ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka assembly election) ನಾಮಪತ್ರ ಸಲ್ಲಿಸಲು ಗುರುವಾರ ಅಂತಿಮ ದಿನ. ಅದೇ ದಿನದಂದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹಬ್ಬದ ವಾತಾವರಣ ಮನೆ ಮಾಡಿತ್ತು. ಕುಟುಂಬದ ಸದಸ್ಯರೂ ಅಭ್ಯರ್ಥಿಗಳೊಂದಿಗೆ ಸಂತೋಷದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
READ | ಹೈವೋಲ್ಟೇಜ್ ಕ್ಷೇತ್ರದಲ್ಲಿ ಕಾರ್ಪೋರೇಟರ್’ಗಳ ಕಾಳಗ, ಶಿವಮೊಗ್ಗ ಅಖಾಡಕ್ಕೆ ಆಯನೂರು ಎಂಟ್ರಿ
ಕೈ ಕಟ್ಟಾಳು ಯೋಗೇಶ್
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಎಚ್.ಸಿ. ಯೋಗೇಶ್ (HC Yogesh) ಅವರು ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ರಾಮಣ್ಣ ಶ್ರೇಷ್ಠಿ ಪಾರ್ಕಿನ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಮ್ಮ ಅಪಾರ ಬೆಂಬಲಿಗರೊಂದಿಗೆ ದೇವಸ್ಥಾನದಿಂದ ಗಾಂಧಿಬಜಾರ್, ಶಿವಪ್ಪನಾಯಕ ಪುತ್ಥಳಿ, ನೆಹರೂ ರಸ್ತೆ, ಗೋಪಿ ಸರ್ಕಲ್, ಕಸ್ತೂರಬಾ ಕಾಲೇಜು ರಸ್ತೆ ಮೂಲಕ ಸಾಗಿ ಮಹಾನಗರ ಪಾಲಿಕೆಯಲ್ಲಿರುವ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ” ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಕಟ್ಟರ್ ಹಿಂದುತ್ವವಾದಿ ಚನ್ನಿ ನಾಮಪತ್ರ ಸಲ್ಲಿಕೆ
ಕೊನೆಯ ಕ್ಷಣದಲ್ಲಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡ ಎಸ್.ಎನ್. ಚನ್ನಬಸಪ್ಪ (ಚೆನ್ನಿ) (SN Channabasappa) ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಾವಿರಾರು ಸಂಖ್ಯೆಯಲ್ಲಿದ್ದ ಬೆಂಬಲಿಗರು ಹಾಗೂ ಕಾರ್ಯಕರ್ತರ ಜೊತೆಗೆ ಮೆರವಣಿಗೆಯಲ್ಲಿ ಸಾಗಿದರು.
ಇದಕ್ಕೂ ಮೊದಲು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರ ಮನೆಗೆ ತೆರಳಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಚನ್ನಬಸಪ್ಪ ಅವರನ್ನು ಪ್ರೀತಿಯಿಂದ ತಬ್ಬಿ ನೀನು ಗೆದ್ದೇ ಗೆಲ್ಲುತ್ತೀಯಾ ಯಾವ ಆತಂಕವೂ ಬೇಡ ಎಂದು ಈಶ್ವರಪ್ಪ ವಿಶ್ವಾಸ ತುಂಬಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದೇ ಬರುತ್ತದೆ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ. ಬಿಜೆಪಿಯಲ್ಲಿ ಕಾರ್ಯಕರ್ತರು, ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.
READ | 117 ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನೋಟಿಸ್, ಕಾರಣವೇನು?
ಶಿವಮೊಗ್ಗದಲ್ಲಿ ಈ ಬಾರಿ ತ್ರಿಕೋನಸ್ಪರ್ಧೆ ಆಗುವ ಎಲ್ಲ ಲಕ್ಷಣಗಳಿವೆ. ಕಳೆದ ಬಾರಿ 45 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೆವು. ಈ ಬಾರಿ 60 ಸಾವಿರಕ್ಕೂ ಹೆಚ್ಚಿನ ಅಂತರದಿಂದ ಗೆಲ್ಲುತ್ತೇವೆ. ನಾನು ರಾಜ್ಯಾದ್ಯಂತ ಚುನಾವಣಾ ಪ್ರಚಾರದಲ್ಲಿ ತೊಡಗಬೇಕಾಗಿದೆ. ಶಿವಮೊಗ್ಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಹಿರಿಯರಾದ ಈಶ್ಪರಪ್ಪನವರ ಮಾರ್ಗದರ್ಶನದಲ್ಲಿಯೇ ಈ ಚುನಾವಣೆಯನ್ನು ನಡೆಸುತ್ತೇನೆ. ಕಾರ್ಯಕರ್ತರೆಲ್ಲ ಉತ್ಸಾಹದಿಂದ ಇದ್ದಾರೆ ಎಂದು ಹೇಳಿದರು.
