ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಲೆನಾಡಿನಲ್ಲಿ ವಾಸಿಸುವವರು ಬಂದೂಕುಗಳ ಠೇವಣಿಯಿಂದ ರಿಯಾಯಿತಿ ನೀಡಬೇಕೆಂದು ಆಗ್ರಹಿಸಿದ್ದರು. ಇಲ್ಲದಿದ್ದರೆ ಮತದಾನ ಬಹಿಷ್ಕಾರದ ಎಚ್ಚರಿಕೆಯನ್ನೂ ನೀಡಿದ್ದರು. ಈ ನಡುವೆ ಜಿಲ್ಲಾಡಳಿತ ಆದೇಶವೊಂದು ಹೊರಡಿಸಿದೆ.
READ | ಆಟೋದವರಿಗೆ ಚುನಾವಣೆ ಟಫ್ ರೂಲ್ಸ್, ನಿಯಮ ಮೀರಿದ್ರೆ ಬೀಳುತ್ತೆ ಕೇಸ್, ನೀಡಿರುವ ಪ್ರಮುಖ 5 ಸೂಚನೆಗಳೇನು?
ಜಿಲ್ಲಾಡಳಿತ ಹೊರಡಿಸಿರುವ ಆದೇಶದಲ್ಲಿ ಏನಿದೆ?
ಶಿವಮೊಗ್ಗ ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023ರ ನಡೆಸಲು ಕೇಂದ್ರ ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸಿದ್ದು, ನೀತಿ ಸಂಹಿತೆಯು 2023ರ ಮಾಚ್ 29 ರಿಂದ ಮೇ-15ರವರೆಗೆ ಜಾರಿಯಲ್ಲಿರುವುದರಿಂದ ಎಲ್ಲ ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಸ್ತ್ರ/ ಆಯುಧಗಳನ್ನು ಹೊಂದಿರುವವರು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವಂತೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಆದೇಶಿಸಿದ್ದಾರೆ.
ಠೇವಣಿಯಲ್ಲಿ ಇಡಲಾಗುವ ಶಸ್ತ್ರ/ ಆಯುಧಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಯ ಅಧಿಕಾರಿಗಳು ಸುರಕ್ಷಿತವಾಗಿ ಇಟ್ಟುಕೊಳ್ಳುವುದಲ್ಲದೇ ಠೇವಣಿ ಮಾಡಿದ ಪರವಾನಗಿದಾರರಿಗೆ ಸೂಕ್ತ ರಸೀದಿಯನ್ನು ನೀಡುವಂತೆ ಡಿಸಿ ಸೂಚಿಸಿದ್ದಾರೆ.
ಚುನಾವಣೆ ಫಲಿತಾಂಶ ಘೋಷಿಸಿದ ನಂತರ ಅಂದರೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಡಿಪಾಜಿಟ್ ಮಾಡಿದ ಪರವಾನಗಿಯನ್ನು ಹಿಂದಿರುಗಿಸಲು ಸೂಚಿಸಿದ್ದಾರೆ. ಚುನಾವಣೆಯು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಯಬೇಕಾಗಿರುವುದರಿಂದ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
ಯಾರಿಗೆ ಅನ್ವಯಿಸುವುದಿಲ್ಲ?
ಸರ್ಕಾರಿ ಕರ್ತವ್ಯದಲ್ಲಿ ನಿರತರಾದ ರಕ್ಷಣಾ ಸಿಬ್ಬಂದಿಗೆ, ಎಂಪಿಎಂ/ ವಿಐಎಸ್ಎಲ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಇತ್ಯಾದಿಗಳಲ್ಲಿ ಭದ್ರತಾ ಕರ್ತವ್ಯಗಳಲ್ಲಿರುವ ಸಿಬ್ಬಂದಿ ಅಧಿಕೃತ ಪರವಾನಗಿಯಲ್ಲಿ ಹೊಂದಿರುವ ಆಯುಧಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.