ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರ ಸೂಚನೆ ಮೇರೆಗೆ ಪಿಸಿ & ಪಿಎನ್ಡಿಟಿ ಕಾಯ್ದೆಯ ಅನ್ವಯ ಡಿಐಎಂಸಿ ತಂಡವು ಸಾಗರದ ಚಾಮರಾಜಪೇಟೆಯ ಸಂಜೀವಿನಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಸ್ಕ್ಯಾನಿಂಗ್ಗೆ ಸಂಬಂಧಿಸಿದ ದಾಖಲೆಗಳು ಮತ್ತು ಸ್ಕ್ಯಾನಿಂಗ್ ಯಂತ್ರವನ್ನು ವಶಪಡಿಸಿಕೊಂಡು ಸೀಲ್ ಮಾಡಲಾಗಿರುತ್ತದೆ.
ಗರ್ಭಿಣಿ ನೀಡಿದ ಮಾಹಿತಿ ಅನ್ವಯ ಕ್ರಮ
ಮಾರ್ಚ್ 18 ರಂದು ಸಾಗರ (sagar) ತಾಲ್ಲೂಕಿನ ಸೈದೂರು (saidur) ಗ್ರಾಮ ಪಂಚಾಯಿತಿಯಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ(Jilladhikari nade halli kade)’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಡಗಳಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಗರ್ಭಿಣಿ ಸ್ತ್ರೀಯ ಆರೋಗ್ಯವನ್ನು ವಿಚಾರಿಸಿದಾಗ, “ತಪಾಸಣೆಗೆಂದು ಇಲ್ಲಿಗೆ ಬಂದಿರುತ್ತೇನೆ. ಈ ಹಿಂದೆ ಸಾಗರದ ಆಸ್ಪತ್ರೆಯೊಂದರ ತಪಾಸಣೆ ಮಾಡಿಸಿದ್ದು, ಆ ಸಂದರ್ಭದಲ್ಲಿ ತನಗೆ ಗಂಡು ಮಗು ಆಗುವುದಾಗಿ ತಿಳಿಸಿರುತ್ತಾರೆ” ಎಂದು ಜಿಲ್ಲಾಧಿಕಾರಿಗೆ ಮಹಿಳೆ ಹೇಳಿರುತ್ತಾರೆ.
ಅದರನ್ವಯ ಜಿಲ್ಲಾಧಿಕಾರಿ ಅವರು ಪಿಸಿ & ಪಿಎನ್ಡಿಟಿ ಸಕ್ಷಮ ಪ್ರಾಧಿಕಾರದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಡಿಐಎಂಸಿ ತಂಡವು ಪಿಸಿ & ಪಿಎನ್ಡಿಟಿ ಕಾಯ್ದೆಯನ್ವಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದನ್ವಯ ಪರಿಶೀಲನೆ ನಡೆಸಿ ಸ್ಕ್ಯಾನಿಂಗ್ ಯಂತ್ರವನ್ನು ಸೀಜ್ ಮಾಡಲಾಗಿರುತ್ತದೆ.
ಪಿಸಿ & ಪಿಎನ್ಡಿಟಿ ಸಲಹಾ ಸಮಿತಿಯಲ್ಲಿ ಈ ವಿಚಾರವನ್ನು ಮಂಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಚ್ಓ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.
ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ಹದ್ದಿನ ಕಣ್ಣು, ಯಾವುದಕ್ಕೆಷ್ಟು ದಂಡ, ಶಿಕ್ಷೆ ಗೊತ್ತಾ?