ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಕ್ರಮವಹಿಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ (Check post)ಗಳನ್ನು ಆರಂಭಿಸಲಾಗಿದೆ. ವಾಹನಗಳ ತಪಾಸಣೆ ಸಹ ಜೋರಾಗಿ ನಡೆದಿದೆ. ಪಕ್ಷಗಳಿಗಷ್ಟೇ ಅಲ್ಲದೇ ಜನರಿಗೆ ಕೆಲವೊಂದು ನಿಯಮಗಳು ಅನ್ವಯವಾಗಲಿವೆ. ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ಆದೇಶಿದ್ದಾರೆ.
- ₹50 ಸಾವಿರಕ್ಕಿಂತ ಅಧಿಕ ಹಣ ಕೊಂಡೊಯ್ಯುವಂತಿಲ್ಲ
ಜನರು ಸೂಕ್ತ ದಾಖಲೆ ಇಲ್ಲದೆ ₹50 ಸಾವಿರಗಿಂತ ಅಧಿಕ ನಗದನ್ನು ಕೊಂಡೊಯ್ಯಬಾರದು. ಯಾವುದೇ ಸಾಧನ, ಸಾಮಗ್ರಿಗಳನ್ನು ಸೂಕ್ತ ದಾಖಲೆಗಳಿಲ್ಲದೆ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಡುವುದು ಅಥವಾ ಸಾಗಾಟ ಮಾಡಬಾರದು. - ಮದುವೆಗೆ ಪೂರ್ವಾನುಮತಿ ಬೇಕಿಲ್ಲ
ವಿವಾಹ ಸೇರಿದಂತೆ ವೈಯಕ್ತಿಕ ಸಮಾರಂಭಗಳಿಗೆ ಅಧಿಕಾರಿಗಳಿಂದ ಯಾವುದೇ ಪೂರ್ವಾನುಮತಿ ಬೇಕಾಗಿಲ್ಲ. ಆದರೆ, ಇದಕ್ಕೆ ಕೆಲವೊಂದು ನಿಯಮಗಳನ್ನು ಹೇರಲಾಗಿದೆ. ಅದರನ್ವಯ, ಮದುವೆ ಸಮಾರಂಭಕ್ಕೆ ಪಕ್ಷ, ಅಭ್ಯರ್ಥಿ ಪರವಾಗಿ ಕರಪತ್ರ ಹಂಚುವಂತಿಲ್ಲ. ಬ್ಯಾನರ್ ಕಟ್ಟುವುದೂ ಸೇರಿ ರಾಜಕೀಯ ಚುಟುವಟಿಕೆಗೆ ಅದು ವೇದಿಕೆಯಾಗಬಾರದು. - ಪಾನೀಯ ವಿತರಣೆ ಸಹ ಮಾಡುವಂತಿಲ್ಲ
ಮತದಾರರಿಗೆ ಆಮಿಷ ಒಡ್ಡಲು ಯಾವುದೇ ರೀತಿಯಲ್ಲಿ ಹಣ ವರ್ಗಾಯಿಸುವುದು, ವಿವಿಧ ಸಾಧನ ಸಾಮಗ್ರಿಗಳ ವಿತರಣೆ, ಗಿಫ್ಟ್ ಓಚರ್ಗಳು, ಸಿಮ್ ಕಾರ್ಡ್ ಬ್ಯಾಲೆನ್ಸ್, ಪ್ರವಾಸಕ್ಕೆ ಏರ್ಪಾಡು ಮಾಡುವುದು, ಆಹಾರ ಪದಾರ್ಥಗಳ ವಿತರಣೆ, ಮದ್ಯ ಮತ್ತಿತರ ಪಾನೀಯಗಳ ವಿತರಣೆ, ವಾಹನಗಳಿಗೆ ಯಾವುದೇ ರೀತಿಯಲ್ಲಿ ಇಂಧನ ಭರಿಸುವುದು ಐಪಿಸಿ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ 1951 ಅಡಿ ಶಿಕ್ಷಾರ್ಹ ಅಪರಾಧವಾಗಿದೆ. - ಹಣಕ್ಕೆ ಅನುಗುಣ ಕೇಸ್ ದಾಖಲು
ದಾಖಲೆ ರಹಿತವಾಗಿ ₹10 ಲಕ್ಷಕ್ಕಿಂತ ಕಡಿಮೆ ಮೊತ್ತದ ಹಣ ಕೊಂಡೊಯ್ದರೆ ಪ್ರತ್ಯೇಕ ಪ್ರಕರಣ, ₹10 ಲಕ್ಷಕ್ಕಿಂತ ಅಧಿಕ ಹಣ ಕೊಂಡೊಯ್ದರೆ ಪ್ರತ್ಯೇಕ ಪ್ರಕರಣವನ್ನು ಸಂಬಂಧಪಟ್ಟವರ ಮೇಲೆ ದಾಖಲಿಸಲಾಗುವುದು.
