ್ರದ ಧರ್ಮದರ್ಶಿ ವೀರರಾಜಯ್ಯ ಜೈನ್ ಜ್ಯೋತಿ ಬೆಳಗುವ ಮೂಲಕ ಮೆರವಣಿಗೆಗೆ ಚಾಲನೆ ನೀಡುವರು. ಕ್ಷೇತ್ರದ ಧರ್ಮದರ್ಶಿ ಡಾ.ಎಸ್.ರಾಮಪ್ಪ, ಶ್ರೀಮತಿ ಮೀನಾಕ್ಷಮ್ಮ, ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ರವಿಕುಮಾರ್ ಹಾಗೂ ಭಕ್ತರು, ಪ್ರಮುಖರು ಭಾಗವಹಿಸುವರು.
ದೇವಸ್ಥಾನದಲ್ಲಿ ಹೋಮ ಹವನ ಮತ್ತು ಯಾಗಗಳನ್ನು ಆಯೋಜಿಸಲಾಗಿದೆ. ಮೊದಲ ದಿನ ಸಂಜೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ ಸಿಗಂದೂರು ಮೇಳದವರಿಂದ ಯಕ್ಷಗಾನ ಪ್ರದರ್ಶನವಿದೆ. ಸಿಡಿಮದ್ದು ಪ್ರದರ್ಶನ ಗಂಗಾರತಿ ಕಾರ್ಯಕ್ರಮಗಳಿವೆ.
ಜ.15 ರಂದು ಬೆಳಗಿನ ಜಾವ ಮೂರು ಗಂಟೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಪಂಚಾಮೃತ ಅಭಿಷೇಕ ಪೂಜೆ, ಮಹಾ ಅಭಿಷೇಕ, ಹೂವಿನ ಅಲಂಕಾರ, ಆಭರಣ ಅಲಂಕಾರ, ಚಂಡಿಕಾಹೋಮ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ. ಅಂದು ಮಧ್ಯಾಹ್ನದಿಂದಲೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಂದು ಸಂಜೆ ನಡೆಯುವ ಗಾನ ವೈಭವ ಕಾರ್ಯಕ್ರಮದಲ್ಲಿ ಸರಿಗಮಪಾ ಹಾಗೂ ಎದೆತುಂಬಿ ಹಾಡುವೆನು ಖ್ಯಾತಿಯ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ.
https://suddikanaja.com/2023/01/05/home-minister-araga-jnanendra-help/