ಜೆಡಿಎಸ್ ಅಭ್ಯರ್ಥಿಯಾಗಿ ಆಯನೂರು ನಾಮಪತ್ರ
ಹಲವು ರಾಜಕೀಯ ತಿರುವುಗಳ ನಡುವೆ ಆಯನೂರು ಮಂಜುನಾಥ್ (ayanur manjunath) ಅವರು ಜೆಡಿಎಸ್ ಅಭ್ಯರ್ಥಿಯಾಗಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯವಾಗಿ ನನಗೆ ಶಿವಮೊಗ್ಗದಲ್ಲಿ ಶಾಂತಿ ಬೇಕಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾಂತೀಯ ಪಕ್ಷದಿಂದ ನಾನು ಸ್ಪರ್ಧಿಸಿದ್ದೇನೆ. ಅದಕ್ಕಾಗಿ ವಿಶೇಷ ತಯಾರಿ ನಡೆಸಿದ್ದೇನೆ. ಶಿವಮೊಗ್ಗದಲ್ಲಿ 30 ವರ್ಷಗಳ ಕಾಲ ಏಕತಾನತೆಯ ರಾಜಕಾರಣವನ್ನು ನೋಡಿದ ಜನತೆಗೆ ಹೊಸತನ ಬೇಕಾಗಿದೆ. ಅದರ ಅನುಭವ ಕೂಡ ನಮಗಾಗುತ್ತಿದೆ. ಅತಿಹೆಚ್ಚು ಮತಗಳ ಅಂತರದಿಂದ ನಾನು ಗೆಲ್ಲುತ್ತೇನೆ ಎಂದರು.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಶಾರದಾ ಪೂರ್ಯಾನಾಯ್ಕ, ರಾಮಕೃಷ್ಣ ಇದ್ದರು.
ಚನ್ನಬಸಪ್ಪ ಅವರು ಈಶ್ವರಪ್ಪ ಅವರ ಪ್ರತಿರೂಪವೇ ಆಗಿದ್ದಾರೆ. ಅದಕ್ಕಿಂತ ಒಂದು ಕೈ ಮಿಗಿಲು ಎನ್ನಬಹುದು. ಅವರದೇ ಸಿದ್ಧಾಂತದ ವ್ಯಕ್ತಿ ಚನ್ನಬಸಪ್ಪ. ನಾನು ಅತ್ಯಂತ ಆತ್ಮವಿಶ್ವಾಸದಿಂದಲೇ ನಾಮಪತ್ರ ಸಲ್ಲಿಸಿದ್ದೇನೆ. ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ. ನನ್ನ ಗೆಲುವು ಖಚಿತ.
– ಆಯನೂರು ಮಂಜುನಾಥ್, ಜೆಡಿಎಸ್ ಅಭ್ಯರ್ಥಿ
ಸಾವಿರಾರು ಬೆಂಬಲಿಗರೊಂದಿಗೆ ಶ್ರೀನಿವಾಸ್ ನಾಮಪತ್ರ
ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾವಿರಾರು ಬೆಂಬಲಿಗರೊಂದಿಗೆ ಡಾ. ಶ್ರೀನಿವಾಸ ಕರಿಯಣ್ಣ (Dr. Shrinivas kariyanna) ನಾಮಪತ್ರ ಸಲ್ಲಿಸಿದರು.
ಗುರುವಾರ ಬೆಳಿಗ್ಗೆ ರವೀಂದ್ರನಗರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಬಂದ ಶ್ರೀನಿವಾಸ ಕರಿಯಣ್ಣ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಪ್ರಮುಖರಾದ ವೈ.ಎಚ್. ನಾಗರಾಜ್, ಶಹಾಬುದ್ದೀನ್, ಎಚ್.ಎಲ್. ಷಡಾಕ್ಷರಿ, ರಾಜಶೇಖರ್ ಸೇರಿದಂತೆ ಅಪಾರ ಬೆಂಬಲಿಗರು ಇದ್ದರು.
Cricket betting | ಶಿವಮೊಗ್ಗ, ಭದ್ರಾವತಿಯ ಬೆಟ್ಟಿಂಗ್ ಕಿಂಗ್’ಪಿನ್ ಅರೆಸ್ಟ್, ಖಾತೆಯಲ್ಲಿತ್ತು ಲಕ್ಷ ಲಕ್ಷ ರೂಪಾಯಿ