ಜಾಹೀರಾತು ನಿರ್ಬಂಧ
ಚುನಾವಣಾ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಅಥವಾ ಸಾರ್ವಜನಿಕರಿಗೆ ಕಾಣಿಸುವ ರೀತಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೆ ಜಾಹೀರಾತುಗಳನ್ನು ಪ್ರಚೂರಪಡಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.
ಮುದ್ರಣ ನಿರ್ಬಂಧ
ಚುನಾವಣಾ ಸಂದರ್ಭದಲ್ಲಿ ಯಾವುದೇ ಚುನಾವಣಾ ಕರಪತ್ರ, ಪ್ಲೆಕಾರ್ಡ್, ಬ್ಯಾನರ್, ಬಂಟಿಂಗ್ಸ್, ಫೆಕ್ಸ್, ಪೋಸ್ಟರ್ ಇತ್ಯಾದಿಗಳನ್ನು ಮುದ್ರಿಸುವ ಸಂದರ್ಭದಲ್ಲಿ ಅದರಲ್ಲಿ ಮುದ್ರಕರ ಹೆಸರು, ವಿಳಾಸ, ಮುದ್ರಣ ಸಂಖ್ಯೆ ಇತ್ಯಾದಿ ವಿವರಗಳನ್ನು ಕಡ್ಡಾಯವಾಗಿ ನಮೂದಿಸಿರಬೇಕು.
ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನಗದು ಇನ್ನಿತರ ಸಾಮಗ್ರಿಗಳನ್ನು ನೀಡಿ ಆಮಿಷ ಒಡ್ಡುವುದು ಹಾಗೂ ಅದನ್ನು ಪಡೆಯುವುದು ಅಪರಾಧವಾಗಿದ್ದು, ಅಂತಹ ಕೃತ್ಯಗಳು ಕಾನೂನು ಪ್ರಕಾರ ಶಿಕ್ಷಾರ್ಹವಾಗಿದೆ.
– ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ
ಮುದ್ರಣ ಕುರಿತಾಗಿ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ 3 ದಿನಗಳ ಒಳಗಾಗಿ ಹಾಗೂ ಸಾಮಗ್ರಿಯ ಪ್ರತಿಯನ್ನು ಕಡ್ಡಾಯವಾಗಿ ಜಿಲ್ಲಾಧಿಕಾರಿ ಕಚೇರಿಗೆ ಒದಗಿಸಬೇಕು. ಇದರ ಉಲ್ಲಂಘನೆ ಪ್ರಜಾಪ್ರತಿನಿಧಿ ಕಾಯ್ದೆ 1951 ರ 127 (ಎ) ಉಲ್ಲಂಘನೆಯಾಗಿದೆ.
ಪೂರ್ವಾನುಮತಿ ಕಡ್ಡಾಯ
ಚುನಾವಣಾ ಜಾಹೀರಾತುಗಳನ್ನು ಕೇಬಲ್ ನೆಟ್ವರ್ಕ್ ಅಥವಾ ಟಿವಿ ಚಾನೆಲ್ಗಳಲ್ಲಿ ಪ್ರಸಾರ ಮಾಡುವ ಪೂರ್ವದಲ್ಲಿ ಕಡ್ಡಾಯವಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆದಿರಬೇಕು.
ಸುಗಮ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಗಾಗಿ ಈಗಾಗಲೇ ಸ್ಟಾಟಿಕ್ ಸರ್ವೆಯಲೆನ್ಸ್ ತಂಡಗಳು, ವಿಡಿಯೋ ವೀಕ್ಷಣಾ ತಂಡಗಳು ಹಾಗೂ ಫ್ಲಯಿಂಗ್ ಸ್ಕ್ವಾಡ್ಗಳನ್ನು ರಚಿಸಲಾಗಿದೆ. ಮುಕ್ತ, ಪಾರದರ್ಶಕ ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಸಲು ಸಾರ್ವಜನಿಕರು ಸಹಕಾರ ನೀಡುವಂತೆ ಅವರು ಕೋರಿದ್ದಾರೆ.