ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ (aynur manjunath) ಅವರು ರಂಜಾನ್ ಮತ್ತು ಯುಗಾದಿಗೆ ಶುಭಾಶಯ ಕೋರಿದ ಫ್ಲೆಕ್ಸ್’ವೊಂದು ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಅಳವಡಿಸಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಫ್ಲೆಕ್ಸ್’ನಲ್ಲಿ ಏನಿದೆ?
“ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ
ಮುರಿದ ಮನಸುಗಳ ಬೆಸುಗೆಯಾಗಲಿ
ಶಿವಮೊಗ್ಗದಲ್ಲಿ ಶಾಂತಿ- ಸೌಹಾರ್ದತೆ ನೆಲೆಸಲಿ
ಎಲ್ಲರಿಗೂ ಹಬ್ಬದ ಶುಭಾಶಯಗಳು.
ಈ ಬಾರಿ ಆಯನೂರು ಮಂಜುನಾಥ್”
ಎಂದು ಬರೆದಿರುವ ಫ್ಲೆಕ್ಸ್ ಹಾಕಿದ್ದು, ಅದು ಭಾರಿ ಚರ್ಚೆಗೆ ಕಾರಣವಾಗಿದೆ. ಈ ಹಿಂದೆಯೂ ಆಯನೂರು ಅವರ ಹೆಸರಿನಲ್ಲಿಯೇ ಇಂತಹದ್ದೇ ಒಂದು ಫ್ಲೆಕ್ಸ್ ಹಾಕಲಾಗಿತ್ತು. ಈಗ ಮತ್ತೆ ಫ್ಲೆಕ್ಸ್ ವೊಂದು ಅಳವಡಿಸಲಾಗಿದೆ. ಪರೋಕ್ಷವಾಗಿ ಶಾಸಕ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ರೆಬೆಲ್ ಆಗಿದ್ದಾರೆ ಎನ್ನುವುದು ಫ್ಲೆಕ್ಸ್ ನಲ್ಲಿನ ವಿಚಾರಗಳಿಂದ ಸ್ಪಷ್ಟವಾಗುತ್ತಿದೆ.
READ | ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರವನ್ನು ವಶಕ್ಕೆ ಪಡೆದ ಸೀಜ್ ಮಾಡಿದ ಆರೋಗ್ಯ ಇಲಾಖೆಗಳು, ಕಾರಣವೇನು?
ಆಯನೂರು ಮಂಜುನಾಥ್ ಹೇಳಿದ್ದೇನು?
“ಈಶ್ವರಪ್ಪ ಮತ್ತು ಬಿಜೆಪಿಯ ನಡುವೆ ನಾನು ಉರಿಗೌಡನೂ ಅಲ್ಲ. ನಂಜೇಗೌಡನೂ ಅಲ್ಲ. ಬದಲಿಗೆ ನಾನು ಆಯನೂರು ಮಂಜುನಾಥ್” ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ನನಗೆ ಮದುವೆ ಆಗೋಕೆ ನಿಮ್ಮ ಮನೆಯಲ್ಲೇ ಹೆಣ್ಣು ಕೊಡುತ್ತಾರೆ ಅಂದರೆ ಪಕ್ಕದ ಮನೆಯಲ್ಲಿ ನಾನು ಯಾಕೆ ನೋಡಲಿ. ಅಥವಾ ರಸ್ತೆಯಲ್ಲಿ ಹೋಗುವವರನ್ನು ನಾನು ಯಾಕೆ ನೋಡಲಿ. ಶಿವಮೊಗ್ಗ ನಗರ ಕ್ಷೇತ್ರದಿಂದ ನನಗೆ ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ. ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ಈಶ್ವರಪ್ಪ ಕೇಳಿದ್ದಾರೆ. ನಿಮ್ಮ ಮಗ ಇನ್ನೂ ಚಿಕ್ಕವನಿದ್ದಾನೆ. ನಂತರ ಕೊಡಿ. ಕ್ಯೂನಲ್ಲಿ ನಾವು ಇದ್ದೇವೆ.
– ಆಯನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ
ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಮತ್ತು ಬಿಜೆಪಿಯ ನಡುವೆ ನಾನು ಉರಿಗೌಡನೂ ಅಲ್ಲ. ನಂಜೇಗೌಡನೂ ಅಲ್ಲ. ಬದಲಿಗೆ ನಾನು ಆಯನೂರು ಮಂಜುನಾಥ್. ಯಾರ ಬಾಯಲ್ಲಿ ನಂಜು ಬರುತ್ತದೆಯೋ ಅವರನ್ನು ನಂಜೇಗೌಡ ಅನ್ನಿ. ಯಾರು ನನ್ನ ಮಾತು ಕೇಳಿ ಉರಿಬೀಳುತ್ತಾರೊ ಅವರಿಗೆ ಉರಿಗೌಡ ಅನ್ನಿ ಎಂದು ಹೇಳಿದರು.
ಯಾವುದೋ ಧರ್ಮದ ದೇವರು ಕಿವುಡನೇ, ಕುರುಡನೇ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಮಾತಾಡುವುದು ಬೇಡ. ಅವರೊಬ್ಬ ಪ್ರಬುದ್ಧ ರಾಜಕಾರಣಿ. ಜವಾಬ್ದಾರಿಯಿಂದ ಮಾತಾಡಬೇಕು ಎಂಬ ನಿರೀಕ್ಷೆ ನನಗೂ ಇದೆ ಎಂದರು.
ಅದು ಈಶ್ವರಪ್ಪ ಒಬ್ಬರಿಗೆ ಅನ್ವಯಿಸುವುದಿಲ್ಲ
“ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ ಎಂದು ಬಹುವಚನ ಬಳಸಲಾಗಿದೆ. ಹೀಗಾಗಿ, ಆ ಮಾತನ್ನು ಈಶ್ವರಪ್ಪ ಒಬ್ಬರಿಗೇ ಅನ್ವಯಿಸುವುದು ಸರಿಯಲ್ಲ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಾರ್ಥನೆ ಮಾಡಲು ಮುಂದಾಗುವವರಿಗೂ ಅದು ಅನ್ವಯಿಸುತ್ತದೆ” ಎಂದರು.
ಬಿಜೆಪಿಗೆ ಧಕ್ಕೆ ಬರುವ ಯಾವುದೇ ಮಾತುಗಳನ್ನು ಯಾವುದೇ ನಾಯಕರು ಹೇಳಿದರೂ ಅದನ್ನು ಸ್ವೀಕಾರ ಮಾಡಬೇಕೆಂಬ ಬಲವಂತ ನಮಗೆ ಯಾರಿಗೂ ಇಲ್ಲ. ಸಂಘಟನೆಯ ಹಿತದೃಷ್ಟಿಯಿಂದ ಈಶ್ವರಪ್ಪ ಹೀಗೆ ಮಾತಾಡುವುದು ಸರಿಯಲ್ಲ. ಜವಾಬ್ದಾರಿಯಿಂದ ಮಾತಾಡಿ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? ಈಶ್ವರಪ್ಪ ಹಾಗೆ ಮಾತಾಡಿದ್ದರೆ ತಿದ್ದಿಕೊಳ್ಳುವುದು ಒಳ್ಳೆಯದು. ಸಣ್ಣ ಘಟನೆ ನಡೆದರೂ ಶಿವಮೊಗ್ಗದಲ್ಲಿ ಏನಾಗುತ್ತದೆ ಎಂಬುದು ಊಹಿಸಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.
Dacoit gang | ಶಿವಮೊಗ್ಗದಲ್ಲಿ ದರೋಡೆ ಗ್ಯಾಂಗ್ ಅಂದರ್, 9 ಜನ ಸೇರಿ ಒಬ್ಬ ವ್ಯಕ್ತಿಗೆ ಲೂಟಿ ಮಾಡಿದ್ದು ಹೇಗೆ?