ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾಜಿ ಸಚಿವರೂ ಆದ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಸಚಿವ ಸ್ಥಾನದ ಆಕಾಂಕ್ಷೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದು, ‘ನಾನೀಗ ಸಚಿವನಾಗುವ ಆಸೆ ಬಿಟ್ಟಿದ್ದೇನೆ, ಸರ್ಕಾರಕ್ಕೆ ಮತ್ತೊಂದು ಸಮಸ್ಯೆಯಾಗಲಾರೆ’ ಎಂದು ಹೇಳಿದ್ದಾರೆ.
READ | ಫೆ.5ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ ನಳಿನ್ ಕುಮಾರ್ ಕಟೀಲ್, ಪೇಜ್ ಪ್ರಮುಖ ಸಮಾವೇಶಕ್ಕೆ 8,426 ಪ್ರಮುಖರು ಭಾಗಿ
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ತಮಗೆ ಕ್ಲೀನ್ ಚಿಟ್ ಸಿಕ್ಕಿದೆ. ಹೀಗಾಗಿ, ಸಚಿವ ಸ್ಥಾನದ ಇಂಗಿತ ವ್ಯಕ್ತಪಡಿಸಿದ್ದೆ. ರಾಜ್ಯದಾದ್ಯಂತ ಸಾಕಷ್ಟು ಜನರು ಸಚಿವರಾಗುವಂತೆ ಅಪೇಕ್ಷೆ ವ್ಯಕ್ತಪಡಿಸಿದ್ದರು. ಅದನ್ನೇ ಮುಖ್ಯಮಂತ್ರಿಗಳ ಬಳಿ ತಿಳಿಸಿದ್ದೆ. ಅವರು ರಾಷ್ಟ್ರೀಯ ನಾಯಕರ ಬಳಿ ಮಾತನಾಡುವ ಭರವಸೆ ನೀಡಿದ್ದರು. 224 ಶಾಸಕರೂ ಮಂತ್ರಿ ಆಗಲು ಆಗುವುದಿಲ್ಲ. ಪಕ್ಷದ ಯೋಚನೆ ಬೇರೆ ಇರಬಹುದು. ಈಗ ನಾನು ಆಸೆ ಬಿಟ್ಟಿದ್ದೇನೆ ಎಂದು ಹೇಳಿದರು.
ಕೇಂದ್ರದ ನಿರ್ಣಯವೇ ಫೈನಲ್
ಕೇಂದ್ರ ನಾಯಕರು ಯಾರಿಗೆ ಸಚಿವ ಸ್ಥಾನ ನೀಡಬೇಕೆಂದು ಯೋಚನೆ ಮಾಡಿಯೇ ಕೊಡುತ್ತಾರೆ. ನ್ಯಾಯಬದ್ಧ ತಂತ್ರಗಾರಿಕೆಯಿಂದಲೇ ಎಲ್ಲೆಡೆ ಬಿಜೆಪಿ ಗೆಲ್ಲುತ್ತಿದೆ. ಅನೇಕ ಕಡೆ ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದರು. ಹಲವೆಡೆ ಹಿಂದಿನ ಎಂಎಲ್ಎಗಳಿಗೆ ಟಿಕೆಟ್ ನೀಡಿಲ್ಲ. ಅಲ್ಲಿಯು ಸರ್ಕಾರಗಳು ಬಂದಿವೆ. ಹಾಗಾಗಿ ದೆಹಲಿ ನಾಯಕರು ತಂತ್ರಗಾರಿಕೆ ಮಾಡಿದ ಮೇಲಷ್ಟೆ ಗೊತ್ತಾಗುತ್ತದೆ ಎಂದು ತಿಳಿಸಿದರು.