ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ ಲಭಿಸಬಹುದೆಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ಸೊರಬ ಶಾಸಕ ಮಧು ಬಂಗಾರಪ್ಪ(Madhu Bangarappa)ಗೆ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಜಿಲ್ಲೆಯಿಂದ ಏಕೈಕ ವ್ಯಕ್ತಿಗೆ ಸಚಿವ ಪಟ್ಟ ಸಿಕ್ಕಂತಾಗಿದೆ.
ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಮೂರು ಸ್ಥಾನಗಳನ್ನು ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಅದರಲ್ಲಿ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ (B.K.Sangameshwar) ಅವರಿಗೆ ಸಚಿವ ಸ್ಥಾನ ಸಿಗಬಹುದು ಎನ್ನಲಾಗುತ್ತಿತ್ತು. ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಅವರೇ ಭದ್ರಾವತಿ(Bhadravathi)ಗೆ ಬಂದಾಗ ಬಿ.ಕೆ.ಸಂಗಮೇಶ್ವರ್ ಅವರಿಗೆ ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದರು. ಸಹಜವಾಗಿಯೇ ಕ್ಷೇತ್ರದಲ್ಲಿ ಅವರ ಪರವಾಗಿ ಅಭಿಮಾನಿಗಳು, ಕಾರ್ಯಕರ್ತರು ಮಂತ್ರಿ ಸ್ಥಾನ ಕೊಡಬೇಕೆಂದು ಆಗ್ರಹಿಸುತ್ತಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಜಿಲ್ಲೆಯಿಂದ ಒಬ್ಬರಿಗೆ ಮಾತ್ರ ಮಂತ್ರಿಗಿರಿ ನೀಡಿದೆ.
ಸಾಗರದಲ್ಲಿ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಅವರನ್ನು ಸೋಲಿಸಿ ಬೇಳೂರು ಗೋಪಾಲಕೃಷ್ಣ (Beluru Gopalakrishna) ಶಾಸಕರಾಗಿದ್ದರು. ಮಧು ಬಂಗಾರಪ್ಪ, ಸಂಗಮೇಶ್ವರ್ ಮತ್ತು ಬೇಳೂರು ಈ ಮೂವರಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬಹುದೆಂಬ ಲೆಕ್ಕಾಚಾರ ನಡೆಯುತ್ತಿತ್ತು. ಆದರೀಗ, ಅದಕ್ಕೆ ತೆರೆಬಿದ್ದಿದೆ.
READ | ಹೋಟೆಲ್, ಲಾಡ್ಜ್, ಗ್ಯಾರೇಜ್’ಗಳ ಮೇಲೆ ಹದ್ದಿನ ಕಣ್ಣಿಡಲು ಡಿಸಿ ಸೂಚನೆ, ಕಾರಣವೇನು?
ಮಧು ಬಂಗಾರಪ್ಪ ಪಸ್ಲ್ ಪಾಯಿಂಟ್
- ಕಡಿಮೆ ಅವಧಿಯಲ್ಲೇ ರಾಜ್ಯಮಟ್ಟದಲ್ಲಿ ಖ್ಯಾತಿ ಮಧು ಬಂಗಾರಪ್ಪ ಜೆಡಿಎಸ್ನಿಂದ ಕಾಂಗ್ರೆಸ್’ಗೆ ಬಂದಿದ್ದರೂ ಕೂಡ ಕಡಿಮೆ ಅವಧಿಯಲ್ಲಿಯೇ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು.
- ಹೈಕಮಾಂಡ್ ಸಂಪರ್ಕ ಇವರಿಗೆ ಸದಾ ಇತ್ತು. ತಮ್ಮ ಸಹೋದರ ಕುಮಾರ್ ಬಂಗಾರಪ್ಪ ಅವರನ್ನು ಅತ್ಯಧಿಕ ಮತಗಳಿಂದ ಸೋಲಿಸಿದ್ದರು.
- ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿದ್ದ ಮಧು ಬಂಗಾರಪ್ಪ ಇಡೀ ರಾಜ್ಯದಲ್ಲಿ ಓಡಾಟ ನಡೆಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. ಇವರನ್ನೇ ಜಿಲ್ಲಾ ಉಸ್ತುವಾರಿ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
- ಮಧು ಬಂಗಾರಪ್ಪ ಅವರಿಗೆ ಜನಪ್ರಿಯ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ನಾಮಬಲವೂ ಇರುವುದರಿಂದ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಅನುಕೂಲವಾಗಿದೆ.
ರಾಜಕೀಯವಷ್ಟೇ ಅಲ್ಲ ಸಿನಿಮಾದಲ್ಲೂ ಕೀರ್ತಿ
ಆಕಾಶ್ ಆಡಿಯೋ ಕನ್ನಡ ಚಿತ್ರರಂಗದ ಹೆಮ್ಮೆ. ಮಧು ಬಂಗಾರಪ್ಪ ಅವರು ಈ ಸಂಸ್ಥೆಯನ್ನು ಪೋಷಿಸಿದ್ದಾರೆ. ಇದು ಕನ್ನಡ ಚಲನಚಿತ್ರೋದ್ಯಮಕ್ಕೆ ಸಾಕಷ್ಟು ಪ್ರತಿಭೆಗಳನ್ನು ತಂದಿದೆ. ಅವರು ಹಲವಾರು ಚಲನಚಿತ್ರಗಳನ್ನು ನಟಿಸಿ ನಿರ್ಮಿಸಿದ್ದಾರೆ. ಅದರಲ್ಲಿ “ಕಲ್ಲರಳಿ ಹೂವಾಗಿ’ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಲಭಿಸಿದೆ.
READ | ಶಿವಮೊಗ್ಗದ ಸ್ಪಾ ಒಂದರಲ್ಲಿ ವೇಶ್ಯಾವಾಟಿಕೆ, ಇಬ್ಬರ ಬಂಧನ, 6 ಯುವತಿಯರ ರಕ್ಷಣೆ
ಮಧು ಬಂಗಾರಪ್ಪ ಅವರು ಜನತಾ ದಳದಿಂದ ಕಾಂಗ್ರೆಸ್ಗೆ ಸೇರಿದ್ದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಗೌರವ ಸದಸ್ಯರೂ ಆಗಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ಅವರು ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷರಾಗಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಪ್ರತಿನಿಧಿಸುವ ಐತಿಹಾಸಿಕ ವಿಜಯದೊಂದಿಗೆ ವಿಜಯಶಾಲಿಯಾಗಿದ್ದರು.
ಇದೀಗ ಅವರು ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮತ್ತು ಸಚಿವರಾಗಿದ್ದಾರೆ. ಕ್ಷೇತ್ರದ ಜನರ ಆಶಯಗಳಿಗೆ ಅವರು ಸ್ಪಂದಿಸುವ ಎಲ್ಲ ನಿರೀಕ್ಷೆಗಳಿವೆ.