ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಯುವತಿಯೊಬ್ಬಳು ಕ್ರೈಸ್ತ ಸನ್ಯಾಸಿನಿ (ನನ್) ಆಗುವುದಕ್ಕಾಗಿ ಅಪಹರಣದ ನಾಟಕವಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಚನ್ನಗಿರಿ ತಾಲೂಕಿನ ಗ್ರಾಮವೊಂದರ ಯುವತಿಯು ಕಿಡ್ನ್ಯಾಪ್ ನಾಟಕವಾಡಿದ್ದು, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಮಗಳ ಈ ಕೃತ್ಯಕ್ಕೆ ಪೋಷಕರು ಬೆಚ್ಚಿಬಿದ್ದಿದ್ದಾರೆ.
ಏನಿದು ಘಟನೆ?
20 ವರ್ಷ ಯುವತಿಯು ನಗರದ ಕಾಲೇಜುವೊಂದರಲ್ಲಿ ಫಿಸಿಯೋ ಥೆರಫಿ ವ್ಯಾಸಾಂಗ ಮಾಡುತ್ತಿದ್ದಳು. ಮೇ 14ರ ಸಂಜೆ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಥಳವೊಂದರಿಂದ ಕಾಣೆಯಾಗಿದ್ದು, ಆಕೆಯ ಮೊಬೈಲ್ ನಂಬರ್ ನಿಂದ ಅವರ ತಂದೆಗೆ ₹20 ಲಕ್ಷ ಒತ್ತೆ ಹಣವನ್ನು ತಯಾರು ಇಟ್ಟುಕೊಳ್ಳುವಂತೆ ತಪ್ಪಿದ್ದಲ್ಲಿ ಯುವತಿಯನ್ನು ಕೊಲ್ಲುವುದಾಗಿ ಎಸ್ಎಂಎಸ್ ಬಂದಿದ್ದು, ಈ ಕುರಿತಂತೆ ಯುವತಿಯ ತಂದೆ ನೀಡಿದ ದೂರಿನ ಪ್ರಕರಣ ದಾಖಲಿಸಲಾಗಿತ್ತು.
ತನಿಖೆಗೆ ವಿಶೇಷ ತಂಡ ನಿಯೋಜನೆ
ಅಪಹರಣಕ್ಕೊಳಗಾದ ಯುವತಿ ಮತ್ತು ಆರೋಪಿತರ ಪತ್ತೆಗಾಗಿ ಜಯನಗರ ಪೊಲೀಸ್ ಠಾಣೆಯ ಮತ್ತು ರೌಡಿ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಪ್ರಕರಣದ ತನಿಖೆಯ ಸಮಯದಲ್ಲಿ ಯುವತಿಯು ತಾನೇ ಖುದ್ದಾಗಿ ಎ.ಟಿ.ಎಂನಿಂದ ₹5,000 ಹಣವನ್ನು ವಿಥ್ ಡ್ರಾ ಮಾಡಿಕೊಂಡು ಹೋಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದರಿಂದ ಯುವತಿ ಮೊಬೈಲ್ ನಂಬರ್ ನ ಜಾಡು ಹಿಡಿದ ತನಿಖಾ ತಂಡವು ಯುವತಿಯನ್ನು ಹುಬ್ಬಳ್ಳಿಯ ವಿ.ಆರ್.ಎಲ್ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿರುತ್ತಾಳೆ.
