ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹಾಗೂ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಕೆಳದಿ ಶಿವಪ್ಪ ನಾಯಕ ಅವರ ಹೆಸರನ್ನು ನಾಮಕರಣ ಮಾಡಲು ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ (BY Raghavendra) ತಿಳಿಸಿದರು.
READ | ಶಿವಮೊಗ್ಗಕ್ಕೆ ಬಂದ ಮೊದಲ ವಿಮಾನ, ಏನೇನಾಯ್ತು, ಏನಿದರ ವಿಶೇಷ?
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡೂ ಹೆಸರುಗಳನ್ನು ಕೇಂದ್ರಕ್ಕೆ ಪ್ರಸ್ತಾವನೆಗೆ ಕಳಿಸಲಾಗಿದೆ. ಶಿವಮೊಗ್ಗ, ತಾಳಗುಪ್ಪ, ಸಾಗರ ರೈಲು ನಿಲ್ದಾಣಗಳನ್ನು ಅಪ್ ಗ್ರೇಡ್ ಮಾಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಕೂಡ ಕೇಂದ್ರಕ್ಕೆ ಈ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಾಧಕರು ಜಾತಿಗೆ ಸೀಮಿತ ಬೇಡ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai)ಅವರಿಗೆ ಬಿ.ವೈ.ರಾಘವೇಂದ್ರ ಅವರು ಧನ್ಯವಾದಗಳನ್ನು ತಿಳಿಸಿದರು. ಹೈಟೆಕ್ ಆಗಿ ಮೇಲ್ದರ್ಜೇಗೇರಿಸಿರುವ ಶಿವಮೊಗ್ಗ ರೇಲ್ವೆ ನಿಲ್ದಾಣ(shivamogga railway station- SMET)ಕ್ಕೆ ಕೆಳದಿ ಶಿವಪ್ಪ ನಾಯಕ ಅರಸರ ಹೆಸರು ನಾಮಕರಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಹೆಸರನ್ನು ಕೇಂದ್ರಕ್ಕೆ ರವಾನಿಸಲಾಗಿದೆ. ಸಾಧಕರನ್ನು ಯಾವುದೇ ಜಾತಿ, ಧರ್ಮಕ್ಕೆ ಸೀಮಿತ ಮಾಡಬಾರದು. ಅವರ ಸಾಧನೆಗಳು ಇಂದಿನ ದಿನಕ್ಕೂ ಪ್ರೇರಣೆ ಆಗಬೇಕಿದೆ. ಕುವೆಂಪು, ಕೆಳದಿ ಶಿವಪ್ಪನವರ ಹೆಸರು ಅಂತಿಮ ಮಾಡಿದಕ್ಕೆ ಸಿಎಂ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಗೃಹ ಮಂಡಳಿಗೆ ₹35 ಕೋಟಿ ಪಾವತಿ
ವಿಮಾನ ನಿಲ್ದಾಣ ಸಂತ್ರಸ್ತರ ನಿವೇಶನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ರಾಜ್ಯ ಸರ್ಕಾರ ಆ ನಿಟ್ಟಿನತ್ತ ಗಮನಹರಿಸಿದೆ. ಗೃಹ ಮಂಡಳಿಗೆ ಈಗಾಗಲೇ ₹35 ಕೋಟಿ ಪಾವತಿಸಿದೆ. ಜಿಲ್ಲಾಧಿಕಾರಿಗಳು ಮುಂದಿನ ನಿರ್ವಹಣೆ ಮಾಡಲಿದ್ದಾರೆ. ಭೂಮಿ ಕೊಟ್ಟ ಎಲ್ಲ ರೈತರಿಗೂ ನಿವೇಶನ ಸಿಗಲಿದೆ. ಈ ಬಗ್ಗೆ ಯಾವ ಆತಂಕವೂ ಬೇಡ. ಉದ್ಯೋಗಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವ ಒಪ್ಪಂದವನ್ನೂ ಮಾಡಿಕೊಂಡಿಲ್ಲ. ಆದರೆ ಮಾನವೀಯತೆಯ ದೃಷ್ಟಿಯಿಂದ ಅಲ್ಲಿ ಉಳಿದಿರುವ ಉದ್ಯೋಗಗಳನ್ನು ಕನ್ನಡಿಗರಿಗೆ ಮತ್ತು ಸ್ಥಳೀಯರಿಗೆ ನೀಡುವ ಬಗ್ಗೆ ಯೋಚಿಸಲಾಗುವುದು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಶಿವರಾಜ್, ಬಿ.ಕೆ. ಶ್ರೀನಾಥ್, ಜಗದೀಶ್, ಪುರುಷೋತ್ತಮ್ ಹೃಷಿಕೇಶ್ ಪೈ ಉಪಸ್ಥಿತರಿದ್ದರು.