ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ 23 ಅಭ್ಯರ್ಥಿಗಳಿಂದ 31 ನಾಮಪತ್ರ ಸಲ್ಲಿಕೆಯಾಗಿದ್ದು, ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ಗ್ರಾಮಾಂತರದಲ್ಲಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಚುನಾವಣಾಧಿಕಾರಿಗೆ ಸಲ್ಲಿಸಿದರು.
READ | ವಿಜಯೇಂದ್ರ, ಕುಮಾರ, ಮಧು, ಬೇಳೂರು ಆಸ್ತಿ ಎಷ್ಟು? ಬಹುಕೋಟಿ ಒಡೆಯರಿವರು
ಅಶೋಕ್ ನಾಯ್ಕ್ ಶಕ್ತಿ ಪ್ರದರ್ಶನ
ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕ್ ನಾಯ್ಕ್ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು. ಅದಕ್ಕೂ ಮುನ್ನ ಬೆಳಗ್ಗೆ ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಡೊಳ್ಳು ಹಾಗೂ ಚಂಡೆ ವಾದನ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಬಿಜೆಪಿಯ ಥೀಮ್ ಸಾಂಗ್ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿತ್ತು. ಎತ್ತಿನ ಗಾಡಿಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಕೇಸರಿ ಶಾಲು, ಪೇಟ ಧರಿಸಿ ಬಿಜೆಪಿ ಪಕ್ಷದ ಬಾವುಟ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ, ಉತ್ತರಾಖಂಡ ಮಾಜಿ ಎಂಎಲ್ಎ ಮುಖೇಶ್ ಸಿಂಗ್ ಕೋಲಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ, ಡಾ. ಧನಂಜಯ ಸರ್ಜಿ, ಮಂಡಲ ಅಧ್ಯಕ್ಷ ರತ್ನಾಕರ ಶೆಣೈ, ಮಂಜುನಾಥ್ ಕಲ್ಲಜ್ಜನಾಳ್ ಸೇರಿದಂತೆ ಗ್ರಾಮಾಂತರ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚಿನ ಬೆಂಬಲ, ಜನರ ಪ್ರೀತಿ ವ್ಯಕ್ತವಾಗಿದೆ. ಸಾವಿರಾರು ಕಾರ್ಯಕರ್ತರು ಆಗಮಿಸುವ ಮೂಲಕ ಮತ್ತೊಮ್ಮೆ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂಬುದನ್ನು ತೋರಿಸಿದ್ದಾರೆ.
– ಕೆ.ಬಿ.ಅಶೋಕನಾಯ್ಕ, ಬಿಜೆಪಿ ಅಭ್ಯರ್ಥಿ, ಶಿವಮೊಗ್ಗ ಗ್ರಾಮಾಂತರ
ರವೀಂದ್ರನಗರ ದೇವಸ್ಥಾನದಲ್ಲಿ ಪೂಜೆ
ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯಾನಾಯ್ಕ್ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ರವೀಂದ್ರ ನಗರದಿಂದ ಮೆರವಣಿಗೆಯಲ್ಲಿ ಬಂದು ತಾಲೂಕು ಕಚೇರಿಯಲ್ಲಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಪೂಜೆ ಸಲ್ಲಿಸಿ, ಅಲ್ಲಿಂದ ಮೆರವಣಿಗೆಯಲ್ಲಿ ಸಾಗಿದರು. ಅವರ ಜೊತೆಗೆ ನೂರಾರು ಲಂಬಾಣಿ ಮಹಿಳೆಯರು ವಿಶಿಷ್ಟ ಲಂಬಾಣಿ ನೃತ್ಯ ಮಾಡಿದರು. ಘೋಷಣೆ ಕೂಗಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಶಿವಾ ನಾಯ್ಕ, ನಾಗರಾಜ ಕಂಕಾರಿ, ಪಾಲಾಕ್ಷಿ, ಪುಷ್ಪಾ, ರಾಜಣ್ಣ, ಸೇರಿದಂತೆ ಹಲವರಿದ್ದರು.
ಶಾರದಾ ಪೂರ್ಯಾನಾಯ್ಕ್, ನನ್ನ ಗೆಲುವು ನಿಶ್ಚಿತ. ಗ್ರಾಮೀಣ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ. ಈ ಬಾರಿ ಜೆಡಿಎಸ್ ಅನ್ನು ಗೆದ್ದೇ ಗೆಲ್ಲಿಸುತ್ತಾರೆ. ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ ಅದು ಜನರ ಮನಸ್ಸಿನಲ್ಲಿದೆ. ನಾನು ಗೆದ್ದು ಬಂದರೆ ಮತ್ತಷ್ಟು ಅಭಿವೃದ್ಧಿ ಮಾಡುವೆ.
