ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಹಲವೆಡೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ (Ayanur Manjunath) ಅವರ ಚಿತ್ರವಿರುವ ಬ್ಯಾನರ್’ವೊಂದು ಅಳವಡಿಸಿದ್ದು, ಇದರ ಬೆನ್ನಲ್ಲೇ ಶಿವಮೊಗ್ಗ ನಗರ ವಿಧಾನಸಭೆ (shivamogga city constituency) ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಖುದ್ದು ಆಯನೂರು ಅವರೇ ಮಾತನಾಡಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಶಿವಮೊಗ್ಗ ಕ್ಷೇತ್ರದ ಜನರ ಸೇವೆ ಮಾಡಲು ನನಗೂ ಒಂದು ಅವಕಾಶ ಕೊಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಶಿವಮೊಗ್ಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಲಭೆಗಳು ನಡೆಯುತ್ತಿರುವುದು ನಿಜ. ಶಾಸಕ ಕೆ.ಎಸ್. ಈಶ್ವರಪ್ಪ (KS Eshwarappa) ಅವರು ಅದನ್ನು ಹತೋಟಿಗೆ ತಂದಿರುವುದೂ ನಿಜ. ಆದರೆ ಬಹಳಷ್ಟು ಬಡವರು ಗಲಭೆಗಳಿಂದ ಹತಾಶರಾಗಿದ್ದಾರೆ. ವ್ಯಾಪಾರಸ್ಥರು ಸಂಕಷ್ಟ ಅನುಭವಿಸಿದ್ದಾರೆ. ಗಲಭೆ ವೇಳೆಯಲ್ಲಿ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. ನಗರದಲ್ಲಿ ಶಾಂತಿ ಸ್ಥಾಪಿಸಬೇಕು ಎಂಬುದು ಎಲ್ಲರ ಉದ್ದೇಶವೂ ಆಗಿದೆ. ಈ ಉದ್ದೇಶವನ್ನು ಮತ್ತಷ್ಟು ಉತ್ತಮಪಡಿಸಲು ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂಬುದು ನನ್ನ ಒತ್ತಾಸೆಯಾಗಿದೆ” ಎಂದು ಹೇಳಿದರು.
READ | ಸಾಗರ ಮಾರಿಕಾಂಬಾ ಜಾತ್ರೆಗೆ ಜಿಲ್ಲಾಡಳಿತದಿಂದ 19 ಷರತ್ತುಗಳು, ಆದೇಶದಲ್ಲಿ ಏನಿದೆ?
ಫ್ಲೆಕ್ಸ್ ಬಗ್ಗೆ ಹೇಳಿದ್ದೇನು?
ನಗರದ ಹಲವೆಡೆ ಫ್ಲೆಕ್ಸ್ ಅಳವಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಅಭಿಮಾನಿಗಳು ಹೇಳಿದ ರೀತಿ ಇದೆ ಅಷ್ಟೆ. ಇದು ನನ್ನ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದರು. ನಾನು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗುವುದಕ್ಕೆ ಜನರಿಂದ ಯಾವ ವಿರೋಧವೂ ಇಲ್ಲ. ಈಶ್ವರಪ್ಪ ಮತ್ತು ನಾನು ಒಂದೇ ಕಾರಿನಲ್ಲಿ ಡ್ರೈವಿಂಗ್ ಮಾಡುತ್ತಿದ್ದೇವೆ. ಈಶ್ವರಪ್ಪನವರು ಡ್ರೈವಿಂಗ್ ಮಾಡುತ್ತಿದ್ದು, ಅವರಿಗೆ ದಣಿವಾದಾಗ ನಾನೂ ಸ್ವಲ್ಪ ದೂರ ಡ್ರೈವಿಂಗ್ ಮಾಡಬೇಕೆಂಬ ಬಯಕೆ ಇದೆ. ಅವರು ಅವಕಾಶ ಕೊಟ್ಟರೆ ಡ್ರೈವಿಂಗ್ ಮಾಡುತ್ತೇನೆ. ಇಲ್ಲವೇ ಅವರ ಪಕ್ಕದಲ್ಲಿಯೇ ಕುಳಿತುಕೊಳ್ಳುವೆ ಎಂದು ನಗೆಚಟಾಕಿಯ ಮೂಲಕ ತಮ್ಮ ಇಂಗಿತ ವ್ಯಕ್ತಪಡಿಸಿದರು.
ಕಾರ್ಖಾನೆ ವ್ಯಾಪ್ತಿ ರೆಡ್ ಝೋನ್
ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನಕ್ಕೆ ಈಗಲೂ ಪ್ರಯತ್ನ ನಡೆಯುತ್ತಿದೆ. ಕಾರ್ಖಾನೆಯ ವ್ಯಾಪ್ತಿಯನ್ನು ರೆಡ್ ಝೋನ್ ಎಂದು ಘೋಷಣೆಯಾಗಿರುವುದರಿಂದ ಯಾವುದೇ ಹೊಸ ಕಾರ್ಖಾನೆ ಆರಂಭವಾಗುವುದಿಲ್ಲ. ಕೊನೇ ಪಕ್ಷ ಸರ್ಕಾರ ಬಂಡವಾಳ ಹೂಡಬೇಕು ಅಥವಾ ಖಾಸಗಿಯವರಿಗೆ ವಹಿಸಿಕೊಡಬೇಕು. ಜಿಲ್ಲೆಯಲ್ಲಿ ಇರುವ ಏಕೈಕ ಸರ್ಕಾರಿ ಕಾರ್ಖಾನೆ ಇದಾಗಿರುವುದರಿಂದ ಇದನ್ನು ಉಳಿಸುವ ಪ್ರಯತ್ನ ಆಗುತ್ತಿದೆ ಎಂದರು.