ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯ ಸರ್ಕಾರಿ ನೌಕರರ ಸಂಘವು ಎರಡು ಪ್ರಮುಖ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯದಾದ್ಯಂತ ಮಾರ್ಚ್ 1ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಎಲ್ಲ ಸರ್ಕಾರಿ ನೌಕರರು ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಲಿದ್ದಾರೆ. ಪರಿಣಾಮ ಹಲವು ಸಾರ್ವಜನಿಕ ಸೇವೆಗಳ ವ್ಯತ್ಯಯವಾಗಲಿದೆ.
READ | ಫೆ.26ರಿಂದ ಎರಡು ದಿನ KSRTC ಬಸ್ ಸಂಚಾರದಲ್ಲಿ ವ್ಯತ್ಯಯ, ಕಾರಣವೇನು?
ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ (CS Shadakshari) ಅವರು, ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಯಾದ ವೇತನ ಪರಿಷ್ಕರಣೆಗೆ ಬಂಧಿಸಿದ ಮಧ್ಯಂತರ ವರದಿಯನ್ನು ಏಳನೇ ವೇತನ ಆಯೋಗದಿಂದ ಶೀಘ್ರ ಪಡೆದು 2022ರ ಜುಲೈ 1ರದ ಜಾರಿಗೆ ಬರುವಂತೆ ಶೇ.40ರಷ್ಟು ವೇತನ ಹೆಚ್ಚಳ ಸೌಲಭ್ಯವನ್ನು ಸರ್ಕಾರಿ ಆದೇಶ ಹೊರಡಿಸುವ ಮೂಲಕ ಅನುಷ್ಠಾನಗೊಳಿಸಬೇಕು. ಪಂಜಾಬ್, ರಾಜಸ್ಥಾನ, ಛತ್ತೀಸ್ ಗಢ, ಜಾರ್ಖಂಡ, ಹಿಮಾಚಲ ಪ್ರದೇಶ ರಾಜ್ಯಗಳ ಮಾದರಿಯಲ್ಲಿ ಎನ್.ಪಿ.ಎಸ್ (NPS) ರದ್ದುಪಡಿಸಿ ಓಪಿಎಸ್ (OPS) ಯೋಜನೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಬಜೆಟ್ ನಲ್ಲಿ ನಿರ್ಲಕ್ಷಿಸಿದ್ದಕ್ಕೆ ಬೇಸರ
ರಾಜ್ಯ ಸರ್ಕಾರ ಹಲವು ವಿಷಯಗಳಲ್ಲಿ ನೌಕರರ ಸಂಘಕ್ಕೆ ಬೆಂಬಲ ನೀಡಿದೆ. ಆದರೆ, ವೇತನ ಆಯೋಗ ಮತ್ತು ಓಪಿಎಸ್ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪಿಸದೇ ಇರುವುದರಿಂದ ನೌಕರರಿಗೆ ಬೇಸರವಾಗಿದೆ. ಹೀಗಾಗಿ, ಮುಷ್ಕರಕ್ಕೆ ಮುಂದಾಗಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ತಮ್ಮ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಮುಷ್ಕರ ಮುಂದುವರಿಯಲಿದೆ. ಯಾವುದೇ ಸಂದರ್ಭ ಬಂದರೂ ಅದನ್ನು ಎದುರಿಸುವುದಕ್ಕೆ ಸಂಘ ಸಿದ್ಧವಿದೆ ಎಂದರು.
ಏನಿರುತ್ತೆ, ಏನಿರಲ್ಲ?
ತುರ್ತು ಸೇವೆ, ಆಸ್ಪತ್ರೆಯ ಐಸಿಯುಗಳು ಮಾತ್ರ ಇರಲಿವೆ. ಉಳಿದಂತೆ, ಶಾಲೆ, ಕಾಲೇಜುಗಳಲ್ಲಿ ತರಗತಿ ನಡೆಯಲ್ಲ. ಗ್ರಾಮ ಪಂಚಾಯಿತಿಗಳು, ಸ್ಥಳೀಯ ಸಂಸ್ಥೆಗಳು, ಕೆಪಿಟಿಸಿಎಲ್ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಸೇವೆಗಳಿಗೆ ವ್ಯತ್ಯಯವಾಗಲಿದೆ. ವಿವಿಧ ಪರೀಕ್ಷೆಗಳು ನಡೆಯಲಿದ್ದು, ಅವುಗಳಿಗೂ ಸಿಬ್ಬಂದಿ ಹಾಜರಾಗಲ್ಲ ಎಂದರು.