“ಎಸ್.ಎಸ್.ಎಲ್.ಸಿ ಓದುವಾಗ ಕ್ರಿಶ್ಚಿಯನ್ ಸನ್ಯಾಸಿನಿಗಳು ಸಮಾಜಕ್ಕೆ ನೀಡುತ್ತಿದ್ದ ಸೇವೆಯಿಂದ ಪ್ರಭಾವಿತರಾಗಿ ತಾನು ಕೂಡ ಅವರಂತೆ ಸೇವೆ ಮಾಡಬೇಕೆಂದು ನಿರ್ಧರಿಸಿದ್ದೇನು. ನಂತರ ಪಿ.ಯು.ಸಿ ವಿಧ್ಯಾಭ್ಯಾಸಕ್ಕಾಗಿ ಶಿವಮೊಗ್ಗದ ಖಾಸಗಿ ಕಾಲೇಜು ಸೇರಿಸಿದ್ದು, ಪಿಯುಸಿಯಲ್ಲಿ ಶೇ.90 ಅಂಕಗಳನ್ನು ಗಳಿಸಿರುತ್ತೇನೆ. ಆ ಸಮಯದಲ್ಲಿ ಕೋವಿಡ್’ನಿಂದಾಗಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಗದೇ ಶಿವಮೊಗ್ಗದಲ್ಲೇ ಕಾಲೇಜುವೊಂದರಲ್ಲಿ ಫಿಸಿಯೋ ಥೆರಪಿ ಕೋರ್ಸ್’ಗೆ ಸೇರಿದ್ದೆ. ಈ ಸಮಯದಲ್ಲಿ ನಮ್ಮ ಕಾಲೇಜಿನಲ್ಲಿ ಓದುತ್ತಿದ್ದ ಕೇರಳದ ಕ್ರಿಶ್ಚಿಯನ್ ವಿಧ್ಯಾರ್ಥಿನಿಯವರೊಂದಿಗೆ ನನಗೆ ಪರಿಚಯವಾಗಿರುವುದಾಗಿ ಅವಳು ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಕಟ್ಟು ಕಥೆ ಹೇಳಿ ಸಿಲುಕಿದ ಯುವತಿ
ಮೇ 14ರಂದು ಮುಂಬೈನ ಕ್ಯಾಥೊಲಿಕ್ ಚರ್ಚ್ಗೆ ಹೋಗಿ ಅಲ್ಲಿ ಕ್ರಿಶ್ಚಿಯನ್ ಸನ್ಯಾಸಿನಿಯಾಗಿ ಸೇರಿಕೊಂಡು ಸಮಾಜ ಸೇವೆ ಮಾಡುವ ಉದ್ದೇಶದಿಂದ, ಶಿವಮೊಗ್ಗದಿಂದ ಹೊರಟು ಶಿವಮೊಗ್ಗದಿಂದ ಮುಂಬೈಗೆ ಟಿಕೆಟ್ ಬುಕ್ಕಿಂಗ್ ಸಿಗದೇ ಇದ್ದುದ್ದರಿಂದ ತೀರ್ಥಹಳ್ಳಿಯಿಂದ ಶೃಂಗೇರಿ ಬೆಂಗಳೂರು ಹುಬ್ಬಳ್ಳಿಗೆ ಬಂದು ತಲುಪಿದನು. ಈ ಮಧ್ಯೆ ಮುಂಬೈನಲ್ಲಿ ನೆಲೆಸಲು ಹಣದ ಅವಶ್ಯಕತೆ ಇರುವುದರಿಂದ, ನಿಜ ಹೇಳಿದರೆ ತಂದೆಯವರು ಹಣ ನೀಡುವುದಿಲ್ಲ ಎಂದು ತಿಳಿದು ಸುಳ್ಳು ಕಥೆಯನ್ನು ಸೃಷ್ಟಿ ಮಾಡಿ ಅಪಹರಣ ಆಗಿರುವುದಾಗಿ ನಂಬಿಸಿ, ₹20 ಲಕ್ಷ ಒತ್ತೆ ಹಣಕ್ಕಾಗಿ ಬೇಡಿಕೆ ಇಡುವ ಮೆಸೇಜ್ ನ್ನು ತನ್ನದೆ ಮೊಬೈಲ್ ನಿಂದ ತಂದೆಯ ಮೊಬೈಲ್ ಗೆ ಅವಳೇ ಕಳುಹಿಸಿದ್ದು, ಹುಬ್ಬಳ್ಳಿಯಲ್ಲಿ ವಿ.ಆರ್.ಎಲ್ ಬಸ್ ನಲ್ಲಿ ಮುಂಬೈಗೆ ಟಿಕೆಟ್ ಬುಕ್ ಮಾಡಿಕೊಂಡು ಬಸ್ಗಾಗಿ ಕಾಯುತ್ತಿದ್ದಾಗ ಪೊಲೀಸರು ಬಂದು ನನ್ನನ್ನು ವಶಕ್ಕೆ ಪಡೆದಿರುತ್ತಾರೆಂದು ತಿಳಿಸಿರುತ್ತಾಳೆ.
ನಂತರ ಯುವತಿಯಿಂದ ಹೇಳಿಕೆಯನ್ನು ಪಡೆದುಕೊಂಡು ಹಾಗೂ ಆಕೆಗೆ ಆಪ್ತ ಸಮಾಲೋಚನೆಗೆ ಒಳಪಡಿಸಿ, ಆಕೆಯ ಪೋಷಕರ ಸುಪರ್ದಿಗೆ ಒಪ್ಪಿಸಲಾಗಿದೆ.
ಕಿಡ್ನ್ಯಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟವರ ವಿರುದ್ಧ ದಾಖಲಾಯ್ತು ಎಫ್.ಐ.ಆರ್.