– ಶಾರದಾ ಪೂರ್ಯಾನಾಯ್ಕ್, ಜೆಡಿಎಸ್ ಅಭ್ಯರ್ಥಿ, ಶಿವಮೊಗ್ಗ ಗ್ರಾಮಾಂತರ
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಾಮ ಪತ್ರ ಸಲ್ಲಿಸಿದರು.
ಪಟ್ಟಣದ ಕುಶಾವತಿ ಪಾರ್ಕ್ ನಿಂದ ಐದು ಸಾವಿರಕ್ಕೂ ಹೆಚ್ಚು ಬಿಜೆಪಿಯ ಕಾರ್ಯಕರ್ತರು, ಮುಖಂಡರೊಂದಿಗೆ ಆಗಮಿಸಿದ ಆರಗ ಜ್ಞಾನೇಂದ್ರ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಬಿಜೆಪಿಯ ಹಿರಿಯ ಮುಖಂಡ ನಾಗರಾಜ್ ಶೆಟ್ಟಿ,ತಾ.ಬಿಜೆಪಿ ಅಧ್ಯಕ್ಷ ರಾಘವೇಂದ್ರ ನಾಯಕ್, ಸಂದೇಶ್ ಜವಳಿ ಉಪಸ್ಥಿತರಿದ್ದರು.
ಇದು ನನ್ನ ಕೊನೆಯ ಚುನಾವಣೆಯಾಗಿದ್ದು ಕ್ಷೇತ್ರದ ಜನತೆ ಈ ಬಾರಿ ಗೆಲ್ಲಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷವನ್ನು ಕ್ಷೇತ್ರದ ಜನತೆ ನಂಬುತ್ತಿಲ್ಲ. ನನ್ನನ್ನು ಸೋಲಿಸಲೆಂದು ಕಾಂಗ್ರೆಸ್ ಪಕ್ಷದ ಇಬ್ಬರು ಮುಖಂಡರು ಒಂದಾಗಿದ್ದಾರೆ. ಆದರೆ ಕ್ಷೇತ್ರದ ಜನತೆಯ ಆಶೀರ್ವಾದ ನನ್ನ ಮೇಲಿದೆ.
– ಆರಗ ಜ್ಞಾನೇಂದ್ರ, ಬಿಜೆಪಿ ಅಭ್ಯರ್ಥಿ, ತೀರ್ಥಹಳ್ಳಿ
ಸರಳತೆಯೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ ಕಿಮ್ಮನೆ
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಸರಳತೆಯಿಂದ ಪಕ್ಷದ ಕಚೇರಿಯಿಂದ ನಡೆದು ಬಂದು ತೀರ್ಥಹಳ್ಳಿ ತಾಲೂಕು ಕಚೇರಿಯ ಚುನಾವಣಾ ಕೇಂದ್ರದಲ್ಲಿ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡರಾದ ಡಾ.ಆರ್.ಎಂ.ಮಂಜುನಾಥ್ ಗೌಡ, ಜಿ.ಎಸ್.ನಾರಾಯಣ ರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಮುಡುಬ ರಾಘವೇಂದ್ರ, ಜೀನಾ ವಿಕ್ಟರ್ ಡಿಸೋಜ ಉಪಸ್ಥಿತರಿದ್ದರು.
ಹಿರಿಯ ಮುಖಂಡ ಡಾ.ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಕ್ಷೇತ್ರದ ಮೂಲೆ ಮೂಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಹೆಚ್ಚಾಗಿದೆ. ನಮ್ಮಲ್ಲಿ ಒಗ್ಗಟ್ಟಿನ ಬಲವಿದ್ದು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಗೆಲುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೆ ನಮ್ಮ ಗುರಿ. ರಾಜ್ಯ ಜನತೆ ಭ್ರಷ್ಟ ಬಿಜೆಪಿ ಸರ್ಕಾರದ ಬಗ್ಗೆ ಬೇಸತ್ತಿದ್ದಾರೆ. ಪ್ರತಿಯೊಂದನ್ನು ನಾನೇ ಅಭಿವೃದ್ದಿ ಮಾಡಿದ್ದು ಎಂದು ಸುಳ್ಳು ಹೇಳುವ ಆರಗ ಜ್ಞಾನೇಂದ್ರ ಶಿವಮೊಗ್ಗ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಯಾರ ಅವಧಿಯಲ್ಲಿ ಕೆಲಸವಾಗಿದ್ದು ಎಂಬುದನ್ನು ಸತ್ಯವಾಗಿ ಹೇಳಲಿ. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯುವುದು ಖಚಿತ.
– ಕಿಮ್ಮನೆ ರತ್ನಾಕರ್, ಕಾಂಗ್ರೆಸ್ ಅಭ್ಯರ್ಥಿ, ತೀರ್ಥಹಳ್ಳಿ