ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣವೊಂದರಲ್ಲಿ ದೊಡ್ಡಪೇಟೆ ಪೊಲೀಸರು ಆರೋಪಿ ಅಜರ್ ಎಂಬಾತನನ್ನು ಬಂಧಿಸಿದ್ದು, ವಿಚಾರಣೆ ವೇಳೆ ಆತನ ಬಳಿಕ ಮಾರಕಾಸ್ತ್ರ, ಗನ್ ಸಿಕ್ಕಿವೆ.
ಇಲಿಯಾಜ್ ನಗರದ ಅಜರ್ ಅಲಿಯಾಸ್ ಮೊಹಮ್ಮದ್ ಅಜರ್(25) ಎಂಬಾತನನ್ನು ಬಂಧಿಸಲಾಗಿದೆ. ಈತನು ಅಣ್ಣಾನಗರದ ಮೊಹಮ್ಮದ್ ರಿಯಾಬ್(24) ಬಳಿ ಬೈಕ್ ಅನ್ನು ಖರೀದಿಸಿದ್ದು, ಅದರ ಹಣ ನೀಡುವಂತೆ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾನೆ.
READ | ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಖರ್ಚಾದ ಹಣವೆಷ್ಟು? ಶಾಕ್ ಆಗುವುದರಲ್ಲಿ ಅನುಮಾನವೇ ಇಲ್ಲ!
ನಡೆದ ಘಟನೆ ಏನು?
ದ್ವಿಚಕ್ರ ವಾಹನ ಖರೀದಿಸಿದ ಹಣವನ್ನು ನೀಡದೇ ಅಜರ್ ಸತಾಯಿಸುತ್ತಿದ್ದ. ಏಪ್ರಿಲ್ 8ರಂದು ಇಲಿಯಾಜ್ ನಗರದ ನ್ಯಾಮತ್ ಶಾದಿ ಮಹಲ್ ಬಳಿ ಅಜರ್ ನಿಂತಿದ್ದಾಗ ಬೈಕ್ ನ ಹಣವನ್ನು ಕೊಡು ಎಂದು ಮೊಹಮ್ಮದ್ ರಿಯಾಬ್ ಕೇಳಿದ್ದಕ್ಕೆ ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಅಜರ್ ನು ತನ್ನ ಬಳಿ ಇದ್ದ ಗನ್ನಿನ ಹಿಂಭಾಗದಿಂದ, ತಲೆ ಮತ್ತು ಮೈ ಕೈಗೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದ. ಗನ್ ತೋರಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಸಹ ಹಾಕಿದ್ದ ಎಂದು ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಲಾಗಿತ್ತು. ಈತನ ವಿರುದ್ಧ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ಬೇಧಿಸಿದ ತಂಡ
ಆರೋಪಿಯ ಪತ್ತೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಾಲರಾಜ್ ಮೇಲ್ವಿಚಾರಣೆಯಲ್ಲಿ, ದೊಡ್ಡಪೇಟೆ ಪಿಐ ಅಂಜನ್ ಕುಮಾರ್, ಎಸ್.ಐ ವಸಂತ್ ಪೊಲೀಸ್ ನೇತೃತ್ವದಲ್ಲಿ ಪೂರ್ವ ಸಂಚಾರಿ ಠಾಣೆಯ ಎಎಸ್ಐ ಮಂಜುನಾಥ್, ದೊಡ್ಡಪೇಟೆಯ ಎಎಸ್ಐ ಚೂಡಾಮಣಿ, ರೌಡಿ ನಿಗ್ರಹ ದಳದ ಸಿಬ್ಬಂದಿ ಎಚ್.ಸಿ ಹಾಲಪ್ಪ, ಅಶೋಕ್, ಮನೋಹರ್, ಗುರುನಾಯ್ಕ, ನಾಗಪ್ಪ, ಹರೀಶ್ ನಾಯ್ಕ, ವಸಂತ್, ರಮೇಶ್, ಆಕಾಶ್, ಶರತ್ ಮತ್ತು ತಮ್ಮಣ್ಣ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.
READ | ಚಾಕುದಿಂದ ಚುಚ್ಚಿ ಹಲ್ಲೆ, 5 ಜನರಿಗೆ ಶಿಕ್ಷೆ ವಿಧಿಸಿದ ಶಿವಮೊಗ್ಗ ನ್ಯಾಯಾಲಯ
ಆರೋಪಿ ಬಳಸಿ ಸಿಕ್ಕಿದ್ದೇನು?
ತನಿಖಾ ತಂಡವು ಸೋಮವಾರ ಆರೋಪಿ ಅಜರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ತಾನು ಅಕ್ರಮವಾಗಿ ಶಸ್ತ್ರಾಸ್ತ್ರವನ್ನು ಹೊಂದಿರುವುದಾಗಿ ಮಾಹಿತಿ ನೀಡಿದ ಮೇರೆಗೆ ಆರೋಪಿತನಿಂದ ಒಂದು ಕಂಟ್ರಿ ಮೇಡ್ ಪಿಸ್ತೂಲ್, ಒಂದು ಮೇಡ್ ಇನ್ ಬೆಂಗಳೂರು ಇಂಡಿಯಾ ಏರ್ ಗನ್, ಏರ್ ಗನ್ ಗುಂಡುಗಳು, 100 ಎಂಎಲ್ ನ ಡ್ರಗ್ ಮಿಶ್ರಿತವಿರುವ ಮೋನೋಕಾಫ್ ಪ್ಲಸ್ ನ ಒಟ್ಟು 156 ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ. ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಶ್ಲಾಘಿಸಿದ್ದಾರೆ.